ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಆದ್ರಳ್ಳಿ ಗ್ರಾಮದಲ್ಲಿ ಬಂಜಾರ ಮತ್ತು ಭೋವಿ ಸಮಾಜದ ನಡುವೆ ಗವಿಮಠದಲ್ಲಿನ ಕುಮಾರ ಮಹಾರಾಜರ ಪರ-ವಿರೋಧದ ವಿಷಯವಾಗಿ ಮುಸುಕಿನ ಗುದ್ದಾಟ ಕಳೆದ ಕೆಲ ದಿನಗಳಿಂದ ನಡೆದೇ ಇತ್ತು.
2 ದಿನಗಳ ಹಿಂದೆ ಭೋವಿ ಸಮಾಜದ ಕೆಲವರು ಕುಮಾರ ಮಹಾರಾಜರು ಇದ್ದ ಗವಿಮಠಕ್ಕೆ ಬೀಗ ಹಾಕಿದ್ದರು. ಇದನ್ನು ಖಂಡಿಸಿದ ಶ್ರೀಗಳು, ಗ್ರಾಮದ ಸೇವಾಲಾಲ್ ಮಂದಿರದ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಇದು ಉಭಯ ಸಮಾಜದ ನಡುವೆ ಗೊಂದಲ ಉಂಟು ಮಾಡಿತ್ತು.
ಶುಕ್ರವಾರ ಒಂದು ಕಡೆ ಶ್ರೀಗಳ ಸತ್ಯಾಗ್ರಹ, ಇನ್ನೊಂದು ಕಡೆ ಶ್ರೀಗಳ ಪರವಾದ ಬಂಜಾರ ಮತ್ತು ಇತರೇ ಸಮಾಜದ ಪ್ರತಿಭಟನೆ, ಮತ್ತೊಂದು ಕಡೆ ಶ್ರೀಗಳು ಮಠ ಬಿಟ್ಟು ಹೋಗಬೇಕು ಎಂದು ಭೋವಿ ಸಮಾಜದವರು ಪ್ರತಿಭಟನೆ ಕೈಗೊಂಡಿದ್ದರು. ಘಟನೆಯ ಕುರಿತು ಪ್ರತಿಕ್ರಿಯಿಸಿದ ಕುಮಾರ ಮಹಾರಾಜ ಶ್ರೀಗಳು, ನಾನು ಮಠದಲ್ಲಿ ವಾಸವಾದಾಗಿನಿಂದ ಪಾಳುಬಿದ್ದಿದ್ದ ಮಠವನ್ನು ಅಭಿವೃದ್ಧಿ ಮಾಡಿದ್ದೇನೆ. ಇಲ್ಲಿನ ಭಕ್ತರ ಕಷ್ಟ-ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಅನೇಕ ವರ್ಷಗಳಿಂದ ಇಲ್ಲಿನ ಜನರು ಅಕ್ರಮ ಕಲ್ಲು ಗಣಿಗಾರಿಕೆಯಿಂದ ನರಳುತ್ತಿರುವುದನ್ನು ಮನಗಂಡು, ಇದರ ವಿರುದ್ಧ ದನಿ ಎತ್ತಿದ್ದಕ್ಕೆ ತಾಲೂಕಿನ ಕೆಲ ರಾಜಕೀಯ ಮುಖಂಡರ ಕುಮ್ಮಕ್ಕಿನಿಂದ, ದಂಧೆಗೆ ಅಡ್ಡಿಯಾಗುತ್ತಾರೆ ಎಂದು ಅಕ್ರಮ ದಂಧೆಕೋರರ ಷಡ್ಯಂತ್ರದಿಂದ ನನ್ನನ್ನು ಇಲ್ಲಿಂದ ಕಳಿಸುವ ತಂತ್ರ ರೂಪಿಸಿದ್ದಾರೆ.
ಅಕ್ರಮ ದಂಧೆಯ ವಿರುದ್ಧ, ಜನರ ಧ್ವನಿಯಾಗಿ ಮಾತಾಡಿದ್ದಕ್ಕೆ ನನ್ನ ಗಡಿಪಾರಿಗೆ ಆಗ್ರಹಿಸುತ್ತಿರುವುದು ಯಾವ ನ್ಯಾಯ? ನನಗೆ ಮಠ ಮುಖ್ಯವಲ್ಲ, ಸಮಾಜದಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಕಾನೂನುಬಾಹಿರ ಚಟುವಟಿಕೆ ನಿಲ್ಲಬೇಕೆಂಬ ಹೋರಾಟ ಹತ್ತಿಕ್ಕಲು ಹೋದರೆ ತೇಜೋವಧೆ ಮಾಡುತ್ತಿದ್ದಾರೆ. ಮಠದ ಭಕ್ತರು ಹಾಗೂ ಗ್ರಾಮಸ್ಥರು ನನಗೆ ಮಠ ಬಿಟ್ಟು ಹೋಗಲು ತಿಳಿಸಿದರೆ ನಾನು ಮಠದಿಂದ ದೂರ ಹೋಗಲು ಸಿದ್ಧನಿದ್ದೇನೆ. ಮಾಡಿರುವ ಆರೋಪಗಳಿಗೆ ಸಾಕ್ಷಿ ನೀಡಬೇಕು ಎಂದು ಪಟ್ಟು ಹಿಡಿದರು.
ಪರಿಸ್ಥಿತಿ ನಿಭಾಯಿಸಿ ತಿಳಿಗೊಳಿಸುವಲ್ಲಿ ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್ಐ ನಾಗರಾಜ ಗಡಾದ, ಟಿ.ಕೆ. ರಾಠೋಡ ಮತ್ತು ಸಿಬ್ಬಂದಿಗಳು ಯಶಸ್ವಿಯಾದರು.
ದಿನವಿಡೀ ನಡೆದ ಪರ-ವಿರೋಧ ಪ್ರತಿಭಟನೆಯನ್ನು ತಟಸ್ಥ ಮತ್ತು ಸುಖ್ಯಾಂತ್ಯಗೊಳಿಸಬೇಕು ಎಂದು ಎರಡೂ ಸಮಾಜದ ಹಿರಿಯರು ಸಂಜೆ ಅಡರಕಟ್ಟಿ ಬೂದವಂತ ಬಸವಣ್ಣ ದೇವಸ್ಥಾನದಲ್ಲಿ ಸಭೆ ಸೇರಿ ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಬೇಡ, ಶ್ರೀಗಳ ಪರ-ವಿರೋಧ ಪ್ರತಿಭಟನೆಯೂ ಬೇಡ. ಹಾಕಿದ ಬೀಗ ತೆಗೆದು ಶ್ರೀಗಳಿಗೆ ಅವಕಾಶ ಕೊಡೋಣ. ಶ್ರೀಗಳೂ ಸಹಿತ ಯಾವುದೇ ಹೇಳಿಕೆ ಕೊಡದಂತೆ ತಿಳಿಸೋಣ ಎಂದು ಒಮ್ಮತದ ತೀರ್ಮಾನ ಕೈಗೊಂಡರು. ತೀರ್ಮಾನದಂತೆ ಉಭಯ ಸಮಾಜದ ಮುಖಂಡರು ಹಾಗೂ ಶ್ರೀಮಠದ ಭಕ್ತರು ಶ್ರೀಗಳನ್ನು ಶ್ರೀಮಠದೊಳಗೆ ಕಳುಹಿಸುವ ಮೂಲಕ ಉಂಟಾಗಿದ್ದ ಗೊಂದಲಕ್ಕೆ ತಾತ್ಕಾಲಿಕ ತೆರೆ ಎಳೆದಿದ್ದಾರೆ.