ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪ್ರವಚನ ಬದುಕಿಗೆ ಬೆಳಕು ನೀಡುತ್ತದೆ. ಉತ್ತರ ಕರ್ನಾಟಕದ ಜನರಲ್ಲಿ ಭಕ್ತಿ ಭಾವ ಹೆಚ್ಚು ಕಾಣುತ್ತದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಅಭಿಪ್ರಾಯಪಟ್ಟರು.
ಅವರು ಬುಧವಾರ ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದಲ್ಲಿ ವಾದಿರಾಜ ರಾಯ್ಕರ ಅವರು ಆಯೋಜಿಸಿದ್ದ ಸಂಕಷ್ಟಹರ ಗಣಪತಿ ವೃತದ ಉದ್ಯಾಪನಾ ಮಹಾಯಾಗದ ಉದ್ಘಾಟನಾ ನೆರವೇರಿಸಿ ಮಾತನಾಡಿದರು.
ನೀಲಗುಂದದ ಗುದ್ನೇಶ್ವರ ಮಠದ ಪ್ರಭುಲಿಂಗದೇವರು ಮಾತನಾಡಿ, ಜ್ಞಾನ ಸಾಧನೆ ಪರಿಶ್ರಮದಿಂದ ಬರುತ್ತದೆ. ಅದೊಂದು ತಪಸ್ಸು. ಅವರ ತಪಸ್ಸಿನ ಫಲ ನಮಗೂ ಪ್ರಾಪ್ತಿಯಾಗುತ್ತದೆ. ರಾಯ್ಕರ ಕುಟುಂಬ ಜ್ಞಾನ ಹಂಚುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಆಶೀರ್ವಚನ ನೀಡಿದ ಧಾರವಾಡ ಮುರುಘಾಮಠ ಹಾಗೂ ಮುಳಗುಂದ ಗವಿಮಠದ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ನಾಡು ಕಂಡ ಅದ್ವಿತೀಯ ಪ್ರವಚನಕಾರ ಪಾವಗಡ ಪ್ರಕಾಶ ರಾವ್. ಇಂದು ಮಹಾಕಾವ್ಯಗಳನ್ನು ಓದುವವರೇ ಇಲ್ಲ. ಆಧ್ಯಾತ್ಮ ಪ್ರವಚನ ಎಂದರೆ ಸತ್ಯದ ಅರಿವು. ಮುನಿಗಳು ವಾಸಿಸಿದ ಈ ಮುನಿಪುರದಲ್ಲಿ ಅದೇ ಸಂಸ್ಕಾರ ಮುಂದುವರೆದಿದೆ. ಮನುಷ್ಯನಲ್ಲಿ ಜ್ಞಾನವಿದ್ದಾಗ ಬದುಕು ಬಂಗಾರ. ಅಧ್ಯಾತ್ಮದಲ್ಲಿ ನಿಮ್ಮನ್ನೂ ತೊಡಗಿಸಿಕೊಳ್ಳಿ ಎಂದರು.
ಮುಖ್ಯ ಆಹ್ವಾನಿತರಾಗಿ ಪಾವಗಡ ಪ್ರಕಾಶ ರಾವ್, ಸಾಗರದ ರವೀಂದ್ರ ಮುದ್ರಣಾಲಯದ ವಾಯ್.ಎ. ದಂತಿ, ವೈದ್ಯರಾದ ಡಾ. ಎಸ್.ಸಿ. ಚವಡಿ, ಗದಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರ, ಎಸ್ಜೆಜೆಎಂ ಸಂಯುಕ್ತ ಮಹಾವಿದ್ಯಾಲಯದ ಚೇರಮನ್ ಎಂ.ಡಿ. ಬಟ್ಟೂರ ಭಾಗವಹಿಸಿದ್ದರು. ಸಿದ್ದು ವೈ.ಕೆ ಸ್ವಾಗತಿಸಿದರು. ಪ್ರಾಚಾರ್ಯ ಎಸ್.ಎ. ಯಳವತ್ತಿ ನಿರೂಪಿಸಿದರು.