ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಶಿಕ್ಷಣಪ್ರೇಮಿ, ತ್ಯಾಗಜೀವಿ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನವು ಗದಗ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸಗೈದು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಆಯಾ ಶಾಲೆಗೆ ಮೊದಲ 5 ಸ್ಥಾನಗಳನ್ನು ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಿದೆ.
ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ಜ. ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಶಿಕ್ಷಣ ಇಲಾಖೆಯ ಡಿಡಿಪಿಐ ಆರ್.ಎಸ್. ಬುರಡಿ, ಬಿಇಓ, ಶಾಲಾ ಮುಖ್ಯೋಪಾಧ್ಯಾಯರು, ಪ್ರತಿಷ್ಠಾನದ ಎಲ್ಲ ಪದಾಧಿಕಾರಿಗಳ ಸಹಕಾರದೊಂದಿಗೆ ಹಮ್ಮಿಕೊಂಡಿರುವ ಈ ಪ್ರತಿಭಾ ಪುರಸ್ಕಾರ ಮಾಲಿಕೆ 10 ದಿನಗಳಲ್ಲಿ ಗದಗ ನಗರ ಹಾಗೂ ಗದಗ ತಾಲೂಕಿನ ಒಟ್ಟು 30 ಶಾಲೆಗಳಿಗೆ ಭೇಟಿ ನೀಡಿ 150 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವದು ಎಂದು ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ತಿಳಿಸಿದ್ದಾರೆ.
11ನೇ ವರ್ಷದ ಈ ಪ್ರತಿಭಾ ಪುರಸ್ಕಾರವನ್ನು ಆಯಾ ಶಾಲೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಸಮ್ಮುಖದಲ್ಲಿಯೇ ನೀಡಿ ಗೌರವಿಸುವ ಪ್ರತಿಭಾ ಪುರಸ್ಕಾರ ಮಾಲಿಕೆಯು ಜೂ. 30ರಿಂದ ಜುಲೈ 10ರವರೆಗೆ ನಿರಂತರವಾಗಿ ನಡೆಯಲಿದೆ. ಪ್ರತಿಭಾ ಪುರಸ್ಕಾರ ಸಮಿತಿಯ ತಂಡವು ಆಯಾ ಗ್ರಾಮದ ಶಾಲೆಯ ಬಾಗಿಲಿಗೆ ಹೋಗಿ ನಗದು ಬಹುಮಾನ, ಅಭಿನಂದನಾ ಪತ್ರ, ಕಾಲೇಜು ಬ್ಯಾಗ್ ನೀಡಿ ಗೌರವಿಸಲಿದೆ.
ಜೂ. 30ರಂದು ಮುಳಗುಂದ, ಕಣವಿ, ಜು-1 ಹೊಂಬಳ, ಲಿಂಗದಾಳ, ಕದಡಿ. ಜು-2 ಬೆಳಹೊಡ, ಶ್ಯಾಗೋಟಿ, ಹಿರೇಹಂದಿಗೋಳ, ಜು-3 ಬೆಂತೂರು, ಹುಲಕೋಟಿ. ಜು-4 ಸೊರಟೂರ, ಯಲಿಶಿರೂರ, ಶಿರುಂಜ, ಜು-5 ಹರ್ಲಾಪೂರ, ಹಾತಲಗೇರಿ, ಜು-7 ಅಡವಿಸೋಮಾಪೂರ, ನಾಗಾವಿ, ಲಕ್ಕುಂಡಿ, ಜು-8 ಕೋಟುಮಚಗಿ, ನೀರಲಗಿ, ಕಣಗಿನಹಾಳ, ಜು-9 ಗದಗ ರಾಜೀವ ಗಾಂಧಿ ನಗರ, ಗದಗ ಎಸ್ಎಂಕೆ ನಗರ, ಬೆಟಗೇರಿ ಗಾಂಧಿ ನಗರ, ಜು-10ರಂದು ಗದಗ ಸಿದ್ಧಲಿಂಗ ನಗರ ಹಾಗೂ ಗದುಗಿನ ಸರ್ಕಾರಿ ಉರ್ದು ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಲಿವೆ.
ಪ್ರತಿಷ್ಠಾನದ ಉಪಾಧ್ಯಕ್ಷ ಶಂಕ್ರಪ್ಪ ಅಣ್ಣಿಗೇರಿ, ಕಾರ್ಯದರ್ಶಿ ಸುಭಾಸಚಂದ್ರ ಬೆಟದೂರ, ಖಜಾಂಚಿ ವಿಜಯಲಕ್ಷ್ಮೀ ಅಂಗಡಿ, ನಿರ್ದೆಶಕರಾದ ಡಾ. ಶರಣಬಸವ ಚೌಕಿಮಠ, ಡಾ. ಬಸಯ್ಯ ಬೆಳ್ಳೇರಿಮಠ, ಶಿವಪ್ಪ ಕತ್ತಿ, ಆಂಜನೇಯ ಕಟಗಿ, ಸಿದ್ಧಲಿಂಗನಗೌಡ ಪಾಟೀಲ, ಡಾ. ಬಸವರಾಜ ಚನ್ನಪ್ಪಗೌಡ್ರ ಈ ಕಾರ್ಯಕ್ಕೆ ಸಾಥ್ ನೀಡಲಿದ್ದಾರೆ.
ಗದಗ ತಾಲೂಕಿನ 30 ಸರ್ಕಾರಿ ಶಾಲೆಯ 150 ವಿದ್ಯಾರ್ಥಿಗಳಿಗೆ ಒಟ್ಟು 1 ಲಕ್ಷ 22 ಸಾವಿರ ರೂ.ಗಳ ಪ್ರತಿಭಾ ಪುರಸ್ಕಾರ ಹಾಗೂ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಟ್ಯೂಶನ್ ಪಡೆದುಕೊಂಡು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ 25 ವಿದ್ಯಾರ್ಥಿಗಳಿಗೆ ಒಟ್ಟು 35 ಸಾವಿರ ರೂ.ಗಳ ಪ್ರತಿಭಾ ಪುರಸ್ಕಾರವನ್ನು ಪ್ರತ್ಯೇಕವಾಗಿ ಅಣ್ಣಿಗೇರಿ ಗುರುಗಳ ಜನ್ಮದಿನದ ಕಾರ್ಯಕ್ರಮದಲ್ಲಿ ನೀಡಲಾಗುವದು.
– ಶಿವಕುಮಾರ ಎಚ್.ಪಾಟೀಲ.
ಅಧ್ಯಕ್ಷರು, ಪ್ರತಿಭಾ ಪ್ರತಿಷ್ಠಾನ.