ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಬಳಗಾನೂರು ಗ್ರಾಮದ ಶ್ರೀ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಪೂಜ್ಯಶ್ರೀ ಶಿವಶಾಂತವೀರ ಶರಣರ ಸಾನ್ನಿಧ್ಯದಲ್ಲಿ, ಮಾಜಿ ಸಚಿವರು ಹಾಗೂ ನರಗುಂದ ಶಾಸಕರಾದ ಸಿ.ಸಿ. ಪಾಟೀಲರ ನೇತೃತ್ವದಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆ ಜರುಗಿತು.
ಸಭೆಯಲ್ಲಿ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಹೆಸ್ಕಾಂನ ಗದಗ ವಲಯದ ಅಧಿಕಾರಿಗಳು ಇದೇ ಜನವರಿ 24, 25, 26ರಂದು ಮೂರು ದಿನಗಳವರೆಗೆ ನಿರಂತರ ಥ್ರಿ ಫೇಸ್ ವಿದ್ಯುತ್ ಸರಬರಾಜು ಮಾಡಬೇಕು. ವಿವಿಧ ಇಲಾಖೆಗಳ ವತಿಯಿಂದ ಶ್ರೀಮಠದ ಆವರಣದಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಬೇಕು. ಲೋಕೋಪಯೋಗಿ ಇಲಾಖೆ ವತಿಯಿಂದ ಶ್ರೀಮಠದ ಮುಖ್ಯ ರಸ್ತೆಗೆ ಮತ್ತು ಆವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೆಂಪು ಮಣ್ಣು ಹಾಕಿ, ಹರಡಿಸುವ ವ್ಯವಸ್ಥೆ ಮಾಡಿಸಬೇಕು ಎಂದರು.
ಗದಗ-ಬಳಗಾನೂರ, ರೋಣ-ಬಳಗಾನೂರ (ಸಂದಿಗವಾಡ, ಹೊನ್ನಾಪುರ, ಕದಡಿ ಮಾರ್ಗ) ಮತ್ತು ಗದಗ-ಲಿಂಗದಾಳ (ಹೊಂಬಳ, ಲಿಂಗದಾಳ), ಬಳಗಾನೂರ-ನರಗುಂದ (ಬೆಳವಣಿಕಿ-ಯಾವಗಲ್) ಮಾರ್ಗವಾಗಿ ವಿಶೇಷ ಬಸ್ಸುಗಳನ್ನು ಓಡಿಸಬೇಕು. ಈ ಜಾತ್ರೆಯ ಅಂಗವಾಗಿ ಗದಗ-ಬಳಗಾನೂರ ಒಳಗಿನ ರಸ್ತೆಯನ್ನು, ಹುಯಿಳಗೋಳ-ಗಾವರವಾಡ ರಸ್ತೆಯನ್ನು ಮತ್ತು ಹೊಂಬಳ-ಬಳಗಾನೂರ ರಸ್ತೆಯನ್ನು ತಾತ್ಕಾಲಿಕವಾಗಿ ಮತ್ತು ತುರ್ತಾಗಿ ದುರಸ್ತಿ ಮಾಡಿಸಬೇಕೆಂದು ನಿರ್ದೇಶಿಸಿದ ಶಾಸಕ ಸಿ.ಸಿ. ಪಾಟೀಲ, ಜಾತ್ರೆಯಲ್ಲಿ ಭಕ್ತರು ಹಾಗೂ ಗ್ರಾಮಸ್ಥರು ಸ್ವಚ್ಛತೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡುವ ಮೂಲಕ ಚನ್ನವೀರ ಶರಣರ ಕೃಪೆಗೆ ಎಲ್ಲರೂ ಪಾತ್ರರಾಗಬೇಕೆಂದು ಹೇಳಿದರು.
ವೇದಿಕೆ ಮೇಲೆ ಹುಲಕೋಟಿಯ ಗುರುನಾಥಗೌಡ ಓದುಗೌಡ್ರ, ಅರಹುಣಿಸಿಯ ಎಸ್.ಎಸ್. ಪಾಟೀಲ, ಗದುಗಿನ ವಸಂತಗೌಡ ಪೊಲೀಸ್ಪಾಟೀಲ, ಪ್ರದೀಪ್ ನರಗುಂದ, ಡಿ.ಸ. ಹಡಗಲಿಯ ವಸಂತ ಮೇಟಿ, ಹೊನ್ನಾಪುರದ ಶಂಕರಗೌಡ ಪಾಟೀಲ, ಲಿಂಗದಾಳದ ಪ್ರದೀಪಗೌಡ ನವಲಗುಂದ, ಹುಲ್ಲೂರಿನ ವೀರಯ್ಯಜ್ಜನವರು ಹಿರೇಮಠ ಉಪಸ್ಥಿತರಿದ್ದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬಳಗನೂರು ಗ್ರಾಮದ ಗುರು-ಹಿರಿಯರು, ಶ್ರೀಮಠದ ಭಕ್ತರು ಮುಂತಾದವರು ಪಾಲ್ಗೊಂಡಿದ್ದರು.
ಈ ಮೂರು ದಿನಗಳಂದು ಸುಮಾರು 15 ಗಾಡಿ ನೀರಿನ ಟ್ಯಾಂಕರ್ಗಳನ್ನು ಪೂರೈಕೆ ಮಾಡಬೇಕು ಮತ್ತು ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕು. ವಾಹನ ನಿಲುಗಡೆ ವ್ಯವಸ್ಥೆಯನ್ನು ಅಚ್ಚುಕಟ್ಟತನದಿಂದ ನಿಭಾಯಿಸಲು ಟ್ರಾಫಿಕ್ ಪೊಲೀಸರನ್ನು ನಿಯೋಜಿಸಬೇಕು. ಜಾತ್ರಾ ಮಹೋತ್ಸವದಲ್ಲಿ ಮುಂಜಾಗ್ರತೆಯಾಗಿ ಜನರಿಗೆ ರೋಗ-ರುಜಿನುಗಳು ಬಾರದಂತೆ ವೈದ್ಯರ ತಂಡವನ್ನು ನಿಯೋಜಿಸುವುದು ಮತ್ತು ವಿಶೇಷವಾಗಿ ಎರಡು ಅಂಬುಲೆನ್ಸ್ಗಳನ್ನು ನಿಯೋಜನೆ ಮಾಡಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಸೂಚಿಸಿದರು.



