ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಇಂದದು ಖಾಸಗಿ ಶಾಲಾ-ಕಾಲೇಜು ಶಿಕ್ಷಕರು ನೆಮ್ಮದಿಯಿಂದ ಇದ್ದರೆ ಅದಕ್ಕೆ ಬಲಿಷ್ಠ ಸಂಘಟನೆ, ಹೋರಾಟಗಳೇ ಕಾರಣ ಎಂಬುದನ್ನು ಯಾರೂ ಮರೆಯಬಾರದು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಅವರು ಪಟ್ಟಣದ ಡಿ.ಜಿ. ಪೂಜಾರರ ಸೇವಾ ನಿವೃತ್ತಿಯ ನಿಮಿತ್ತ ರೋಟರಿ ಶಿಕ್ಷಣ ಸಂಸ್ಥೆಯ ಆವಣದಲ್ಲಿ ಏರ್ಪಡಿಸಿದ್ದ `ಶರಣು ಸಮರ್ಪಣ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರ ತಾರತಮ್ಯದ ವಿರುದ್ಧ ಹಾಗೂ ಖಾಸಗಿ ಶಾಲೆಯಲ್ಲಿ ಶಿಕ್ಷಕರ ಸೇವಾ ಭದ್ರತೆಯ ಆತಂಕವನ್ನು ದೂರ ಮಾಡಲು 1975ರಿಂದಲೇ ಹೋರಾಟ ಮಾಡುತ್ತಾ ಬಂದಿರುವ ಫಲದಿಂದಾಗಿ ಖಾಸಗಿ ಶಾಲೆ ಶಿಕ್ಷಕರು ಇಂದು ನೆಮ್ಮದಿಯಿಂದ ಸೇವೆ ಮಾಡುತ್ತಿದ್ದಾರೆ. ಆದರೆ ಹೋರಾಟದಿಂದಲೇ ಎಲ್ಲವನ್ನೂ ಪಡೆದ ಈ ಶಿಕ್ಷಕರು ಹಾಗೂ ಯುವ ಶಿಕ್ಷಕರು ಇತ್ತೀಚಿನ ಹೋರಾಟಗಳಿಗೆ ಬರುತ್ತಿಲ. ಇದರ ಪರಿಣಾಮವನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. 1980ರ ಕಾಲದಲ್ಲಿ ಒಂದು ಕರೆ ಕೊಟ್ಟರೆ ಸಾವಿರ ಸಾವಿರ ಶಿಕ್ಷಕರು ಧಾರವಾಡದಲ್ಲಿ ಸೇರುತ್ತಿದ್ದರು. ಆದರೆ ಇತ್ತೀಚೆಗೆ ಹೋರಾಟಗಳೇ ಇಲ್ಲವಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಅವ್ವ ಸೇವಾ ಟ್ರಸ್ಟ್ನ ಗದಗ ಜಿಲ್ಲಾ ಸಂಚಾಲಕ ಡಾ. ಬಸವರಾಜ ಧಾರವಾಡ ಮಾತನಾಡಿ, ಶಿಕ್ಷಕರು ಸಂಘಟನೆ, ಹೋರಾಟದತ್ತ ಗಮನಹರಿಸಬೇಕಿದೆ. ನಿವೃತ್ತಿ ಹೊಂದಿದ ಡಿ.ಜಿ. ಪೂಜಾರ್ ವಿಶೇಷ ಅರ್ಥಪೂರ್ಣ ಕಾರ್ಯಕ್ರಮ ಏರ್ಪಡಿಸಿ ಉಪಕಾರ ಮಾಡಿದ ಎಲ್ಲ ಮಹನೀಯರಿಗೆ ಶರಣು ಸಮರ್ಪಣೆ ಸಲ್ಲಿಸುವ ಒಂದು ಮಾದರಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಮೈಲುಗಲ್ಲು ಎಂದರು.
ಡಿ.ಜಿ. ಪೂಜಾರ್ ಕುಟುಂಬದವರು ಉಪಕಾರ ಮಾಡಿದ ಎಲ್ಲ ಮಹನೀಯರಿಗೆ ಗೌರವ ಸಮರ್ಪಣೆ ಸಲ್ಲಿಸಿದರು. ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಗಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ, ನಿವೃತ್ತ ಶಿಕ್ಷಕ ಡಿ.ಜಿ. ಪೂಜಾರ್, ಡಿಡಿಪಿಐ ಆರ್.ಎಸ್. ಬುರುಡಿ, ಬಿ.ಇ.ಒ ಎಚ್.ಎಂ. ಪಡ್ನೇಶಿ, ಸಂಪನ್ಮೂಲ ಅಧಿಕಾರಿ ಜಿ.ಎಸ್. ಅಣ್ಣಿಗೇರಿ, ಕೆಎಂಎಫ್ ನಿರ್ದೇಶಕ ಲಿಂಗನಗೌಡ ಪಾಟೀಲ್, ಜಿ.ಬಿ. ಬಸವಣ್ಣಪ್ಪ, ಕೊಟ್ರೇಶ್ ಅಂಗಡಿ, ಡಿ.ಜಿ. ಮೊರ್ನಾಳ, ನಾಗರಾಜ್ ಹಳ್ಳಿಕೇರಿ, ಎಚ್.ಎಂ. ರಾಥೋಡ್, ರುದ್ರಗೌಡ ಪಾಟೀಲ್, ಎಸ್.ಎಸ್. ಗಡ್ಡದ, ಡಾ. ಬಿ.ಜಿ. ಜವಳಿ ಇದ್ದರು. ಎಸ್.ಎಂ. ಅಗಡಿ ಸ್ವಾಗತಿಸಿದರು. ಎಸ್.ಬಿ. ಗಿಂಡಿಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಿವೃತ್ತಿ ಹೊಂದಿದ ಡಿ.ಜಿ. ಪೂಜಾರ್ ಒಬ್ಬ ಆದರ್ಶ ಶಿಕ್ಷಕ. ತನ್ನ ಸೇವಾ ಅವಧಿ ಉದ್ದಕ್ಕೂ ಹಾಗೂ ಕಲಿಸಿದ ಗುರುಗಳಿಗೆ ನೆರವಾದ ಮಹನೀಯರಿಗೆ ಶರಣು ಸಮರ್ಪಣೆ ಕಾರ್ಯಕ್ರಮ ಏರ್ಪಡಿಸುವ ಮೂಲಕ ನಮಗೆಲ್ಲ ಮಾದರಿಯಾಗಿದ್ದಾರೆ. ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದ್ದು, ಇದೊಂದು ಉತ್ತಮ ಪರಂಪರೆ ಎಂದು ಬಸವರಾಜ ಹೊರಟ್ಟಿ ಪೂಜಾರ್ ದಂಪತಿಗಳಿಗೆ ಶುಭ ಕೋರಿದರು.