ವಿಜಯಸಾಕ್ಷಿ ಸುದ್ದಿ, ಡಂಬಳ: ತಮ್ಮ ಪ್ರಾಮಾಣಿಕ ಸೇವೆಯ ಮೂಲಕ ಸಾವಿರಾರು ರೈತರ ಆರ್ಥಿಕ ಬದುಕನ್ನು ಸುಧಾರಿಸಲು ಮುಂಡರಗಿ ತಾಲೂಕಾ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಮಹಮ್ಮದರಫಿ ಎಮ್.ತಾಂಬೋಟಿ ಅವರು ಮುಂಡರಗಿ ತಾಲೂಕಿನ ಕ್ರಿಯಾಶೀಲ ಅಧಿಕಾರಿಗಳಾಗಿ ಅನುಪಮ ಸೇವೆ ಸಲ್ಲಿಸಿ, ಗದಗ ಜಿಲ್ಲಾ ಮಟ್ಟದ `ಸರ್ವೋತ್ತಮ ಸೇವಾ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
2007ರಲ್ಲಿ ಗದಗ ತಾಲೂಕಾ ತೋಟಗಾರಿಕಾ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿ 3 ವರ್ಷಗಳ ಸೇವೆ ಸಲ್ಲಿಸಿದರು. ಬಳಿಕ ಬೀದರ ಜಿಲ್ಲೆಯ ಔರಾಧದಲ್ಲಿ ರೈತರ ಪ್ರೀತಿಗೆ ಪಾತ್ರರಾಗಿ 3 ವರ್ಷ ಸೇವೆ ಸಲ್ಲಿಸಿದರು. 2013ರಿಂದ 2015ರವರೆಗೆ ರೋಣದಲ್ಲಿ ಪದನ್ನೋತಿಯನ್ನು ಪಡೆದು ಹಿರಿಯ ಸಹಾಯಕ ತೋಟಗಾರಿಕಾ ನೀರ್ದೇಶಕರಾಗಿ ಬೀದರ ಜಿಲ್ಲೆಯ ಹುಮನಾಬಾದದಲ್ಲಿ 1 ವರ್ಷ, ಗದಗ ಜಲಾನಯನ ಇಲಾಖೆಯಲ್ಲಿ 1 ವರ್ಷ, 2017ರಿಂದ 2021ರವರೆಗೆ ರೋಣದಲ್ಲಿ, 2021ರಿಂದ 2023ರವಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಸೇವೆ ಸಲ್ಲಿಸಿ, 2023ರಿಂದ ಮುಂಡರಗಿ ತಾಲೂಕಿನಲ್ಲಿ ಸೇವಾ ನಿರತರಾಗಿ ಇಲಾಖೆಯ ಸಿಬ್ಬಂದಿಗೆ ಪ್ರೇರಣೆಯಾಗಿದ್ದಾರೆ.
ಈ ಬಾರಿ ಮುಂಗಡಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಗದಗ ಜಿಲ್ಲೆಯ ಡಂಬಳಕ್ಕೆ ತೋಟಗಾರಿಕಾ ಕಾಲೇಜು ನಿರ್ಮಾಣವಾಗಬೇಕು, ಈ ಭಾಗದ ರೈತರು ಇನ್ನಷ್ಟು ಉತ್ತಮ ಸ್ಥಿತಿಗೆ ತಲಪಬೇಕೆನ್ನುವ ಹಿನ್ನೆಲೆಯಲ್ಲಿ ಈ ಭಾಗದ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳ ಸಲಹೆ-ಸೂಚನೆಯಂತೆ ತಮ್ಮನ್ನು ತೊಡಗಿಸಿಕೊಂಡು ಮಹಮ್ಮದರಫೀಕ ಶ್ರಮಿಸುತ್ತಿದ್ದಾರೆ.
ಮುಂಡರಗಿ ತಾಲೂಕಿನಾದ್ಯಂತ ತಮ್ಮ ವೈಜ್ಞಾನಿಕ ಮತ್ತು ದೇಸೀ ಮಾದರಿಯನ್ನು ಬಳಸಿಕೊಂಡು ಯಾವ ರೀತಿಯಾಗಿ ಉತ್ತಮ ಬೆಳೆ ಬೆಳೆಯಬಹುದೆಂದು ರೈತರಿಗೆ ಸೂಕ್ತ ಸಲಹೆ ನೀಡುತ್ತ, ರೈತರು ನೂರಾರು ಹೆಕ್ಟೆರ್ ಪ್ರದೇಶದಲ್ಲಿ ಉತ್ತಮ ಫಸಲು ಪಡೆಯುವಂತೆ ಮಾಡಿದ ಶ್ರೇಯಸ್ಸು ಮಹಮ್ಮದರಫಿ ಎಮ್.ತಾಂಬೋಟಿ ಅವರಿಗೆ ಸಲ್ಲುತ್ತದೆ.
ಇವರ ಸಲಹೆ-ಸೂಚನೆಯಂತೆ ನರೇಗಾದಡಿ ತೋಟಗಾರಿಕೆ ಬೆಳೆಯ ಮೂಲಕ ಮಹಿಳೆ ನೀಲಮ್ಮ ಶಿರುಂದ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನರೇಗಾ ಯೋಜನೆಯಡಿ ಸಹಾಯಧನ ಪಡೆದು 14 ಎಕರೆ ದಾಳಿಂಬೆ ಬೆಳೆಯುವ ಮೂಲಕ ವಿಜಯಕುಮಾರ ಶಿರುಂದ 1 ಕೋಟಿಗೂ ಹೆಚ್ಚು ಆದಾಯ ಪಡೆದು ತಾಲೂಕಿನ ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಬಾಗೇವಾಡಿ ಗ್ರಾಮದ ನಾಗರಾಜ ಯಳವತ್ತಿ 1 ಹೆಕ್ಟೇರ್ ಬಾಳೆ, ಮೈಲಾರಪ್ಪ ಚೋಳಮ್ಮನವರ ಡ್ರ್ಯಾಗನ್ ಬೆಳೆ ಬೆಳೆಯುವ ಮೂಲಕ ಲಕ್ಷಾಂತರ ರೂ ಆದಾಯ ಪಡೆದು ಮಾದರಿಯಾಗಿದ್ದಾರೆ. ಹೀಗೆ ರೈತರ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲು ಶ್ರಮಿಸುತ್ತಿರುವ ಇವರಿಗೆ ಗದಗ ಜಿಲ್ಲಾ ಮಟ್ಟದ `ಸರ್ವೋತ್ತಮ ಸೇವಾ ಪ್ರಶಸ್ತಿ’ ಅರಸಿ ಬಂದಿದೆ.
“ನಾವು 14 ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆದು ಒಳ್ಳೆಯ ಲಾಭ ಪಡೆಯುವ ಮೂಲಕ ಆರ್ಥಿಕ ಮುಖ್ಯ ಪ್ರವಾಹಿನಿಗೆ ಬರಲು ನಮಗೆ ನಿರಂತರ ಸಲಹೆ, ಇಲಾಖಾ ಸವಲತ್ತುಗಳನ್ನು ಸರಿಯಾದ ಸಮಯಕ್ಕೆ ಪೂರೈಯಿಸುತ್ತಿರುವ ಮಹಮ್ಮದರಫಿ ಅವರಿಗೆ ಗದಗ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸಂತಸ ತಂದಿದೆ”
ವಿಜಯಕುಮಾರ ಶಿರುಂದ
ಜಂತ್ಲಿ ಶಿರೂರ ಗ್ರಾಮದ ರೈತ.
“ಗದಗ ಜಿಲ್ಲೆಯ ಹಿರಿಯ ಅಧಿಕಾರಿಗಳ ಸಲಹೆ-ಸೂಚನೆ, ಸಿಬ್ಬಂದಿ ವರ್ಗದವರ ಸಹಕಾರ, ರೈತರ ಆಸಕ್ತಿಯಿಂದ ಮುಂಡರಗಿ ತಾಲೂಕಿನಾದ್ಯಂತ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿದೆ. ಕೆರೆಗಳ ನೀರು ಪೋಲಾಗದಂತೆ ಬಳಕೆ ಮಾಡಿ, ಪ್ರತಿಯೊಬ್ಬ ರೈತರೂ ಉತ್ತಮ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು”
– ಮಹಮ್ಮದರಫಿ ಎಮ್.ತಾಂಬೋಟಿ.
ಹಿರಿಯ ಸಹಾಯಕ ತೋಟಗಾರಿಕಾ ನೀರ್ದೇಶಕ,
ಮುಂಡರಗಿ.