ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಬಂಜಾರ ಸಮುದಾಯವು ಅತ್ಯಂತ ಹಿಂದುಳಿದಿದ್ದು, ಶ್ರಮಜೀವಿಗಳ ಸಮಾಜವಾಗಿದೆ. ಬಂಜಾರ ಸಮುದಾಯದ ಶ್ರೀಮಂತ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಮಾದರಿಯದಾಗಿದ್ದು, ಈ ಕುರಿತು ದಾಖಲೀಕರಣವಾಗಬೇಕು ಹಾಗೂ ಈ ಸಮಾಜದಲ್ಲಿನ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಪ್ರೊ. ಎಸ್.ವ್ಹಿ. ಸಂಕನೂರ ಹೇಳಿದರು.
ಅವರು ಭಾನುವಾರ ನಗರದ ಕಳಸಾಪೂರ ರಸ್ತೆಯ ಶ್ರೀರಾಮ ಬಂಜಾರ ಭವನದಲ್ಲಿ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ಗದಗ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಬಂಜಾರ ಸಾಹಿತ್ಯ ರಾಜ್ಯ ಗೌರವಾಧ್ಯಕ್ಷ ಡಾ. ಪಿ.ಕೆ. ಖಂಡೋಭಾ ಮಾತನಾಡಿ, ನಾವೆಲ್ಲ ಸಮಾಜ ಬಾಂಧವರು ಒಂದಾಗಬೇಕು. ಈ ಸಾಹಿತ್ಯ ಪರಿಷತ್ತಿನ ಪ್ರತಿಯೊಂದು ಕಾರ್ಯಕ್ರಮಗಳು ದಾಖಲೀಕರಣವಾಗಬೇಕು. ನಮ್ಮವರನ್ನು ನಾವು ಗುರುತಿಸಿ ಗೌರವಿಸಬೇಕು. ಸಮಾಜದಲ್ಲಿರುವ ಇನ್ನೊಬ್ಬರನ್ನು ಬೆಳಸುವ ಮನೋಭಾವ ಹೊಂದಬೇಕು ಎಂದರು.
ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀಕಾಂತ ಜಾಧವ ಹಾಗೂ ಖಂಡೂ ಬಂಜಾರ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಪದಗ್ರಹಣ ನೆವೇರಿಸಿದರು.
ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀಕಾಂತ ಜಾಧವ, ಗದಗ ಜಿಲ್ಲಾ ಬಂಜಾರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಡಾ. ಭೀಮಸಿಂಗ್ ರಾಠೋಡ, ಕಾರ್ಯದರ್ಶಿ ಸೋಮು ಲಮಾಣಿ, ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ಲಮಾಣಿ, ಹಿರಿಯ ಕರ್ನಾಟಕ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುರೇಶ ಟಿ. ರಾಠೋಡ ಮಾತನಾಡಿದರು.
ಡಾ. ಬಿ.ಎಲ್. ಚವ್ವಾಣ ಮಾತನಾಡಿದರು. ವೇದಿಕೆ ಮೇಲೆ ಉಪಾಧ್ಯಕ್ಷ ಮಂಜಪ್ಪ ಎಲ್., ಡಿ.ಎಲ್. ನಾಯಕ, ಡಾ. ಎಲ್.ಪಿ. ನಾಯ್ಕ ಕಠಾರಿ, ಎಸ್.ವಾಯ್. ಲಮಾಣಿ, ಕುಮಾರ ಎಲ್. ಪೂಜಾರ, ಪಾಂಡಪ್ಪ ರಾಠೋಡ, ಜಾನು ಲಮಾಣಿ, ಥಾವು ಜಾಧವ ಮುಂತಾದವರು ಉಪಸ್ಥಿತರಿದ್ದರು.
ಸಾವಿತ್ರಿ ಲಮಾಣಿ ಪ್ರಾರ್ಥಿಸಿದರು. ಡಾ. ಕೃಷ್ಣಾ ಕಾರಬಾರಿ ಸ್ವಾಗತಿಸಿದರು. ಡಿ.ಎಸ್. ನಾಕಯ ನಿರೂಪಿಸಿದರು. ಡಾ. ಎಂ.ಆರ್. ನಾಯಕ ವಂದಿಸಿದರು.
ಬಂಜಾರ ಗಾಯಕ ರಮೇಶ ಲಮಾಣಿ ಹಾಗೂ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯರಾದ ಸಾವಿತ್ರಿ ಲಮಾಣಿ ಅವರ ಸಂಗೀತ ಕಾರ್ಯಕ್ರಮ ಜನಮನ ರಂಜಿಸಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ನಮ್ಮ ಬಂಜಾರ ಸಮಾಜದ ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿ ಅಮೂಲ್ಯವಾದದ್ದು. ಅಖಂಡ ಭಾರತದಲ್ಲಿ ಒಂದೇ ಭಾಷೆ-ಸಂಸ್ಕೃತಿಯೊಂದಿಗೆ ವೈಶಿಷ್ಟತೆಯನ್ನು ಹೊಂದಿದೆ. ಸಮಾಜದಲ್ಲಿ ಅನೇಕ ಸಾಧಕ ಮಹನೀಯರಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ. ಸಮಾಜದ ಇಂಥಹ ವಿಶೇಷ ಕಾರ್ಯಕ್ರಮಗಳಿಗೆ ಸದಾ ಸಹಕಾರ ನೀಡುವುದಾಗಿ ಹೇಳಿದರು.