ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಗೋಧೂಳಿ ಸಮಯದಲ್ಲಿ ಅಪಾರ ಭಕ್ತ ಸಮೂಹದ ನಡುವೆ ಶ್ರದ್ಧಾ-ಭಕ್ತಿಯಿಂದ ಕಡುಬಿನ ಕಾಳಗ ನೆರವೇರಿತು.
ಕಡುಬಿನ ಕಾಳಗದ ಸಂದರ್ಭದಲ್ಲಿ ಸೋಮೇಶ್ವರ ದೇವರ ಉತ್ಸವ ಮೂರ್ತಿಯೊಂದಿಗೆ ಪಲ್ಲಕ್ಕಿಯು ದೇವಸ್ಥಾನದ ಆವರಣದ, ರಥಬೀದಿ ಪ್ರದಕ್ಷಣೆ ಮತ್ತು ಅಲ್ಲಿಂದ ಸೋಮೇಶ್ವರ ಪಾದಗಟ್ಟಿಗೆ ತೆರಳಿ ಅಲ್ಲಿ 5 ಸುತ್ತು ಪ್ರದಕ್ಷಣೆಯೊಂದಿಗೆ ಕಡುಬಿನ ಕಾಳಗ ನೆರವೇರಿಸಲಾಯಿತು. ಈ ವೇಳೆ ಮುಳಗುಂದ ಮನೆತನದವರು ಸಂಪ್ರದಾಯದಂತೆ ಕಡುಬಿನ ಚೂರುಗಳು, ಬೆಂಡು, ಬತ್ತಾಸ, ಬೆಲ್ಲ, ಹಣ್ಣು, ಕಲ್ಲುಸಕ್ಕರೆ ಇತ್ಯಾದಿ ಸಿಹಿ ಪದಾರ್ಥಗಳನ್ನು ಸೇರಿದ್ದ ಅಪರ ಭಕ್ತ ಸಮೂಹದತ್ತ ಎಸೆದರು.
ಸೇರಿದ್ದ ಭಕ್ತರು ಅವುಗಳನ್ನು ಭಕ್ತಿಯಿಂದ ಆಯ್ದುಕೊಂಡು ಸ್ವೀಕರಿಸಿ ಈ ಪ್ರಸಾದ ಸೇವನೆಯಿಂದ ನಮ್ಮ ಬದುಕಿನ ಕಷ್ಟ ಕಾರ್ಪಣ್ಯಗಳು, ರೋಗ-ರುಜಿನಗಳು ದೂರಾಗಲಿ ಎಂದು ಪ್ರಾರ್ಥಿಸಿದರು. ಸೋಮೇಶ್ವರ ಜಾತ್ರಾ ಕಮಿಟಿಯ ಮುಖಂಡರಾದ ಕುಬೇರಪ್ಪ ಮಹಾಂತಶೆಟ್ಟರ, ಚನ್ನಪ್ಪ ಜಗಲಿ, ವಿರೂಪಾಕ್ಷ ಆದಿ, ಬಸವರಾಜ ಮೆಣಸಿನಕಾಯಿ, ಸೋಮಣ್ಣ ಮುಳಗುಂದ, ಅಶೋಕ ಮುಳಗುಂದ, ರಾಮಣ್ಣ ಗೌರಿ, ಶಿವಯೋಗಿ ಅಂಕಲಕೋಟಿ, ಈರಣ್ಣ ಮುಳಗುಂದ, ಸಿದ್ದನಗೌಡ ಬಳ್ಳೊಳ್ಳಿ, ಬಸಣ್ಣ ಬಾಳಿಕಾಯಿ, ನಂದೀಶ ಬಂಡಿವಾಡ, ಪ್ರಕಾಶ ಮುಳಗುಂದ, ದೀಪು ಕೊಂಚಿಗೇರಿಮಠ ಅರ್ಚಕರಾದ ಸಮೀರ ಪೂಜಾರ ಸೇರಿದಂತೆ ದೇವಸ್ಥಾನ ಜಾತ್ರಾ ಸಮಿತಿಯವರು, ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿಯವರು, ಹಿರಿಯರು, ಅರ್ಚಕರ ಸಮಿತಿಯವರು, ಯುವಕರ ತಂಡ, ಭಕ್ತರು ಪಾಲ್ಗೊಂಡಿದ್ದರು.