ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಮನುಷ್ಯ ಸೇರಿದಂತೆ ಪ್ರಾಣಿ-ಪಕ್ಷಿ ಸಂಕುಲಗಳ ಉಳಿವಿಗಾಗಿ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಬಿಜೆಪಿ ಮಂಡಲದ ಅಧ್ಯಕ್ಷ ಕೆ.ಲಕ್ಷ್ಮಣ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಸೋಮವಾರ ಬಿಜೆಪಿ ಮಂಡಲದಿಂದ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮತನಾಡಿದರು.
ದಿನದಿಂದ ದಿನಕ್ಕೆ ಪರಿಸರ ನಾಶವಾಗುತ್ತಿದ್ದು, ಪರಿಣಾಮ ತಾಪಮಾನ ಹೆಚ್ಚಾಗುತ್ತಿದೆ. ಇದರಿಂದ ಸಕಾಲಕ್ಕೆ ಮಳೆ ಬರದೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹಾಗಾಗಿ ಪರಿಸರ ಉಳಿಸಿ ಬೆಳೆಸಲು ನಾವೆಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಉತ್ತಮ ಪರಿಸರ ಇದ್ದರೆ ನಾವು ಆರೋಗ್ಯವಂತರಾಗಿರಬಹುದು. ನಮ್ಮ ಊರು ಕೇರಿ, ಮನೆ, ಶಾಲೆ, ದೇವಸ್ಥಾನಗಳ ಆವರಣಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವುದರ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿ. ನಂಜನಗೌಡ್ರು, ಆರುಂಡಿ ನಾಗರಾಜ, ಬಾಗಳಿ ಕೊಟ್ರೇಶಪ್ಪ, ಕಣಿವಳ್ಳಿ ಮಂಜುನಾಥ, ಓಂಕಾರ ಗೌಡ, ಕುಸುಮಾ ಜಗದೀಶ್, ಎಂ.ದ್ಯಾಮಪ್ಪ, ಬೆಣ್ಣಿಹಳ್ಳಿ ಸಿದ್ದನಗೌಡ, ಕಡೆಮನೆ ಸಂಗಮೇಶ್, ಶ್ರೀಪತಿ, ಜವಳಿ ಮಹೇಶ, ದುಗ್ಗಾವತಿ ಎಸ್.ಬಸವರಾಜ, ಗಂಗಾಧರ, ಸುರೇಶ, ಸಪ್ನಾ ಮಲ್ಲಿಕಾರ್ಜುನ್, ಜಯಲಕ್ಷ್ಮೀ ಸೇರಿದಂತೆ ಇತರರು ಇದ್ದರು.