ಅಹಮದಾಬಾದ್:- ಅಹಮದಾಬಾದ್ ನಲ್ಲಿ ಇಂದು ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದ ಪ್ರಯಾಣಿಕರ ಕುಟುಂಬಕ್ಕೆ ಟಾಟಾ ಸಮೂಹ ತಲಾ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ. ಗಾಯಾಳು ಚಿಕಿತ್ಸಾ ವೆಚ್ಚ, ಹಾಸ್ಟೆಲ್ ಮರು ನಿರ್ಮಾಣ ಸೇರಿದಂತೆ ಪ್ರಮುಖ ಭರವಸೆ ನೀಡಿದೆ.
ಏರ್ ಇಂಡಿಯಾ ವಿಮಾನ 171ರ ದುರಂತದ ಬಗ್ಗೆ ಟಾಟಾ ಗ್ರೂಪ್ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದೆ. ‘ಏರ್ ಇಂಡಿಯಾ ವಿಮಾನ 171ರಲ್ಲಿ ಸಂಭವಿಸಿದ ದುರಂತದಿಂದ ನಮಗೆ ತೀವ್ರ ದುಃಖವಾಗಿದೆ. ಈ ಕ್ಷಣದಲ್ಲಿ ನಾವು ಅನುಭವಿಸುತ್ತಿರುವ ದುಃಖವನ್ನು ವ್ಯಕ್ತಪಡಿಸಲು ಪದಗಳಿಲ್ಲ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ನಮ್ಮ ಪ್ರಾರ್ಥನೆಗಳು ಇವೆ. ಗಾಯಗೊಂಡವರಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಮಾಡುತ್ತೇವೆʼ ಎಂದು ಟಾಟಾ ಗ್ರೂಪ್ ಹೇಳಿದೆ.
ಟಾಟಾ ಗ್ರೂಪ್ ಮೃತರ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ಹಾಗೂ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಭರಿಸುತ್ತದೆ. ವಿಮಾನ ಪತನಗೊಂಡ ಬಿ ಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ನಿರ್ಮಾಣಕ್ಕೆ ನೆರವು ನೀಡಲಾಗುತ್ತದೆ. ಸಂತ್ರಸ್ತ ಕುಟುಂಬಗಳಿಗೆ ಮತ್ತು ಸಮುದಾಯಗಳಿಗೆ ಟಾಟಾ ಗ್ರೂಪ್ ಬೆಂಬಲ ನೀಡುತ್ತದೆ. ಈ ದುಃಖದ ಸಮಯದಲ್ಲಿ ನಾವು ಸಂತ್ರಸ್ತ ಕುಟುಂಬಗಳೊಂದಿಗೆ ನಿಲ್ಲುತ್ತೇವೆ ಎಂದು ಟಾಟಾ ಸನ್ಸ್ ಚೇರ್ಮನ್ ಎನ್.ಚಂದ್ರಶೇಖರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನೂ ಅಹಮ್ಮದಾಬಾದ್ ಲಂಡನ್ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಪತನಗೊಂಡು ಅತೀ ದೊಡ್ಡ ದುರಂತ ಸಂಭವಿಸಿದೆ. 242 ಪ್ರಯಾಣಿಕರ ಹೊತ್ತು ಪ್ರಯಾಣ ಬೆಳೆಸಿದ ಏರ್ ಇಂಡಿಯಾ ಎ171 ವಿಮಾನ ಪತನಗೊಂಡಿದೆ. ಈ ವಿಮಾನದಲ್ಲಿದ್ದ ಒಟ್ಟು 242 ಪ್ರಯಾಣಿಕರ ಪೈಕಿ ಓರ್ವ ಪ್ರಯಾಣಿಕ ಬದುಕುಳಿದಿದ್ದಾನೆ. ಇನ್ನುಳಿದ 242 ಪ್ರಯಾಣಿಕರು ನಿಧನರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬ್ರಿಟನ್ ಪ್ರಧಾನಿ ಕೈರ್ ಸ್ಟಾರ್ಮರ್ ಸೇರಿದಂತೆ ಹಲವು ನಾಯಕರು ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.