ಮೂಲದಲ್ಲಿಯೇ ತಾಜ್ಯ ನಿರ್ವಹಣೆಗೆ ಕ್ರಮ ವಹಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕಸ ಸಂಗ್ರಹಣೆ ಮೂಲಕ ಘನ ತಾಜ್ಯ ವಸ್ತುಗಳನ್ನು ಮೂಲದಲ್ಲಿಯೇ ವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದರ ಜೊತೆಗೆ ಗ್ರಾಮದ ಸ್ವಚ್ಛತೆಗೆ ಎಲ್ಲರೂ ಸಹಕರಿಸಬೇಕು ಎಂದು ಗದಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಸೂಚನೆ ನೀಡಿದರು.

Advertisement

ಬುಧವಾರ ಗದಗ ತಾಲೂಕಿನ ನಾಗಾವಿ ಮತ್ತು ಅಸುಂಡಿ ಗ್ರಾ.ಪಂಗಳಿಗೆ ಭೇಟಿ ನೀಡಿ, ಸ್ವಚ್ಛ ಭಾರತ ಗ್ರಾಮೀಣ ಯೋಜನೆಯಡಿ ಕಸ ಸಂಗ್ರಹಣೆಯ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಕಸ ಸಂಗ್ರಹಣೆ, ವಿಂಗಡಣೆ ಜವಾಬ್ದಾರಿಯನ್ನು ಸಂಜೀವಿನಿ ಒಕ್ಕೂಟದ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ವಹಿಸಲಾಗಿದ್ದು, ಇದರ ಸಮರ್ಪಕ ಬಳಕೆ ಕುರಿತು ಖುದ್ದಾಗಿ ನಾಗಾವಿ ಗ್ರಾ.ಪಂ ಸ್ವಚ್ಛ ವಾಹಿನಿ ನಿರ್ವಹಿಸುವ ವಾಹನ ಚಾಲಕಿಯರೊಂದಿಗೆ ವಾಹನದಲ್ಲಿ ಸಂಚರಿಸಿ, ವಾಹನ ಚಲಾಯಿಸುವ ಕುರಿತು ಮೇಲ್ವಿಚಾರಣೆ ನಡೆಸಿದರು. ಗ್ರಾಮಸ್ಥರೊಂದಿಗೆ ಕಸ ಸಂಗ್ರಹಣೆ ಮತ್ತು ನಿರ್ವಹಣೆ ಮಾಡುತ್ತಿರುವ ಬಗ್ಗೆ ಚರ್ಚಿಸಿದರು. ನಂತರ ಅಸುಂಡಿ ಗ್ರಾ.ಪಂಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಚರ್ಚಿಸಿದರು.

ಪ್ರತಿ ಗ್ರಾಮಗಳಲ್ಲಿ ತ್ಯಾಜ್ಯ ನಿರ್ವಹಣೆ ಸಮಿತಿಯನ್ನು ರಚನೆ ಮಾಡಿ ಸಮಿತಿಯ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕಾರ್ಯ ಮಾಡಲಾಗುತ್ತಿದೆ. ಆದ್ದರಿಂದ ಗ್ರಾಮೀಣ ಭಾಗದ ಜನರು ಮೂಲದಲ್ಲಿಯೇ ಕಸ ಸಂಗ್ರಹಣೆ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದರು.

ತಾ.ಪಂ ಸಹಾಯಕ ನಿರ್ದೇಶಕ (ಉಖಾ) ಕುಮಾರ ಪೂಜಾರ, ಪಿಡಿಒ ಮಂಜುಳಾ ಹೊಸಮನಿ, ಬಿ.ಎನ್. ಬಚ್ಚೆನಹಳ್ಳಿ, ಎಸ್‌ಬಿಎಂ ಯೋಜನೆಯ ಸಮಾಲೋಚಕ ಕೃಷ್ಣ ದೊಡ್ಡಮನಿ, ಗ್ರಾ.ಪಂ ಕಾರ್ಯದರ್ಶಿಗಳು, ಮಹಿಳಾ ಒಕ್ಕೂಟದ ಸದಸ್ಯರು ಇದ್ದರು.

ಸರಕಾರ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಮಹಿಳಾ ಸ್ವ-ಸಹಾಯ ಸಂಘದ ಸಹಯೋಗದೊಂದಿಗೆ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ತ್ಯಾಜ್ಯ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಆಯಾ ಗ್ರಾಮಗಳಲ್ಲಿ ತ್ಯಾಜ್ಯ ಶೇಖರಣೆ-ವಿಂಗಡಣೆ ಮಾಡುವ ಮೂಲಕ ಸ್ವಚ್ಛತೆ ಕಾಪಾಡಲಾಗುತ್ತಿದೆ ಎಂದು ಜಿ.ಪಂ ಸಿಇಓ ಭರತ್ ಎಸ್ ಹೇಳಿದರು.


Spread the love

LEAVE A REPLY

Please enter your comment!
Please enter your name here