ವಿಜಯಸಾಕ್ಷಿ ಸುದ್ದಿ, ರೋಣ: ಮಕ್ಕಳನ್ನು ನಾವು ದೇವರಿಗೆ ಹೊಲಿಕೆ ಮಾಡುತ್ತೇವೆ. ಕಾರಣ, ಆ ಮುಗ್ಧ ಮನಸ್ಸುಗಳಲ್ಲಿ ಬೆಳಕು ಅಡಕವಾಗಿದೆ ಎಂಬ ದೃಷ್ಟಿಯಿಂದ. ಹೀಗಾಗಿ, ಮಕ್ಕಳ ಮನಸ್ಸುಗಳಲ್ಲಿ ಒಳ್ಳೆಯ ಭಾವನೆಗಳನ್ನು ಬಿತ್ತಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಶನಿವಾರ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಜರುಗಿದ ಮಾತೋಶ್ರೀ ಬಸಮ್ಮಾ ಎಸ್. ಪಾಟೀಲ ಕಿಡ್ಸ್ ಶಾಲೆಯ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಗುವಾಗಿರುವಾಗಲೇ ಪಾಲಕರಾದ ನಾವು ಒಳ್ಳೆಯ ಸಂಸ್ಕೃತಿಯನ್ನು ಕಲಿಸುವ ಮೂಲಕ ಗುಣಮಟ್ಟದ ಅಕ್ಷರ ಜ್ಞಾನ ಒದಗಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸಬೇಕು. ಮಕ್ಕಳಿಗೆ ಸುಂದರ ಸಮಾಜದಲ್ಲಿ ಸಮ್ಮಿಳನಗೊಳ್ಳುವಂತೆ ಪ್ರೇರೆಪಿಸಿ ಅವರನ್ನು ಉತ್ತಮ ನಾಗರಿಕರನ್ನಾಗಿ ಬೆಳೆಸಬೇಕು ಎಂದರು.
ಪಾಲಕರಿಗೆ ತೊಂದರೆಗಳಿರಬಹುದು. ಆದರೆ ಮಕ್ಕಳಿಗೆ ಅಕ್ಷರ ಜ್ಞಾನ ನೀಡುವಲ್ಲಿ ಹಿಂದಕ್ಕೆ ಸರಿಯಬಾರದು. ಮಕ್ಕಳಲ್ಲಿ ಸಮಾಜ ಮೆಚ್ಚುವ ಪ್ರತಿಭೆಗಳು ಅಡಕವಾಗಿರುತ್ತವೆ. ಅಂತಹ ಪ್ರತಿಭೆಯನ್ನು ಹೊರತೆಗೆಯುವ ಕಾರ್ಯವನ್ನು ಶಿಕ್ಷಕರ ಜೊತೆಗೆ ಪಾಲಕರೂ ಮಾಡಬೇಕು ಎಂದ ಅವರು, ಶೈಕ್ಷಣಿಕ ವರ್ಷದಿಂದ 1ರಿಂದ 5ನೇ ತರಗತಿಯವರೆಗೆ ಶಾಲೆಯನ್ನು ಆರಂಭಿಸಲಾಗುವುದು ಎಂದರು.
ಮಾತೋಶ್ರೀ ಅನ್ನಪೂರ್ಣ ಜಿ.ಪಾಟೀಲ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಅನನ್ಯಾ ಪಾಟೀಲರವರಿಂದ ಸಂಗೀತ ಕಾರ್ಯಕ್ರಮ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಡಾ. ಮಧು ರಡ್ಡೇರ, ವರ್ಷಾ ಪಾಟೀಲ, ಶಶಿಕಲಾ ಪಾಟೀಲ, ಅಕ್ಷತಾ ರಾಯಬಾಗಿ, ಸಂಗನಗೌಡ ಪಾಟೀಲ, ವಿ.ಆರ್. ಗುಡಿಸಾಗರ, ಪರಶುರಾಮ ಅಳಗವಾಡಿ, ವಿ.ಬಿ. ಸೋಮನಕಟ್ಟಿಮಠ, ಯೂಸುಪ್ ಇಟಗಿ, ಶಫೀಕ ಮೂಗನೂರ, ಡಾ. ಐ.ಬಿ. ಕೊಟ್ಟೂರಶೆಟ್ಟರ, ಡಾ. ವಾ.ಎನ್. ಪಾಪಣ್ಣವರ, ಸಿಪಿಐ ಎಸ್.ಎಸ್. ಬಿಳಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.