ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಗದಗ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳು ಗೂಂಡಾ ವರ್ತನೆ ನಡೆಸುತ್ತಿದ್ದಾರೆಂದು ಜಿಲ್ಲಾ ಆಟೋ ಸೇನಾದ ಪ್ರಧಾನ ಕಾರ್ಯದರ್ಶಿ ಈರಣ್ಣ ವಾಲ್ಮೀಕಿ ಆರೋಪಿಸಿದರು.
ಶಿರಹಟ್ಟಿ ಪಿಎಸ್ಐ ಈರಣ್ಣ ರಿತ್ತಿ ಗೂಂಡಾ ವರ್ತನೆ ಖಂಡಿಸಿ ಶಿರಹಟ್ಟಿ ತಹಸೀಲ್ದಾರ ಕಚೇರಿ ಮುಂದೆ ಕಳೆದ 6 ದಿನಗಳಿಂದ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಶಿಬಿರಕ್ಕೆ ಭೇಟಿ ನೀಡಿ, ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.
ಗದಗ ಜಿಲ್ಲೆಯಾದ್ಯಂತ ಪೊಲೀಸ್ ಅಧಿಕಾರಿಗಳ ದುಂಡಾವರ್ತನೆ ಮಿತಿಮೀರಿದೆ. ಪೊಲೀಸ್ ಅಧಿಕಾರಿಗಳು ಮುಗ್ಧ ರೈತರು, ಆಟೋ ಚಾಲಕರು, ಲಾರಿ ಚಾಲಕರನ್ನು ವಿನಾಕಾರಣ ಹಿಡಿದು ಬೆದರಿಸಿ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ವಿವಿಧ ರಾಜಕೀಯ ವ್ಯಕ್ತಿಗಳಿಗೆ ಮಾಹಿತಿಯಿದ್ದರೂ ಸಹ ಸುಮ್ಮನಿದ್ದಾರೆ.
ಇದೇ ಪರಿಸ್ಥಿತಿ ಮುಂದುವರೆದಲ್ಲಿ ಜನಸಾಮಾನ್ಯರು, ಬಡವರು, ರೈತರು, ದಲಿತರು ಬೀದಿಗಳಲ್ಲಿ ಸಂಚರಿಸಲು ಸಹ ಪೊಲೀಸರಿಗೆ ಹಣ ನೀಡಬೇಕಾದ ಪರಿಸ್ಥಿತಿ ತಲೆದೋರಲಿದೆಯೆಂದು ಆತಂಕ ವ್ಯಕ್ತಪಡಿಸಿದರು.
ಸರಕಾರ ಕೂಡಲೇ ಜನವಿರೋಧಿ, ಹಿಂದೂ ವಿರೋಧಿ, ರೈತ ವಿರೋಧಿ ನೀತಿ ಅನುಸರಿಸುತ್ತ ಸಮಸ್ತ ಪೊಲೀಸ್ ಇಲಾಖೆಯ ಹೆಸರಿಗೆ ಕಳಂಕ ತರುತ್ತಿರುವ ಪಿಎಸ್ಐ ಈರಣ್ಣ ರಿತ್ತಿ ಅವರನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂತೋಷ ಕುರಿ, ಸೋಮಪ್ಪ ಲಮಾಣಿ, ಗಂಗವ್ವ ಲಮಾಣಿ, ಸತೀಶ ಕುಂಬಾರ, ವೆಂಕಟೇಶ ದೊಡ್ಡಮನಿ, ಸಾಗರ ಹುಯಿಲಗೋಳ, ಪಂಚಾಕ್ಷರಿ ಸಾಲಿಮಠ, ಮಂಜುನಾಥ ಪಾಟೀಲ, ಈರಪ್ಪ ಹೆಬಸೂರ, ಶ್ರೀನಿವಾಸ ನಿಂಬಲಗುಂದಿ, ಅಪ್ಪು ದಾಸರ, ಪ್ರವೀಣ ಕೋಳಿ, ಬಸವರಾಜ ಹುಲಕೋಟಿ, ಶರಣಪ್ಪ ನಾಗಾವಿ, ಮಂಜುನಾಥ ಗುಡಿಮನಿ, ಸಚಿನ್ ಮುಸೂಂಡಿ, ಮುತ್ತು ಪೂಜಾರ, ಶಿವಾನಂದ ಪೂಜಾರ, ಸಿದ್ದಣ್ಣ ಹೆಗಡೆ, ಶರಣಪ್ಪ ಲಕ್ಕುಂಡಿ, ಬಸವರಾಜ ಹುಲ್ಲೂರ, ಸುನೀಲ ಗುಡಿ, ಬಸವರಾಜ ಕೆರಿಕಟ್ಟಿ, ವಾಸು ಕಡೆಮನಿ, ರಾಮು ಹಂಡಿ, ಮಂಜು ಗುಡಿ, ಶಿವಾನಂದ ದಂಡಿನ, ವಿನಾಯಕ ವಾಲ್ಮೀಕಿ, ಪ್ರಶಾಂತ ಬೆಟಗೇರಿ, ಸುರೇಶ ಗೋಡಿ, ಶಶಿಧರ ಗಟ್ಟಿ ಮುಂತಾದವರಿದ್ದರು.
ಮುಗ್ಧ ರೈತ ಸೋಮಪ್ಪ ಲಮಾಣಿ ಮೇಲೆ ಹಲ್ಲೆ ನಡೆಸಿ ಹಣ ವಸೂಲಿ ಮಾಡಿ ಸುಳ್ಳು ಪ್ರಕರಣ ದಾಖಲಿಸಿರುವ ಶಿರಹಟ್ಟಿ ಪಿಎಂಐ ಈರಣ್ಣ ರಿತ್ತಿ ಕಳೆದ ವರ್ಷ ವಿಜಯದಶಮಿಯಂದು ದುರ್ಗಾದೇವಿ ಮೂರ್ತಿಯನ್ನು ವಿಸರ್ಜಿಸಿ ಶಾಂತಿಯುತವಾಗಿ ಮನೆಗೆ ಮರಳುತ್ತಿದ್ದ ಗೋಸಾವಿ ಜನಾಂಗದ ಮಹಿಳೆಯರು, ಯುವಕರ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ್ದರು. ಪಿಎಸ್ಐ ಈರಣ್ಣ ರಿತ್ತಿ ನಡೆಸಿದ ಹಲ್ಲೆಯಿಂದ ಅನೇಕ ಮಹಿಳೆಯರು, ಯುವಕರು ಗಾಯಗೊಂಡಿದ್ದರು. ಆ ಸಂದರ್ಭದಲ್ಲಿ ವಿವಿಧ ಹಿಂದೂ ಸಂಘಟನೆಗಳು ನಡೆಸಿದ್ದ ಧರಣಿ ಸತ್ಯಾಗ್ರಹ, ಲಕ್ಷ್ಮೇಶ್ವರ ಬಂದ್ಗೂ ಸಹ ತಮ್ಮ ಸಂಘಟನೆಯಿಂದ ಬೆಂಬಲ ನೀಡಲಾಗಿತ್ತೆಂದು ಈರಣ್ಣ ವಾಲ್ಮೀಕಿ ಸ್ಮರಿಸಿದರು.



