ಸಾರ್ವಜನಿಕರ ಅಲೆದಾಟ ತಪ್ಪಿಸಿ : ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್

0
Taluka Level Population Programme
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಯಾವುದೇ ಇಲಾಖೆಗೆ ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು, ಅಹವಾಲುಗಳನ್ನು ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ ಪರಿಶೀಲಿಸಿ ಶೀಘ್ರ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಹೇಳಿದರು.

Advertisement

ಅವರು ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಗದಗ ತಾಲೂಕಿನ ಸಾರ್ವಜನಿಕರಿಂದ ಅಹವಾಲು ಕುಂದು-ಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣ ವಿಲೇವಾರಿಯ ಲಕ್ಷ್ಮೇಶ್ವರ ತಾಲೂಕಾ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಲಾಖೆಗಳಿಗೆ ಸಾರ್ವಜನಿಕರಿಂದ ಬಂದ ಅರ್ಜಿಗಳಿಗೆ ವಿಳಂಬ ಮಾಡದೇ, ಅವರಿಗೆ ಅರ್ಜಿಯ ವಸ್ತುಸ್ಥಿತಿ, ಮಾಹಿತಿ, ಅದು ಇತ್ಯರ್ಥವಾಗುವ ವೇಳೆಯನ್ನು ಸರಿಯಾಗಿ ತಿಳಿಸಿದಲ್ಲಿ ಕಚೇರಿಗಳಿಗೆ ಅಲೆದಾಡುವದು ತಪ್ಪುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಶಿಗ್ಲಿ ಗ್ರಾಮದ ನೂರಾರು ಮಹಿಳೆಯರು ಆಗಮಿಸಿ ನಮ್ಮ ಭೂಮಿ ನಮ್ಮ ತೋಟದ ಜಮೀನು ನೀಡಿರುವ ಫಲಾನುಭವಿಗಳಿಗೆ ಉತಾರ ಪೂರೈಸುವಂತೆ ಕಚೇರಿಗಳಿಗೆ ಹಲವಾರು ವರ್ಷಗಳಿಂದ ಅಲೆದಾಡುತ್ತಿದ್ದೇವೆ. ನಮಗೆ ಹಕ್ಕು ಪತ್ರ ನೀಡಿದ್ದರೂ ಉತಾರ ಪೂರೈಸುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಬೇಗನೆ ನಮಗೆ ನಮ್ಮ ಹೆಸರಿಗೆ ಭೂಮಿ ಇರುವ ಬಗ್ಗೆ ಉತಾರ ದೊರೆಯುವಂತೆ ಮಾಡಬೇಕು ಎಂದು ಕೈಮುಗಿದು ಕೇಳುತ್ತಿದ್ದಂತೆ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಗೆ ಸೂಚನೆ ನೀಡಿ ಒಂದು ತಿಂಗಳಲ್ಲಿ ಇದನ್ನು ಸರಿಪಡಿಸಿ ಎಂದು ಸೂಚಿಸಿದರು.

ಉಂಡೇನಹಳ್ಳಿ ಗ್ರಾಮದಲ್ಲಿ ಸುಮಾರು 150 ಎಕರೆಯಷ್ಟು ಅರಣ್ಯ ಪ್ರದೇಶದಲ್ಲಿರುವ ಉಳುಮೆ ಮಾಡುವ ಭೂಮಿಗಳಿಗೆ ರಸ್ತೆ ಸೌಲಭ್ಯ ಕಲ್ಪಿಸಬೇಕೆಂದು ಹಲವಾರು ಬಾರಿ ಬೇಡಿಕೆ ಇಟ್ಟಿದ್ದರೂ ಈಡೇರುತ್ತಿಲ್ಲ ಎಂದು ಹೇಳಿದರು. ಇದೊಂದೇ ಅಲ್ಲದೇ ತಾಲೂಕಿನಾದ್ಯಂತ ರೈತ ಸಂಪರ್ಕ ರಸ್ತೆಗಳ ಸಮಸ್ಯೆ ಪರಿಹಾರಕ್ಕೆ ಬಂದ ಅರ್ಜಿಗಳನ್ನು ಪರಿಶೀಲಿಸಿ ಕಂದಾಯ, ಸರ್ವೇಯವರು ಪೊಲೀಸರ ಸಹಕಾರದೊಂದಿಗೆ ಅದಷ್ಟು ಬೇಗ ಪರಿಹರಿಸಬೇಕು ಎಂದು ವಿನಂತಿಸಿದರು.

ಪಟ್ಟಣದ ಇಟ್ಟಿಗೆರೆ ಭಾಗದ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಪುರಸಭೆಯಲ್ಲಿ ಕೆರೆ ಅಭಿವೃದ್ಧಿ ಶುಲ್ಕದ ಹಣವಿದ್ದರೂ ಇಲ್ಲಿಯವರೆಗೂ ಕೆರೆ ಅಭಿವೃದ್ಧಿಯಾಗಿಲ್ಲ. ಮಳೆಗಾಲದಲ್ಲಿ ಅಲ್ಲಿನ ಜನರು ಸಮಸ್ಯೆ ಎದುರಿಸುತ್ತಿದ್ದು, ಕೂಡಲೇ ಕೆರೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸುವಂತೆ ಶಂಕರ ಬ್ಯಾಡಗಿ, ಎನ.ಬಿ. ಬಂಕಾಪೂರ, ಸಚಿನ್ ಮುಂತಾದವರು ಮನವಿ ಮಾಡಿದರು. ಪುರಸಭೆ, ಎಡಿಆರ್‌ಎಲ್ ಅಧಿಕಾರಿಗಳಿಗೆ ಈ ಕುರಿತಂತೆ ಪರಿಶೀಲನೆ ಮಾಡಿ ಕೂಡಲೇ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ವಾರ್ಡ್ ನಂ.1ರ ವ್ಯಾಪ್ತಿಯ ಕೌಡೇಶ್ವರಿ ನಗರದ ನಿವಾಸಿಗಳು ಮೂಲಭೂತ ಸೌಲಭ್ಯಗಳ ಕುರಿತು ಮನವಿ ಸಲ್ಲಿಸಿದರು. ಪುರಸಭೆ ಮುಖ್ಯಾಧಿಕಾರಿ ಮಹೇಶ ಎಚ್ ಅವರಿಗೆ ಜಿಲ್ಲಾಧಿಕಾರಿಗಳು ಕ್ರಮ ಕೈಕೊಳ್ಳುವಂತೆ ಸೂಚನೆ ನೀಡಿದರು.

ಜನಸ್ಪಂದನ ಸಭೆಯಲ್ಲಿ ಮಾಶಾಸನ, ಗೃಹಲಕ್ಷ್ಮಿ, ಬಸ್ ಸಂಪರ್ಕ, ಶೌಚಾಲಯ ನಿರ್ಮಾಣ, ಬೆಳೆಪರಿಹಾರ, ರಸ್ತೆ ಅಭಿವೃದ್ಧಿ ಸೇರಿ ವಿವಿಧ ಇಲಾಖೆಗಳಿಗೆ ಸೇರಿದ 81 ಅರ್ಜಿಗಳು ಸ್ವೀಕೃತವಾಗಿದ್ದು, ಸ್ವೀಕೃತ ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಡಾ.ಚಂದ್ರು ಲಮಾಣಿ, ಜಿ.ಪಂ ಕಾರ್ಯನಿರ್ವಾಹಣಾಧಿಕಾರಿ ಭರತ್ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ತಹಸೀಲ್ದಾರ ವಾಸುದೇವ ಸ್ವಾಮಿ, ತಾ.ಪಂ ಇಓ ಕೃಷ್ಣಪ್ಪ ಧರ್ಮರ ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ಹಾಜರಿದ್ದರು.

ತಾಲೂಕಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪುರಸಭೆಯಲ್ಲಿ ಮಳೆಗಾಲದಲ್ಲೂ ನೀರಿನ ಸಮಸ್ಯೆ ಸಾಕಷ್ಟಿದ್ದು, ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಕಂಡು ಬರುತ್ತಿದೆ. ಜನತೆ ನನ್ನಲ್ಲಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಿ, ಆಶ್ರಯ ಯೋಜನೆ ಫಲಾನುಭವಿಗಳ ಯಾದಿ ಮರುಪರಿಶೀಲನೆ ನಂತರ ಮತ್ತೆ ಹೊಸಬರಿಗೆ ಅವಕಾಶ ನೀಡಲಾಗುವದು.
– ಡಾ.ಚಂದ್ರು ಲಮಾಣಿ, ಶಾಸಕರು.


Spread the love

LEAVE A REPLY

Please enter your comment!
Please enter your name here