ಕೋಲಾರ:- ಮಕ್ಕಳನ್ನ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ರಾಯಚೂರು ಮೂಲದ ಜ್ಯೋತಿಷಿ ವಿಷ್ಣು ರಾವ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಆರೋಪಿಯನ್ನು ಬಂಧಿಸಲಾಗಿದ್ದು, ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಬಂಗಾರಪೇಟೆಯ ದೇಶಿಹಳ್ಳಿಯ ನಾಲ್ವರು ಬಾಲಕರನ್ನು ವಿಷ್ಣು ರಾವ್ ಕಿಡ್ನಾಪ್ ಮಾಡಿದ್ದನು. ಅಲ್ಲದೆ ಮಕ್ಕಳನ್ನು ಲಾಡ್ಜ್ನಲ್ಲಿ ಕೂಡಿ ಹಾಕಿ ಪೋಷಕರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ.
ಅಪಹರಣಗೊಂಡ ಬಾಲಕ ಲಿಖಿತ್ ತಾಯಿ ಸುಮಂಗಲಿ ಎನ್ನುವವರು ತನ್ನ ಮಗ ಲಿಖಿತ್ ಹಾಗೂ ಮೂವರು ಬಾಲಕರು ಅಪಹರಣಗೊಂಡಿರುವ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಎಚ್ಚೆತ್ತ ಬಂಗಾರಪೇಟೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ರಕ್ಷಿಸಿದ್ದಾರೆ.
ಸುಮಂಗಲಿ ಅವರು ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿ, ಸ್ವಾಮೀಜಿ ವಿಷ್ಣು ರಾವ್ ಲಾಡ್ಜ್ವೊಂದರಲ್ಲಿ ಕೂಡಿ ಹಾಕಿ ಹಣಕ್ಕೆ ಬೇಡಿಕೆ ಇಡುತ್ತಿರುವುದನ್ನು ಪತ್ತೆ ಮಾಡಿದ್ದಾರೆ. ಅಲ್ಲದೆ ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದ ಬಳಿ ಆರೋಪಿಯನ್ನು ಬಂಧಿಸಿದ್ದಾರೆ. 16 ವರ್ಷದ ಲಿಖಿತ್, ಶರತ್, ಮುಬಾರಕ್ ಹಾಗೂ ಹೇಮಂತ್ ಕುಮಾರ್ ಎಂಬ ಬಾಲಕರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಬಂಧನವಾಗಿರುವ ರಾಯಚೂರು ಮೂಲದ ಜ್ಯೋತಿಷಿ ವಿಷ್ಣು ರಾವ್, ನಿಮ್ಮ ಟೈಂ ಸರಿಯಿಲ್ಲ ಎಂದು ವಾಮಾಚರಕ್ಕೆ ಮುಂದಾಗಿದ್ದ ಎಂದು ತಿಳಿದುಬಂದಿದೆ. ಸ್ವಾಮೀಜಿ ಬಳಿಯಿದ್ದ ನಿಂಬೆ ಹಣ್ಣು, ಮೂಳೆ ಸೇರಿದಂತೆ ವಾಮಾಚರಕ್ಕೆ ಬಳಸಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.