ಬೆಂಗಳೂರು:- ರಾಜ್ಯಗಳು ಹೆಚ್ಚಿನ ತೆರಿಗೆ ಕೇಳೋದು ಸಣ್ಣತನ ಎಂಬ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯಗಳು ಹೆಚ್ಚು ತೆರಿಗೆ ಕೇಳಬಾರದು ಎನ್ನುವ ಪಿಯೂಷ್ ಗೋಯಲ್ ಹೇಳಿಕೆಯೇ ಸಣ್ಣತನ. ಪಿಯೂಷ್ ಗೋಯಲ್ಗೆ ಕಾಮನ್ ಸೆನ್ಸ್ ಇಲ್ಲದೇ ಇರುವುದರಿಂದ ಹಾಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ರಾಜ್ಯದಿಂದ ಸುಮಾರು 4.5 ಲಕ್ಷ ಕೋಟಿ ಜಿಎಸ್ಟಿ ಮೂಲಕ ಕೇಂದ್ರಕ್ಕೆ ಹೋಗುತ್ತದೆ. ಅವರು ನಮಗೆ ಕೊಡೋದು 1 ರೂಪಾಯಿಗೆ 12 ಪೈಸೆ ಮಾತ್ರ. ನಮ್ಮ ರಾಜ್ಯ ಇಷ್ಟು ತೆರಿಗೆ ಕಟ್ಟಿ ನಮ್ಮ ರಾಜ್ಯದ ಅಭಿವೃದ್ಧಿಗೆ ಹಣ ಕೊಡೋದಿಲ್ಲ. ಹೆಚ್ಚು ಕೇಳೋದು ಸರಿಯಲ್ಲ ಅನ್ನೋದು ಸರಿಯಲ್ಲ. ಹೆಚ್ಚು ಪಾಲು ಕೊಡಿ ಅಂತ ಕೇಳೋದು ತಪ್ಪಲ್ಲ. ಪಿಯೂಷ್ ಗೋಯಲ್ ಕರ್ನಾಟಕದವರು ಆಗಿದ್ದರೆ ಏನು ಮಾಡುತ್ತಿದ್ದರು? ಇದೇ ರೀತಿ ಹೇಳ್ತಿದ್ರಾ? ಹಾಗಾದ್ರೆ ನಾವು ಹೆಚ್ಚು ತೆರಿಗೆ ಕಟ್ಟೋದು ತಪ್ಪಾ ಎಂದು ಪ್ರಶ್ನಿಸಿದರು.
ನಮ್ಮ ರಾಜ್ಯವೂ ಅಭಿವೃದ್ಧಿ ಆಗಬೇಕು. ಕಡಿಮೆ ಟ್ಯಾಕ್ಸ್ ಕೊಡೋ ರಾಜ್ಯಗಳು ಅಭಿವೃದ್ಧಿ ಆಗಬೇಕು. ಆದರೆ ಇದು ಒಕ್ಕೂಟ ವ್ಯವಸ್ಥೆ. ಹೀಗಾಗಿ ಹೆಚ್ಚು ತೆರಿಗೆ ಪಾಲು ಕೇಳೋದು ತಪ್ಪಲ್ಲ ಎಂದು ವಾಗ್ದಾಳಿ ನಡೆಸಿದರು.



