
ನವದೆಹಲಿ: ಹೆಣ್ಣುಮಕ್ಕಳ ಕುಂಕುಮ ಅಳಿಸಿದ್ದ ಉಗ್ರರಿಗೆ ಅವರ ನೆಲದಲ್ಲೇ ತಕ್ಕ ಪಾಠ ಕಲಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ. ರೋಡ್ ಶೋ ಬಳಿಕ ದಾಹೋದ್ನಲ್ಲಿ 9000 HP ಪವರ್ ಇಂಜಿನ್ ಸ್ಥಾವರವನ್ನು ಉದ್ಘಾಟಿಸಿ ಮಾತನಾಡಿದ ಅವರು,
ನಮ್ಮ ನೆಲದಲ್ಲೇ ನಿಂತು ಹೆಣ್ಣುಮಕ್ಕಳ ಕುಂಕುಮ ಅಳಿಸಿದ್ದ ಉಗ್ರರಿಗೆ ಅವರ ನೆಲದಲ್ಲೇ ತಕ್ಕ ಪಾಠ ಕಲಿಸಿದ್ದೇವೆ. ಮೋದಿಯನ್ನು ಎದುರು ಹಾಕಿಕೊಂಡರೆ ಎಂಥಾ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬುದು ಇದೀಗ ಅವರಿಗೆ ಅರ್ಥವಾಗಿರಬಹುದು ಎಂದು ಹೇಳಿದ್ದಾರೆ.
ನಾವು ಅವರನ್ನು 22 ನಿಮಿಷಗಳಲ್ಲಿ ಮಣ್ಣಿನಲ್ಲಿ ಹೂತುಹಾಕಿದ್ದೇವೆ. ವಿಭಜನೆಯ ನಂತರ ಹುಟ್ಟಿದ ದೇಶಕ್ಕೆ ಒಂದೇ ಒಂದು ಗುರಿ ಇತ್ತು, ಭಾರತಕ್ಕೆ ಹಾನಿ ಮಾಡುವುದು. ಆದರೆ ನಮ್ಮ ಗುರಿ ಅಭಿವೃದ್ಧಿ ಹೊಂದಿದ ಭಾರತವಾಗುವುದು, ನಾವು ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಭಯೋತ್ಪಾದಕರು ಒಬ್ಬ ವ್ಯಕ್ತಿಯನ್ನು ಅವನ ಮಕ್ಕಳ ಮುಂದೆಯೇ ಗುಂಡಿಕ್ಕಿ ಕೊಂದರು; ಆ ದೃಶ್ಯವನ್ನು ನೋಡಿದ ನಂತರ ಇಂದಿಗೂ ನನ್ನ ರಕ್ತ ಕುದಿಯುತ್ತಿದೆ” ಎಂದ ಮೋದಿ, ‘ಪಹಾಲ್ಗಾಮ್ ಉಗ್ರ ದಾಳಿಯ ನಂತರ ನಮ್ಮ ಮೂರೂ ಪಡೆಗಳಿಗೂ ಸ್ವಾತಂತ್ರ್ಯ ನೀಡಿದೆವು, ಆದ್ದರಿಂದ ನಮ್ಮ ವೀರ ಸೈನಿಕರು ಮೂರು ದಶಕಗಳಲ್ಲಿ ಜಗತ್ತು ನೋಡಿರದ ಕೆಲಸವನ್ನು ಮಾಡಿದರು ಎಂದರು.