ವಿಜಯಸಾಕ್ಷಿ ಸುದ್ದಿ, ಗದಗ : ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಆಸ್ತಿಗಾಗಿ ಬಡಿದಾಡಿದ್ದಾರೆ, ದತ್ತಕ ಆದವರು ಜಗತ್ತನ್ನೇ ಆಳಿದ್ದಾರೆ ಎಂದು ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದ ನರಸಾಪೂರ ಶಾಖಾಮಠದ ಪೂಜ್ಯ ಮ.ನಿ.ಪ್ರ ಡಾ.ವೀರೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಬುಧವಾರ ಗದಗ-ಬೆಟಗೇರಿಯ ಸೇವಾಭಾರತಿ ಟ್ರಸ್ಟ್ ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಪೋಷಣೆಗೊಂಡ ಈರ್ವರು ಮಕ್ಕಳನ್ನು ಮಕ್ಕಳಿಲ್ಲದ ದಂಪತಿಗಳಿಗೆ ಕಾನೂನಿನ ಅನ್ವಯ ದತ್ತು ಮಗುವಾಗಿ ಹಸ್ತಾಂತರಿಸಿ ಮಾತನಾಡಿದರು.
ದತ್ತು ಮಕ್ಕಳಿಗೂ ಮಠದ ಸ್ವಾಮಿಗಳಿಗೂ ವ್ಯತ್ಯಾಸವಿಲ್ಲ. ವಿದ್ಯೆ, ಸಂಸ್ಕಾರ, ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿ ಅನುಭವ ಹೊಂದಿದವರನ್ನು ಧರ್ಮ ಮತ್ತು ಕಾನೂನು ಪ್ರಕಾರ ಪಟ್ಟಾಧಿಕಾರ ಮಾಡಿ ಮಠದ ಸ್ವಾಮಿಗಳನ್ನಾಗಿ ಮಾಡುವ ಪದ್ಧತಿ ಒಂದೆಡೆಯಾದರೆ, ದತ್ತು ಕೇಂದ್ರದಲ್ಲಿ ಪೋಷಣೆ ಮಾಡಿದ ಪರಿತ್ಯಕ್ತ ಮಕ್ಕಳನ್ನು ಸರಕಾರ ರೂಪಿಸಿದ ಕಾಯ್ದೆ-ಕಾನೂನಿನ ಅಡಿಯಲ್ಲಿ ಮಕ್ಕಳಿಲ್ಲದ ದಂಪತಿಗಳಿಗೆ ಹಸ್ತಾಂತರಿಸಲಾಗುತ್ತದೆ. ಮಠದ ಪೀಠಕ್ಕಾದವರು ಮಠವನ್ನು, ಸಮಾಜವನ್ನು ಬೆಳೆಸಿ ಮಾರ್ಗದರ್ಶನ ಮಾಡುವರು ಹಾಗೆಯೇ ದತ್ತಕ್ ಹೋದವರು ಮನ-ಮನೆ ಬೆಳಗಿಸುವರು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಮಾತನಾಡಿ, ಹುಬ್ಬಳ್ಳಿಯ ಸೇವಾಭಾರತಿ ಟ್ರಸ್ಟ್ನಿಂದ ನಡೆಯುತ್ತಿರುವ ಈ ಸಂಸ್ಥೆಯು ಸಮಾಜಮುಖಿಯಾಗಿ, ಮಾನವೀಯ ಕಾರ್ಯ ಮಾಡುವಲ್ಲಿ ತನ್ನನ್ನು ಸಮರ್ಪಿಸಿಕೊಂಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗಣ್ಯ ವ್ಯಾಪಾರಸ್ಥರಾದ ಅಭಿಷೇಕ ವಿಜಯಕುಮಾರ ಗಡ್ಡಿ, ವೀಣಾ ಅಭಿಷೇಕ ಗಡ್ಡಿ, ರಾಯನಗೌಡ ಓದುಗೌಡರ, ತುಳಸಾ ರಾಯನಗೌಡ ಓದುಗೌಡರ ಸಂದರ್ಭೋಚಿತವಾಗಿ ಮಾತನಾಡಿದರು.
ತಮಿಳುನಾಡಿನ ಸೇಲಮ್ ಹಾಗೂ ಕರ್ನಾಟಕದ ಬೆಳಗಾವಿಯ ಮಕ್ಕಳಿಲ್ಲದ ದಂಪತಿಗಳಿಗೆ ಮುಖ್ಯ ಅತಿಥಿಗಳು ಮಕ್ಕಳನ್ನು ಹಸ್ತಾಂತರಿಸಿ ಶುಭ ಕೋರಿದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಅನ್ನಪೂರ್ಣ ಗಾಣಿಗೇರ ದತ್ತು ಮಕ್ಕಳ ಸಂಸ್ಥೆ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಕಾರ್ಯಚಟುವಟಿಕೆ ಹಾಗೂ ಕರ್ತವ್ಯಗಳನ್ನು ವಿವರಿಸಿದರು. ಮಂಜುನಾಥ ಚನ್ನಪ್ಪನವರ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸಿದರು.
ಲಲಿತಾಬಾಯಿ ಮೇರವಾಡೆ ಪ್ರಾರ್ಥಿಸಿದರು. ಅರುಣ ರಾಜಪುರೋಹಿತ ಸ್ವಾಗತಿಸಿ ಪರಿಚಯಿಸಿದರು. ನರಸಿಂಹ ಕಾಮಾರ್ತಿ ನಿರೂಪಿಸಿದರು. ರಾಜೇಶ ಖಟವಟೆ ವಂದಿಸಿದರು. ಕಾರ್ಯಕ್ರಮದಲ್ಲಿ ನಾಗವೇಣಿ ಕಟ್ಟಿಮನಿ, ಉಮಾ ಚನ್ನಪ್ಪನವರ, ಜಯರಾಜ ಮುಳಗುಂದ, ಜೀತೇಂದ್ರ ಶಹಾ, ಗುರುಸಿದ್ಧಪ್ಪ ಕೊಣ್ಣೂರ, ಚೇತನ್ ಮೇರವಾಡೆ ಮುಂತಾದವರು ಪಾಲ್ಗೊಂಡಿದ್ದರು.
ಇದು ದತ್ತಕ ಅಲ್ಲ, ಸ್ವಂತಕ ಎಂದು ತಿಳಿಯಬೇಕು. ಹೆತ್ತವರಿಗಿಂತ ಹೊತ್ತು ಬೆಳೆಸಿದವರು ದೊಡ್ಡವರು. ಅಲ್ಲಿ ಭಕ್ತರು, ಇಲ್ಲಿ ಪೋಷಕರು ಆಧಾರ ಸ್ಥಂಬ ಅಷ್ಟೇ. ಇಂದಿಲ್ಲಿ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಪೋಷಣೆಗೊಂಡ ಮಕ್ಕಳನ್ನು ಪಡೆಯುವ ಪಾಲಕ-ಪೋಷಕರು ಮಗುವಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ ನೀಡಿ ಅವರನ್ನು ಸತ್ಪçಜೆಗಳನ್ನಾಗಿ ಮಾಡಲಿ. ಈ ಮಕ್ಕಳು ಸಮಾಜದಲ್ಲಿ, ದೇಶದಲ್ಲಿ ದೊಡ್ಡ ಸಾಧಕರಾಗಲಿ ಎಂದು ಡಾ.ವೀರೇಶ್ವರ ಮಹಾಸ್ವಾಮಿಗಳು ಆಶಿಸಿದರು.