ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ದೇವಸ್ಥಾನಗಳು ನಮ್ಮ ನಾಡಿನ ಇತಿಹಾಸ, ಸಂಪ್ರದಾಯ, ಧರ್ಮ, ಸಂಸ್ಕೃತಿಯನ್ನು ಬಿಂಬಿಸುವುದರೊಂದಿಗೆ ಜನರಲ್ಲಿ ಧಾರ್ಮಿಕ ಭಾವನೆ, ಭಯ-ಭಕ್ತಿ ಮೂಡಿಸಿ ಸನ್ಮಾರ್ಗದತ್ತ ಕೊಂಡೊಯುವ ಶೃದ್ಧಾ ಮತ್ತು ಶಕ್ತಿ ಕೇಂದ್ರಗಳಾಗಿವೆ ಹೂವಿನಶಿಗ್ಲಿ ಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಸಮೀಪದ ಹೂವಿನಶಿಗ್ಲಿ ಗ್ರಾಮದಲ್ಲಿ ಬನಶಂಕರಿ ದೇವಸ್ಥಾನದ ಲೋಕಾರ್ಪಣೆ ಹಾಗೂ ದೇವಿ ಮೂರ್ತಿ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ದೇವಸ್ಥಾನಗಳು ಪರಸ್ಪರ ಸೌಹಾರ್ದತೆ, ಭಾಂಧವ್ಯ ಬೆಸೆಯುತ್ತವೆ. ಇಲ್ಲಿ ನಿತ್ಯ ಭಜನೆ, ಧರ್ಮಾಚರಣೆ, ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಂತಾಗಬೇಕು. ದೇವಸ್ಥಾನಗಳಲ್ಲಿ ಸ್ವಚ್ಛತೆ, ಪಾವಿತ್ರ್ಯತೆ ಕಾಪಾಡುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು.
ಬನ್ನಿಕೊಪ್ಪ/ಮೈಸೂರಿನ ಜಪದಕಟ್ಟಿಮಠದ ಡಾ. ಸುಜ್ಞಾನದೇವ ಶಿವಾಚಾರ್ಯರು ಆಶೀರ್ವಚನ ನೀಡಿ, ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಜನರಿಗೆ ಶಾಂತಿ-ನೆಮ್ಮದಿ ಕರುಣಿಸುವ ತಾಣಗಳಾಗಿವೆ. ದೇವಸ್ಥಾನ ನಿರ್ಮಾಣದ ನಂತರ ಅಲ್ಲಿ ನಿತ್ಯ ಪೂಜಾ ಕೈಂಕರ್ಯಗಳು ನಡೆಯಬೇಕು. ಗ್ರಾಮದ ಯುವಕರು ದುಶ್ಚಟಗಳಿಂದ ದೂರವಿದ್ದು ಸಂಸ್ಕಾರ, ಸಂಸ್ಕೃತಿ, ಗುರು-ಹಿರಿಯರಿಗೆ ವಿಧೇಯರಾಗಿ ನಡೆಯಬೇಕು.
ಮಹಿಳೆಯರನ್ನು ಪೂಜ್ಯನೀಯ ಭಾವನೆಯಿಂದ ಕಾಣಬೇಕು ಎಂದು ಹೇಳಿದರು.
ಗುಡ್ಡದಾನ್ವೇರಿಯ ಶ್ರೀ ಶಿವಯೋಗೀಶ್ವರ ಮಹಾಸ್ವಾಮಿಗಳು, ಅಕ್ಕಿಆಲೂರು ಶ್ರೀ ವಿರಕ್ತ ಮಠದ ಶಿವಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ ಮಾತನಾಡಿದರು.
ರಾಜ್ಯ ದೇವಾಂಗ ಸಮಾಜದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಕರ್ನಾಟಕ ಶೋಷಿತ ಒಕ್ಕೂಟಗಳ ಕಾರ್ಯದರ್ಶಿ ವೆಂಕಟರಾಮಯ್ಯ ಎಣ್ಣೆಗೆರೆ, ಹಾವೇರಿ ದೇವಾಂಗ ಸಮಾಜದ ಅಧ್ಯಕ್ಷ ಸಂಕಪ್ಪ ಮಾರ್ನಾಳ, ದಶರಥರಾಜು ಕೊಳ್ಳಿ, ರಮೇಶಗೌಡ ಗುಡಿಸಾಗರ, ಮಹಾಬಲೇಶ್ವರಪ್ಪ ಬೇವಿನ ಮರದ, ಸುಭಾಸ್ ಹುಲುಗೂರ, ಬಾಲಚಂದ್ರಪ್ಪ ಹಾಲ್ಕೆರೆ, ರಮೇಶ ಹುಲಸೋಗಿ, ವಿಷ್ಣುಪ್ಪ ಅಸುಂಡಿ, ಸಿ.ಎಸ್. ಮಂಜಲಾಪುರ ಇದ್ದರು. ಶ್ರೀ ಬನಶಂಕರಿ ದೇವಿ ಮೂರ್ತಿ ತಯಾರಕ ಚಂದ್ರು ಪತ್ತಾರರನ್ನು ಸತ್ಕರಿಸಲಾಯಿತು. ಕೆ.ಎಸ್. ಇಟಗಿಮಠ, ಮಹದೇವಪ್ಪ ಬಿಷ್ಟಣ್ಣವರ ನಿರೂಪಿಸಿದರು.