ವಿಜಯಸಾಕ್ಷಿ ಸುದ್ದಿ, ರೋಣ : ಶಿಕ್ಷಕರು ಮಕ್ಕಳಿಗೆ ದಂಡಿಸಿದರೆ ಮಾತ್ರ ಅವರು ಪ್ರಗತಿ ಹೊಂದಲು ಸಾಧ್ಯ. ಆದ್ದರಿಂದ ಶಿಕ್ಷಕರು ಮಕ್ಕಳನ್ನು ದಂಡಿಸಿದ್ದಾರೆಂದು ತಿಳಿದು ಶಾಲೆಯ ತನಕ ಯಾವ ಪಾಲಕರೂ ಹೋಗಬೇಡಿ ಎಂದು ಅರಣ್ಯ ನಿಗಮದ ಮಾಜಿ ಅಧ್ಯಕ್ಷ ಟಿ.ಈಶ್ವರ ಹೇಳಿದರು.
ಅವರು ಗುರುವಾರ ಪಟ್ಟಣದ ಗುರುಭವನದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಈ ಹಿಂದೆ ಶಿಕ್ಷಕರು ಶಾಲೆಗೆ ಬರುವ ವಿದ್ಯಾರ್ಥಿಗಳನ್ನು ದಂಡಿಸುತ್ತಿದ್ದರು. ಕಾರಣ ನಮ್ಮ ಕೈಯಲ್ಲಿ ಅಕ್ಷರ ಜ್ಞಾನ ಪಡೆಯುವ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು. ಈಗಲೂ ಸಹ ಗುರುವಿನ ಭಾವನೆ ಮಕ್ಕಳ ಉನ್ನತಿಯನ್ನು ಬಯಸುತ್ತದೆ. ವಿಪರ್ಯಾಸ ಅಂದರೆ ಪಾಲಕರು ಶಾಲೆಯ ತನಕ ಹೋಗಿ ನಮ್ಮ ಮಕ್ಕಳನ್ನು ಯಾವ ವಿಷಯಕ್ಕೆ ದಂಡಿಸಿದಿರಿ ಎನ್ನುವ ಕಾಲ ಬಂದಿದ್ದು, ಇದು ಮಕ್ಕಳ ಶೈಕ್ಷಣಿಕ ಚಟುವಟಿಕೆಯ ಮೇಲೆ ಪರಿಣಾಮ ಬಿರುತ್ತದೆ ಎನ್ನುವುದನ್ನು ಪಾಲಕರು ಸಹ ತಿಳಿದುಕೊಳ್ಳಬೇಕು ಎಂದರು.
ಮುಖ್ಯವಾಗಿ ಶಿಕ್ಷಕರು ಮಾನವೀಯ ಮೌಲ್ಯಗಳ ಆಧಾರದಲ್ಲಿ ಮಕ್ಕಳಿಗೆ ಅಕ್ಷರ ಜ್ಞಾನ ನೀಡಬೇಕು. ಮಕ್ಕಳಲ್ಲಿ ಅಡಕವಾಗಿರುವ ಭಯವನ್ನು ತೊರೆದು ಹಾಕುವಲ್ಲಿ, ಅವರಲ್ಲಿ ನೈತಿಕತೆಯ ಬಲ ತುಂಬುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು. ಸಮಾಜ ಏಕತೆ ಹಾಗೂ ಸದೃಢತೆಯಿಂದ ಸಾಗಬೇಕಾದರೆ ಶಿಕ್ಷಕರ ಕರ್ತವ್ಯ ನಿಷ್ಠೆ ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯವನ್ನು ಗುರುಪಾದ ದೇವರು, ಅಧ್ಯಕ್ಷತೆಯನ್ನು ಶಾಸಕ ಜಿ.ಎಸ್. ಪಾಟೀಲ ವಹಿಸಿದ್ದರು.
ಸಭೆಯಲ್ಲಿ ವಿ.ಆರ್. ಗುಡಿಸಾಗರ, ಬಸವರಾಜ ನವಲಗುಂದ, ಯೂಸುಫ್ ಇಟಗಿ, ವಿ.ಬಿ. ಸೋಮನಕಟ್ಟಿಮಠ, ಬಿಇಒ ರುದ್ರಪ್ಪ ಹುರಳಿ, ವಾಯ್.ಡಿ. ಗಾಣಿಗೇರ, ಸಿ.ಕೆ. ಕೇಸರಿ, ಎಂ.ಎ. ಫಣಿಬಂದ, ಮಂಜುಳಾ ರೇವಡಿ, ಜಿ.ಪಂ ಮಾಜಿ ಅಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ನಾಜಬೇಗಂ ಯಲಿಗಾರ ಸೇರಿದಂತೆ ಮುಖಂಡರು, ಅಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.
ಈ ಬಾರಿಯ ಶಿಕ್ಷಕರ ದಿನಾಚರಣೆ ನಿಮಿತ್ತ ಶಾಸಕ ಜಿ.ಎಸ್. ಪಾಟೀಲರು 1600ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಅಧಿಕಾರಿಗಳು ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಜನರಿಗೆ ಹೊಳಿಗೆ ಊಟ ಬಡಿಸಿದ್ದು ವಿಷೇಷವಾಗಿತ್ತು. ಜೊತೆಗೆ ಖಾಸಗಿ ಹಾಗೂ ಸರಕಾರಿ ಶಾಲೆಗಳ ಸರ್ವ ಶಿಕ್ಷಕರುಗಳಿಗೆ ನೆನಪಿನ ಕಾಣಿಕೆಯಾಗಿ ಬ್ಯಾಗ್ ವಿತರಿಸುವ ಮೂಲಕ ಶಾಸಕ ಜಿ.ಎಸ್. ಪಾಟೀಲರು ಶಿಕ್ಷಕ ವೃಂದಕ್ಕೆ ಗೌರವ ಸಲ್ಲಿಸಿದರು.