ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗ ವರ್ಧಕ ಟ್ರಸ್ಟ್ ವತಿಯಿಂದ ಜೂನ್ 15ರಂದು ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ಬಸವರಾಜ ಬಿಂಗಿ ತಿಳಿಸಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿವೇಕಾನಂದ ನಗರದ ಗಾಣಿಗ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ. ಡಾ. ಸಂಗಮೇಶ ಅಸೂಟಿ, ಡಾ. ಕುನಾಲ್ ಅಳ್ಳೋಳ್ಳಿ, ಡಾ. ನಂದೆಪ್ಪಗೌಡರ, ಡಾ. ಎಂ.ಎಂ. ಜೋಶಿ, ಡಾ. ಜಯಕುಮಾರ ಬ್ಯಾಳಿ ಸಹಿತ ಅನೇಕ ತಜ್ಞರು ಶಿಬಿರ ನಡೆಸಿಕೊಡಲಿದ್ದಾರೆ ಎಂದರು.
ಮಧ್ಯಾಹ್ನ 12 ಗಂಟೆಗೆ 2024-25ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ನಿವೃತ್ತ ನೌಕರರಿ ಸನ್ಮಾನ, ಕಾರ್ಯಕ್ರಮದ ನಂತರ ಟ್ರಸ್ಟಿನ ಸರ್ವ ಸಾಧಾರಣ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಡಾ. ಮಹಾಂತ ಬಸವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸುವರು. ಹೃದಯ ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಗಾಣಿಗ ಸಮಾಜದ ಗೌರವಾಧ್ಯಕ್ಷ ಷಣ್ಮುಖಪ್ಪ ಬಡ್ನಿ, ನಿಂಗಪ್ಪ ಕೆಂಗಾರ, ಬಿ.ಬಿ. ಐನಾಪುರ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗಾಣಿಗ ಸಮಾಜದ ಮುಖಂಡರಾದ ರಮೇಶ ಮಂದಾಲಿ, ಐ.ಎಂ. ಕಿರೇಸೂರ, ಅಶೋಕ ಮಂದಾಲಿ, ಷಣ್ಮುಖಪ್ಪ ಬಡ್ನಿ, ಮುರುಗೇಶ ಬಡ್ನಿ, ಸುರೇಶ ಪವಾಡಿಗೌಡ್ರ, ಶ್ರೀಕಾಂತ ಲಕ್ಕುಂಡಿ, ಬಸನಗೌಡ ಹನುಮಂತಗೌಡ್ರ ಇತರರು ಉಪಸ್ಥಿತರಿದ್ದರು.