ಈಗಾಗಲೇ ಮುಂಗಾರು ಮಳೆ ಆರಂಭವಾಗಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಗದಗ ಜಿಲ್ಲೆಯ ಕಪ್ಪತ್ತಗುಡ್ಡವು ಹಚ್ಚು ಹಸಿರಿನಿಂದ ಕಂಗೊಳಿಸುತ್ತಿದೆ. ಇದರಿಂದ ಯುವಕರು ದಿನ ನಿತ್ಯವೂ ಗುಂಪುಗುಂಪಾಗಿ ಸೇರಿಕೊಂಡು ಕಪ್ಪತ್ತಗುಡ್ಡವನ್ನು ನೋಡಲು ಟ್ರೆಕ್ಕಿಂಗ್ಗೆ ಬಂದು ಕಪ್ಪತ್ತಗುಡ್ಡದ ಪ್ರಕೃತಿಯ ಸೌಂದರ್ಯವನ್ನು ಆನಂದಿಸುತ್ತಿದ್ದಾರೆ.
ಇAದಿನ ಯುವಕರಿಗೆ ಟ್ರೆಕ್ಕಿಂಗ್ ಎಂದರೆ ಎಲ್ಲೂ ಇಲ್ಲದ ಉತ್ಸಾಹ, ಹುಮ್ಮಸು. ಕಪ್ಪತ್ತಗುಡ್ಡದ ಪ್ರಕೃತಿಯ ಸೌಂದರ್ಯವನ್ನು ನೋಡಲು ದಿನ ನಿತ್ಯವೂ ನೂರಾರು ಯುವಕರು ಬರುತ್ತಿದ್ದು, ಕಪ್ಪತ್ತಗುಡ್ಡದ ಸೌಂದರ್ಯವನ್ನು ಸವಿದು ತಮ್ಮ ಮೊಬೈಲ್ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಕಪ್ಪತ್ತಗುಡ್ಡದ ಸೌಂದರ್ಯದ ಜೊತೆಗೆ ತೆಗೆದ ಫೋಟೋಗಳನ್ನು ತಮ್ಮ ವಾಟ್ಸಪ್ನಲ್ಲಿ ಸ್ಟೇಟಸ್ ಇಟ್ಟುಕೊಂಡು ಪ್ರಕೃತಿಯ ಸೌಂದರ್ಯದ ಬಗ್ಗೆ ನಾಲ್ಕೈದು ಸಾಲುಗಳನ್ನು ಬರೆದು ಹರಿಬಿಡುತ್ತಿದ್ದಾರೆ.
ಇದರಿಂದ ಕಪ್ಪತ್ತಗುಡ್ಡ ನೋಡಲು ಬೇರೆ ಬೇರೆ ಜಿಲ್ಲೆ, ತಾಲೂಕು ಅಂದರೆ ಹುಬ್ಬಳ್ಳಿ, ಹಾವೇರಿ, ಧಾರವಾಡ, ಶಿರಶಿ ಸೇರಿದಂತೆ ಅನೇಕ ಜಿಲ್ಲೆಗಳಿಂದ ಯುವಕರು ತಂಡ ಮಾಡಿಕೊಂಡು ಟ್ರೆಕ್ಕಿಂಗ್ಗೆ ಬರುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ.
ಯುವಕರು ಟ್ರೆಕ್ಕಿಂಗ್ ಮಾಡಿ ಮನೋಹರವಾದ ಪ್ರಾಕೃತಿಕ ಸೊಬಗನ್ನು ಕಣ್ತುಂಬಿಕೊಳ್ಳುತ್ತಾ ಗುಡ್ಡಗಳನ್ನು ಹತ್ತುವ ಮತ್ತು ಓಡುವ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಗುಡ್ಡವನ್ನು ಹತ್ತಿ ಪ್ರಕೃತಿಯ ಸೌಂದರ್ಯ ಸವಿದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ. ಕಪ್ಪತ್ತಗುಡ್ಡದ ಸೌಂದರ್ಯದಲ್ಲಿ ಅನೇಕ ರೀತಿಯ ರೀಲ್ಸ್ ಮಾಡಿಕೊಂಡು ತಮ್ಮ ಸಂತೋಷವನ್ನು ಯುವಕರು ಹಚ್ಚಿಕೊಳ್ಳುತ್ತಿದ್ದಾರೆ.
ಯುವಕರು ಟ್ರೆಕ್ಕಿಂಗ್ ಮಾಡಿ ಮನಸ್ಸಿನ ಪ್ರಶಾಂತತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ವರ್ಣಿಸಲಾರದ ಆನಂದವನ್ನೂ ಪಡೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಕರು ಖಿನ್ನತೆ, ಕಿರಿಕಿರಿಗಳನ್ನು ಅನುಭವಿಸುತ್ತಿದ್ದು, ಇದಕ್ಕೆ ಯಾವುದೇ ರೀತಿಯ ಔಷಧಿಗಳು, ಚಿಕಿತ್ಸೆ ಇಲ್ಲ. ಆದ್ದರಿಂದ ಯುವಕರು ಹೆಚ್ಚು ಹೆಚ್ಚು ಟ್ರೆಕ್ಕಿಂಗ್ ಮಾಡಬೇಕು. ಇದರಿಂದ ಯುವಕರು ತಮ್ಮ ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಲು ಸಾಧ್ಯವಿದೆ.
ಒಟ್ಟಾರೆಯಾಗಿ ಯುವಕರ ಟ್ರೆಕ್ಕಿಂಗ್ನಿಂದ ಕಪ್ಪತ್ತಗುಡ್ಡಕ್ಕೆ ಇನ್ನಷ್ಟು ಕಳೆ ಬಂದಿದೆ. ಈ ಟ್ರೆಕ್ಕಿಂಗ್ ಮಾಡುವುದರಿಂದ ಹತ್ತಾರು ಲಾಭಗಳು ನಮಗೆ ಗೊತ್ತಿಲ್ಲದೇ ಪಡೆದುಕೊಳ್ಳಬಹುದು. ಒಟ್ಟಾರೆಯಾಗಿ ಯುವಕರು ಗುಂಪುಗುಂಪಾಗಿ ಟ್ರೆಕ್ಕಿಂಗ್ ಮಾಡುತ್ತಿರುವದರಿಂದ ತಮ್ಮ ಮನಸ್ಸಿಗೆ ಸಂತೋಷ ಹಾಗೂ ಉತ್ತಮವಾದ ಆಮ್ಲಜನಕ ಸೇವನೆ ಮಾಡಿ ಸಂತಸವನ್ನೂ ಅನುಭವಿಸುತ್ತಿದ್ದಾರೆ. ಹಾಗಾದರೆ ಇನ್ನೇಕೆ ತಡ, ನೀವೂ ಕಪ್ಪತ್ತಗುಡ್ಡಕ್ಕೆ ಭೇಟಿ ಕೊಟ್ಟು ಉತ್ತಮವಾದ ಪ್ರಕೃತಿಯ ಸೌಂದರ್ಯವನ್ನು ಸವಿದು ಎಂಜಾಯ್ ಮಾಡಿ. ಉತ್ತಮವಾದ ಆಮ್ಲಜನಕ ಸೇವನೆ ಮಾಡಿಕೊಂಡು ಚುರುಮುರಿಯನ್ನೂ ಸವಿದು ಮನೆಗೆ ಬನ್ನಿ…!
– ಸುರೇಶ ಎಸ್.ಲಮಾಣಿ.
ಛಾಯಾಗ್ರಾಹಕರು, ಲಕ್ಷ್ಮೇಶ್ವರ