ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಚುನಾವಣೆ ಬಂದಾಗ ಇಡೀ ಕೊಪ್ಪಳ ಜನ ಚುನಾವಣೆ ಬಹಿಷ್ಕಾರದ ಘೋಷಣೆ ಮಾಡಬೇಕು, ಮತ ಹಾಕಲ್ಲ ಎಂದು ನಿರ್ಣಯಿಸಿ ಹೋರಾಡಬೇಕು ಎಂದು ಪೂಜ್ಯ ಶ್ರೀ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಕರೆ ನೀಡಿದರು.
ಅವರು ನಗರಸಭೆ ಹತ್ತಿರದ ಹೋರಾಟದ ವೇದಿಕೆಯ ಹಿಂದುಗಡೆ ನಿರ್ಮಿಸಿದ ಬೃಹತ್ ವೇದಿಕೆಯಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ನಡೆದ ಬಲ್ದೋಟ ಕಾರ್ಖಾನೆಗಳ ವಿರೋಧಿ ಧರಣಿ ಸತ್ಯಾಗ್ರಹದ 100ನೇ ದಿನದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹಳ್ಳಿಗಳಿಗೆ ಭೇಟಿ ನೀಡಿದಾಗ ನಮಗೆ ಅಲ್ಲಿನ ನರಕ ಪರಿಚಯ ಆಯಿತು. ಮಹಾತ್ಮ ಗಾಂಧಿ ಅವರ ಸರ್ವೋದಯ ಪರಿಕಲ್ಪನೆಯಲ್ಲಿ ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಆಡಳಿತ ಸುಧಾರಣೆ ಆದರೆ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಎನ್ನಬಹುದು. ದುರಾದೃಷ್ಟವಶಾತ್ ಇಲ್ಲಿ ಇವುಗಳ ಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದರು.
ಈ ಹೋರಾಟ ಯಶಸ್ವಿಯಾಗಬೇಕು ಅಂದರೆ ಜನ ಸಂಘಟನೆ ಆಗಬೇಕಿದೆ. ಆಗ ಮಾತ್ರ ಅದು ಸಾಧ್ಯ. ಗೆಲ್ಲಬೇಕು ಎಂದರೆ ನಡೆ-ನುಡಿ ಶುದ್ಧವಾಗಿರಬೇಕು. ಕಾರ್ಖಾನೆ ವಿಸ್ತರಣೆ ಮಾಡಬಾರದು, ಎಚ್ಚರಿಕೆ ಕೊಡಬೇಕು ಅಲ್ಲದೇ ನಿಗಾ ವಹಿಸಬೇಕು. ಫೆ. 24ರ ಹೋರಾಟಕ್ಕೆ ಎಲ್ಲಾ ಜನಪ್ರತಿನಿಧಿಗಳು ಬರಲಿ, ನಾವೂ ಬರುತ್ತೇವೆ. ಮುಖ್ಯಮಂತ್ರಿ ಅವರನ್ನು ಭೇಟಿ ಮಾಡೋಣ, ಹೋರಾಟ ನಿಲ್ಲಿಸಬೇಕಾದರೆ ಕಾರ್ಖಾನೆ ನಿಲ್ಲಿಸಬೇಕು ಎಂದರು.
ಕಾರ್ಖಾನೆಗಳ ವಿಸ್ತರಣೆ ಮತ್ತು ಹೊಸ ಕಾರ್ಖಾನೆಗಳ ಸ್ಥಾಪನೆ ವಿರೋಧಿಸಿ ನಡೆದ ಸುದೀರ್ಘ ಹೋರಾಟದ ಭಾಗವಾಗಿ 2025ರ ಫೆ. 24ರಂದು ಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಬಂದ್ ಮಾಡಿ ಹೋರಾಟ ಮಾಡಲಾದ ನೆನಪು ಹಾಗೂ ಹೋರಾಟ ತೀವ್ರಗೊಳಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ಬೃಹತ್ ಹೋರಾಟ ಹಾಗೂ ಬಂದ್ ಕರೆ ಕೊಡಲಾಗಿದೆ. ಗವಿಮಠದಿಂದ ತಾಲೂಕು ಕ್ರೀಡಾಂಗಣದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಸುಮಾರು 10 ಸಾವಿರಕ್ಕೂ ಅಧಿಕ ಜನರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿಸುವ ಗುರಿ ಇಡಲಾಗಿದೆ.
ಮುಖ್ಯ ಅತಿಥಿಗಳಾಗಿ ಧಾರವಾಡ ಸಾಹಿತಿ, ಚಿಂತಕ ರಂಜಾನ್ ದರ್ಗಾ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರು, ರಂಗಕರ್ಮಿ, ಕವಿ, ಸಾಹಿತಿ ಸೂರ್ಯಕಾಂತ ಗುಣಕಿಮಠ, ಧಾರವಾಡ ಸಾಹಿತಿ ಅಸ್ಲಂ ದರ್ಗಾ, ಮಹಿಳಾ ಧುರೀಣೆ ಜ್ಯೋತಿ ಎಂ.ಗೊಂಡಬಾಳ, ಸುಜಾತಾ ಗುರುರಾಜ ಹಲಗೇರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಆರೋಗ್ಯದ ಕುರಿತು ಮಾತನಾಡಿದರು. ಇದೇ ಸಮಯದಲ್ಲಿ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಡಾ. ಮಂಜುನಾಥ ಸಜ್ಜನ್ ನೇತೃತ್ವದಲ್ಲಿ ನಡೆಸಿದರು.
ಹೋರಾಟದಲ್ಲಿ ಡಿ.ಎಸ್. ಕೌಜಲಗಿ, ಎಚ್.ಎಸ್. ಪಾಟೀಲ್, ಎ.ಎಂ. ಮದರಿ, ಡಿ.ಎಂ. ಬಡಿಗೇರ, ಬಿ.ಜಿ. ಕರಿಗಾರ, ದಾನಪ್ಪ ಕವಲೂರು ಭಾಗ್ಯನಗರ, ಎಸ್.ಬಿ. ರಾಜೂರು, ಜಿ.ಬಿ. ಪಾಟೀಲ್, ಕಾವ್ಯಾ ಪ್ರಸನ್ನ ಗಡಾದ್, ಶಂಭುಲಿಂಗಪ್ಪ ಹಲಗೇರಿ, ಬಸವರಾಜ ಬಳ್ಳೊಳ್ಳಿ, ಪ್ರಭು ಹೆಬ್ಬಾಳ ವೇದಿಕೆಯಲ್ಲಿದ್ದರು.
ಮಂಜುನಾಥ ಜಿ.ಗೊಂಡಬಾಳ ಸ್ವಾಗತಿಸಿ, ಮಾತನಾಡಿದರು. ಪ್ರಾಸ್ತಾವಿಕವಾಗಿ ಶಿವಕುಮಾರ ಕುಕನೂರು, ಹೋರಾಟದ ಅನುಭವದ ನುಡಿಯನ್ನು ಡಿ.ಎಚ್. ಪೂಜಾರ ನುಡಿದರು.
ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಮುಚ್ಚಿಸಬೇಕು, ಅಲ್ಲಿಯವರೆಗೆ ಶುದ್ಧ ಸಂಸ್ಕರಿಸಿದ ನೀರನ್ನು ಜನ-ಜಾನುವಾರುಗಳಿಗೆ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಬೇಕು. ಬಸಾಪುರ ಸಾರ್ವಜನಿಕ ಕೆರೆಯನ್ನು ಕೂಡಲೇ ಮರಳಿ ಜನರಿಗೆ ಬಿಟ್ಟು ಕೊಡಬೇಕು. ಭದ್ರಶ್ರೀ ಕಾರ್ಖಾನೆ ವಿಸ್ತರಣೆಗೆ ವಿರೋಧಿಸಿ ಹೋರಾಟ ತೀವ್ರಗೊಳಿಸುವುದು ಸೇರಿ ಇತರೆ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.



