ಜಮ್ಮು ಕಾಶ್ಮೀರದ ಪಹೆಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 28 ಮಂದಿ ಮೃತಪಟ್ಟಿದ್ದಾರೆ. ಘಟನೆಯನ್ನು ಇಡೀ ದೇಶವೇ ಖಂಡಿಸಿದೆ. ರಾಷ್ಟ್ರ, ವಿದೇಶದ ಕೆಲವು ಪ್ರಮುಖರು ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದೀಗ ಕನ್ನಡದ ಕೆಲ ನಟ-ನಟಿಯರು ಸಹ ದಾಳಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಘಟನೆಯ ಕುರಿತು ಟ್ವೀಟ್ ಮಾಡಿರುವ ಶಿವರಾಜ್ ಕುಮಾರ್, ಪ್ರಾಣ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಪಹಲ್ಗಾಮ್ನಲ್ಲಿ ನಡೆದ ಅಟ್ಯಾಕ್ ಕ್ಷಮಿಸಲಾರದ ಅಪರಾಧ, ಭಯೋತ್ಪಾದನೆ ಮಾಡುವ ಯಾರೇ ಆಗಿರಲಿ, ಅವರು ಬದುಕಲು ಅನರ್ಹ. ದಾಳಿಯಲ್ಲಿ ಮೃತರಾದವರಿಗೆ ನನ್ನ ಅಂತಿಮ ನಮನ, ಮೃತರ ಕುಟುಂಬಸ್ಥರಿಗೆ ನನ್ನ ಸಾಂತ್ವನ’ ಎಂದಿದ್ದಾರೆ.
ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿ, ಪಹಲ್ಗಾಮ್ನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ನಡೆದ ಕ್ರೂರ ದಾಳಿ ಹೃದಯ ವಿದ್ರಾವಕ. ಇದು ಕೇವಲ ವ್ಯಕ್ತಿಗಳ ಮೇಲೆ ನಡೆದಿರುವ ದಾಳಿ ಮಾತ್ರವಲ್ಲ, ಬದಲಾಗಿ ನಮ್ಮ ರಾಷ್ಟ್ರದ ಚೈತನ್ಯದ ಮೇಲೆ ನಡೆಸಲಾಗಿರುವ ದಾಳಿ. ಇದು ಸಂಯಮದ ಸಮಯವಲ್ಲ, ಬಲವಾದ ಮತ್ತು ಸ್ಪಷ್ಟವಾದ ಪ್ರತಿಕ್ರಿಯೆಯ ಸಮಯ ಎಂದಿರುವ ಅವರು, ‘ಈ ಹೇಯ ಕೃತ್ಯದಲ್ಲಿ ಭಾಗಿ ಆಗಿರುವವರನ್ನು ಶೀಘ್ರವೇ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಬಳಿ ಸುದೀಪ್ ಮನವಿ ಮಾಡಿದ್ದಾರೆ.
‘ಅಮಾಯಕ ನಾಗರೀಕರ ಮೇಲೆ ನಡೆದ ದಾಳಿ ತೀವ್ರ ದುಃಖ ನೀಡಿದೆ. ಅಮಾಯಕರ ಮೇಲಿನ ಈ ದಾಳಿ ಅತ್ಯಂತ ಹೇಯಕರ. ಇಂಥಹಾ ಕಠಿಣ ಸಮಯದಲ್ಲಿ ಸಂತ್ರಸ್ತರ ಕುಟುಂಬದ ಜೊತೆಗೆ ನಿಲ್ಲುವುದರ ಜೊತೆಗೆ ತೀವ್ರ ದುಃಖದಲ್ಲಿರುವ ದೇಶದ ಪರವಾಗಿ ನಿಲ್ಲುತ್ತಿದ್ದೇನೆ’ ಎಂದಿದ್ದಾರೆ. ಅವರ ಪತ್ನಿ, ನಟಿ ರಾಧಿಕಾ ಪಂಡಿತ್ ಸಹ ಪೋಸ್ಟ್ ಹಂಚಿಕೊಂಡಿದ್ದು, ‘ಈ ಹೃದಯ ಒಡೆಯುವ ಸುದ್ದಿ ಕೇಳಿ ಸ್ಥಿಮಿತವನ್ನೇ ಕಳೆದುಕೊಂಡಂತಾಗಿದೆ. ಈ ದುರ್ಘಟನೆಯಲ್ಲಿ ಜೀವ ಕಳೆದುಕೊಂಡ ಎಲ್ಲರ ಕುಟುಂಬದ ಬಗ್ಗೆ ಕಾಳಜಿ ಇದೆ. ನಿಮ್ಮ ಜೊತೆ ನಾವೂ ಶೋಕ ಆಚರಿಸುತ್ತೇವೆ’ ಎಂದು ನಟ ಯಶ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ನಟ ಧ್ರುವ ಸರ್ಜಾ ಟ್ವೀಟ್ ಮಾಡಿ, ‘ಭಾರತಾಂಬೆಯ ಕಳಶದಂತಿರೋ ಜಮ್ಮು ಮತ್ತು ಕಾಶ್ಮೀರ ಎಂದಿಗೂ ನಮ್ಮದೆ. ಪಹಲ್ಗಾಮ್ ನಲ್ಲಿ ಉಗ್ರರು, ಅಮಾಯಕರ ಮೇಲೆ ನಡೆಸಿದಂತ ಕೃತ್ಯ ಎಂದಿಗೂ ಯಾರೂ ಕ್ಷಮಿಸಲಾಗದು. ಎಲ್ಲಾ ಧರ್ಮದ ಸಾರ ಪ್ರೀತಿ ಹಾಗೂ ಅಹಿಂಸೆ. ಪ್ರೀತಿಯಿಂದ ಸಾಧಿಸಲಾಗದ್ದು ಹಿಂಸೆ ಹಾಗೂ ದ್ವೇಷದಿಂದ ಸಾಧಿಸಲು ಸಾಧ್ಯವೇ ಇಲ್ಲ. ಪ್ರಾಣ ಬಿಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ ಕಳೆದುಕೊಂಡವರ ಕುಟುಂಬಗಳಿಗೆ ದೇವರು ಧೈರ್ಯ ಕರುಣಿಸಲಿ’ ಎಂದಿದ್ದಾರೆ.