ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರ ಸೇರಿದಂತೆ ಜಿಲ್ಲೆಯನ್ನು ಪರಿಸರ ಮಾಲಿನ್ಯ ರಹಿತ ಸ್ವಚ್ಛ ಜಿಲ್ಲೆಯಾಗಿಸಲು ಸಾರ್ವಜನಿಕರಲ್ಲಿ ತಿಳುವಳಿಕೆ ನೀಡುವ ಮೂಲಕ ಕ್ರಮ ವಹಿಸಬೇಕು ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವನಗೌಡ್ರ ಕೋಟೂರ ತಿಳಿಸಿದರು.
ಗದಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸ್ವಚ್ಛ ಭಾರತ (ನ) 2.0 ಯೋಜನೆಯ ಮಾಹಿತಿ ಶಿಕ್ಷಣ ಸಂವಹನ (ಐಇಸಿ) ಕುರಿತು ಜಿಲ್ಲಾ ಮಟ್ಟದ ಹಿರಿಯ/ಕಿರಿಯ ಆರೋಗ್ಯ ನಿರೀಕ್ಷಕರುಗಳಿಗೆ, ನೈರ್ಮಲ್ಯ ಮೇಲ್ವಿಚಾರಕರಿಗೆ, ಕಮ್ಯುನಿಟಿ ಮೊಬಲೈಜರ್ಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಹಿರಿಯ/ಕಿರಿಯ ಆರೋಗ್ಯ ನಿರೀಕ್ಷಕರು, ನೈರ್ಮಲ್ಯ ಮೇಲ್ವಿಚಾರಕರಿಗೆ, ಕಮ್ಯುನಿಟಿ ಮೊಬಲೈಜರ್ಗಳು ಸಾರ್ವಜನಿಕರಿಗೆ ಸ್ವಚ್ಛತೆಯ ಕುರಿತು ತಿಳುವಳಿಕೆ ಮೂಡಿಸಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಹಸಿ ಕಸ-ಒಣ ಕಸ ಬೇರ್ಪಡಿಸಿ ಪರಿಸರ ಮಾಲಿನ್ಯ ತಡೆಗಟ್ಟಿ ನಗರವನ್ನು ಸುಂದರ ಹಾಗೂ ಸ್ವಚ್ಛ ಜಿಲ್ಲೆಯಾಗಿಸಲು ಕ್ರಮ ಕೈಗೊಳ್ಳಬೇಕು. ಕಮರ್ಷಿಯಲ್ ಕಾಂಪ್ಲೆಕ್ಸ್, ಹೋಟೆಲ್, ಮುಖ್ಯ ಮಾರುಕಟ್ಟೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಆಸ್ಪತ್ರೆಗಳು, ಕೊಳೆಗೇರಿಗಳು ಮತ್ತು ವಸತಿ ಪ್ರದೇಶಗಳಲ್ಲಿ ಭೇಟಿ ನೀಡಿ ಅಲ್ಲಿನ ಜನರಿಗೆ ಪರಿಸರ ಸ್ವಚ್ಛತೆಯ ಕುರಿತು ತಿಳುವಳಿಕೆ ನೀಡಬೇಕು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ನರಗುಂದ ಪುರಸಭೆ ಮುಖ್ಯಾಧಿಕಾರಿ ಬ್ಯಾಳಿ, ಮುಳಗುಂದ ಪ.ಪಂ ಪ್ರಭಾರ ಮುಖ್ಯಾಧಿಕಾರಿ ಕೃಷ್ಣ, ರೋಣ ಪುರಸಭೆಯ ಮುಖ್ಯಾಧಿಕಾರಿ ರಮೇಶ ಹೊಸಮನಿ, ನರೇಗಲ್ ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಶಿರಹಟ್ಟಿ ಪ.ಪಂ ಮುಖ್ಯಾಧಿಕಾರಿ ಸವಿತಾ, ಎಸ್ಡಬ್ಲುಎಂ ಎಕ್ಸಪರ್ಟ್ ಕೊಟ್ರೇಶ ಹುಬ್ಬಳ್ಳಿ, ಡಿಯುಡಿಸಿ ಮ್ಯಾನೇಜರ್ ಬಸವರಾಜ ಗೂಳೇರ, ಜಿಲ್ಲೆಯ ಹಿರಿಯ/ಕಿರಿಯ ಆರೋಗ್ಯ ನಿರೀಕ್ಷಕರು, ನೈರ್ಮಲ್ಯ ಮೇಲ್ವಿಚಾರಕರು, ಕಮ್ಯುನಿಟಿ ಮೊಬಲೈಜರ್ಗಳು ಹಾಜರಿದ್ದರು.
ನಗರಸಭೆಯ ಸಹಾಯಕ ಕಾರ್ಯಪಾಲಕ ಅಬಿಯಂತರ (ಪರಿಸರ) ಆನಂದ ಬದಿ ಮಾಹಿತಿ ಶಿಕ್ಷಣ ಸಂವಹನದ ಬಗ್ಗೆ ತಿಳುವಳಿಕೆ ನೀಡಿದರು. ತುಮಕೂರು ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಸ್ವಚ್ಛ ಭಾರತ ಮಿಷನ್ ಯೋಜನೆಯ ಮಾರ್ಗಸೂಚಿ, ಸಮುದಾಯ ಸಜ್ಜುಗೊಳಿಸುವವರ ಪಾತ್ರ ಮತ್ತು ಜವಾಬ್ದಾರಿ, ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕುರಿತು ತಿಳುವಳಿಕೆ ನೀಡಿದರು.
ಗದಗ-ಬೆಟಗೇರಿ ನಗರಸಭೆಯ ಸಮುದಾಯ ಸಂಘಟನಾಧಿಕಾರಿ ಎಸ್.ವೈ. ಸಂಕನಗೌಡ್ರ ಸ್ವಾಗತಿಸಿ ವಂದಿಸಿದರು.
ಎಲ್ಲರೂ ತಮ್ಮ ತಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ಮತ್ತು ಆಸಕ್ತಿಯಿಂದ ನಿರ್ವಹಿಸಬೇಕು. ಕಾರ್ಯಕ್ಷಮತೆ ನೋಡಿಕೊಂಡು ಅಚ್ಚುಕಟ್ಟಾಗಿ ಕೆಲಸ ಮಾಡಿದವರಿಗೆ ಅಭಿನಂದನಾ ಪತ್ರವನ್ನು ಸಹ ನೀಡಲಾಗುವುದು ಎಂದು ಬಸವನಗೌಡ್ರ ಕೋಟೂರ ತಿಳಿಸಿದರು.



