ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರದ ವ್ಯಾಪ್ತಿಯಲ್ಲಿ ಬರುವ ಸ.ನಂ 594ರ ಆಸ್ತಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಬಡವರು ವಾಸವಾಗಿದ್ದು, ಭೂ ಮಾಫಿಯಾಗಳು ಬಡ ಜನರನ್ನು ಒಕ್ಕಲೆಬ್ಬಿಸುವ ಕುತಂತ್ರ ನಡೆಸುತ್ತಿರುವುದನ್ನು ಖಂಡಿಸಿ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಭೂಗಳ್ಳರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಮಾತನಾಡಿ, ಕಳೆದ 25 ವರ್ಷಗಳಿಂದ ನಗರದ ಕೂಲಿ ಕಾರ್ಮೀಕರು, ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಮತ್ತು ಹಿಂದುಳಿದ ಸಮುದಾಯದ ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತ ಬಂದಿದ್ದಾರೆ. ನವನಗರ ಸ್ಲಂ ಪ್ರದೇಶದಲ್ಲಿ ನೂರಾರು ಬಡ ಕುಟುಂಬಗಳು ಯಾವುದೇ ನಾಗರಿಕ ಸೌಲಭ್ಯಗಳು ಇಲ್ಲದೇ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಹಿಂದುಳಿದ ಪ್ರದೇಶವಾಗಿರುವ ನವನಗರ ಪ್ರದೇಶವನ್ನು ಸ್ಲಂ ಎಂದು ಘೋಷಣೆ ಮಾಡಲು ಈಗಾಗಲೇ ಸ್ಲಂ ಬೋರ್ಡ್ ನಿಂದ ದಾಖಲೆಗಳನ್ನು ಪಡೆದುಕೊಂಡು ಸ್ಲಂ ಕಾಯ್ದೆ 1973 ಪ್ರಕಾರ ಅಧಿಕೃತವಾಗಿ ಘೋಷಣೆ ಮಾಡುವ ಹಂತದಲ್ಲಿದೆ. ಆದರೆ ಇತ್ತೀಚೆಗೆ ಭೂ ಮಾಲಿಕನ ಹಿಂಬಾಲಕರು ಹಾಗೂ ಭೂ ಮಾಫಿಯಾಗಳು ಸ್ಥಳೀಯ ನಿವಾಸಿಗಳಿಗೆ ಮನೆಗಳನ್ನು ತೆರವುಗೊಳಿಸಬೇಕೆಂದು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಸ್ಲಂ ಸಮಿತಿ ಮುಖಂಡರಾದ ಶರಣಪ್ಪ ಸೂಡಿ, ಇಬ್ರಾಹಿಂ ಮುಲ್ಲಾ, ಮೆಹಬೂಬಸಾಬ ಬಳ್ಳಾರಿ, ಮೌಲಾಸಾಬ ಗಚ್ಚಿ, ವೆಂಕಟೇಶ ಬಿಂಕದಕಟ್ಟಿ, ಖಾಜಾಸಾಬ ಇಸ್ಮಾಯಿಲನವರ, ಸಲೀಂ ಹರಿಹರ, ಅಶೋಕ ಗುಮಾಸ್ತೆ, ಗೌಸಮೂದ್ದಿನ ಅಕ್ಕಿ, ಮೆಹರುನಿಸಾ ಡಂಬಳ, ಸಂಜು ಬೀಡದೆ, ಮೆಹಬೂಬ ಹುಯಿಲಗೋಳ, ಖಾಜಾಸಾಬ ಉಮಚಗಿ, ಶಂಕ್ರಪ್ಪ ಲಕ್ಷ್ಮೇಶ್ವರ, ಆನಂದಪ್ಪ ಮುಳಗುಂದ, ಮೈಮುನ ಬೈರಕದಾರ, ದಾದು ಗೋಸಾವಿ, ಜಂದಿಸಾಬ ಬಳ್ಳಾರಿ, ಬಸವರಾಜ ಕಳಸದ, ಜಾಫರ ಮಲಬಾರ, ದುರ್ಗಪ್ಪ ಮಣವಡ್ಡರ, ಮಂಜುನಾಥ ಶ್ರೀಗಿರಿ, ಮಕ್ತುಮಸಾಬ ಮುಲ್ಲಾನವರ, ರಿಜ್ವಾನ ಮುಲ್ಲಾ, ರವಿ ಗೋಸಾವಿ ಸೇರಿದಂತೆ ನೂರಾರು ಸ್ಲಂ ನಿವಾಸಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸ್ಥಳೀಯ ಬಡ ಹಾಗೂ ಶೋಷಿತ ಸಮುದಾಯದ ಕುಟುಂಬಗಳು ಲಕ್ಷಾಂತರ ಹಣವನ್ನು ಖರ್ಚು ಮಾಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಸ್ಲಂ ಜನರ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ನವನಗರ ಸ್ಲಂ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವ ಬಡ ಹಾಗೂ ಶೋಷಿತ ಸಮುದಾಯಗಳ ಕುಟುಂಬಗಳಿಗೆ ರಕ್ಷಣೆ ನೀಡಬೇಕು ಎಂದು ಇಮ್ತಿಯಾಜ್ ಮಾನ್ವಿ ಆಗ್ರಹಿಸಿದರು.