ವಿಜಯಸಾಕ್ಷಿ ಸುದ್ದಿ, ಗದಗ: ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿರುವ ಪಂ. ಪುಟ್ಟರಾಜ ಗವಾಯಿಗಳ ಸ್ಮಾರಕ ಭವನ ನಿರ್ಮಾಣ ಕಾಮಗಾರಿ ವಿಳಂಬಕ್ಕೆ ಕಾರಣವಾದ ಸರಕಾರದ ಧೋರಣೆಯನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಶುಕ್ರವಾರ ಸಾಂಕೇತಿಕ ಭಿಕ್ಷಾಟನೆ ನಡೆಸುವ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ನೇತೃತ್ವದಲ್ಲಿ ಶುಕ್ರವಾರ ಜೆಡಿಎಸ್ ಕಾರ್ಯಕರ್ತರು ವೀರೇಶ್ವರ ಪುಣ್ಯಾಶ್ರಮದಿಂದ ಎಪಿಎಂಸಿ ಹಾಗೂ ಮುಖ್ಯ ರಸ್ತೆಯಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಂದ ಭಿಕ್ಷೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೆಂಕನಗೌಡ ಗೋವಿಂದಗೌಡ್ರ, ನಗರದ ಹೃದಯ ಭಾಗದಲ್ಲಿರುವ ಪುಟ್ಟರಾಜ ಸ್ಮಾರಕ ಭವನ ಅರ್ಧಕ್ಕೆ ನಿಂತಿದೆ. ಯಡಿಯೂರಪ್ಪ ಸರಕಾರ ಅಧಿಕಾರದಲ್ಲಿದ್ದಾಗ ಭವನಕ್ಕಾಗಿ 5 ಕೋಟಿ ರೂ. ಬಿಡುಗಡೆಯಾಗಿತ್ತು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಭವನ ನಿರ್ಮಾಣದ ಬಾಕಿ ಕಾಮಗಾರಿಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಚ್.ಕೆ. ಪಾಟೀಲರು ಸ್ಮಾರಕ ಭವನ ನಿರ್ಮಾಣಕ್ಕೆ ಅನುದಾನ ನೀಡುವ ಭರವಸೆ ನೀಡಿದ್ದರಾದರೂ ಈವರೆಗೂ ಈಡೇರಿಲ್ಲ ಎಂದರು.
ಶುಕ್ರವಾರ ಸಾಂಕೇತಿಕವಾಗಿ ನಡೆದ ಭಿಕ್ಷಾಟನೆಯಲ್ಲಿ ಸ್ವೀಕರಿಸಿದ 2350 ರೂ.ಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ತಲುಪಿಸಲಾಗುವುದು ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಜೋಸೆಫ್ ಉದೋಜಿ, ಗಿರೀಶ ಸಂಶಿ, ಎಂ.ಎಸ್. ಪರ್ತವಗೌಡ್ರ, ಪ್ರಫುಲ್ ಪುಣೇಕರ, ಸಂತೋಷ ಪಾಟೀಲ, ರಮೇಶ ಹುಣಸಿಮರದ, ಕುಮಾರ ಜಿಗಳೂರ, ಮುತ್ತು ದರೋಜಿ, ಮೌಲಾಸಾಬ, ಮಂಜುನಾಥ ಹುಲ್ಲೂರ, ಬೀರಪ್ಪ ಪುರದ, ನಿಂಗಪ್ಪ ಸೋಮನಕಟ್ಟಿ, ಸೈಯದ ಹಳ್ಳಿಕೇರಿ, ಖಾಜಾಸಾಬ ಕಿತ್ತೂರ ಮುಂತಾದವರಿದ್ದರು.
ಮುಂಬರುವ ಬಜೆಟ್ನಲ್ಲಿ ರಾಜ್ಯ ಸರಕಾರ ಸ್ಮಾರಕ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡದಿದ್ದರೆ ಅವಳಿ ನಗರದ ಮನೆ ಮನೆಗೆ ಹೋಗಿ ಭಿಕ್ಷಾಟನೆ ಮಾಡಿ ಸರಕಾರದ ಮಾನ ಹರಾಜು ಹಾಕುತ್ತೇವೆ. ಅಲ್ಲದೆ, ಭವನ ಪೂರ್ಣಗೊಳಿಸಲು ಬೇಕಾದ ಹಣವನ್ನು ಭಿಕ್ಷಾಟನೆ ಮೂಲಕವೇ ಸಂಗ್ರಹಿಸಿ ಅದನ್ನು ಸರಕಾರಕ್ಕೆ ಕೊಟ್ಟು, ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಲಾಗುವುದು.
– ವೆಂಕನಗೌಡ ಗೋವಿಂದಗೌಡ್ರ.
ಜೆಡಿಎಸ್ ರಾಜ್ಯ ವಕ್ತಾರರು.