ವಿಜಯಸಾಕ್ಷಿ ಸುದ್ದಿ, ಗದಗ : ಹಿರಿಯ ರಾಜಕೀಯ ಮುತ್ಸದ್ಧಿಯಾಗಿದ್ದ ಗದುಗಿನ ಮಾಜಿ ಶಾಸಕ ದಿ. ಸಿ.ಎಸ್. ಮುತ್ತಿನಪೆಂಡಿಮಠ ಅವರು ಸರಳ, ಸಜ್ಜನಿಕೆಯ ನಿಗರ್ವಿ ವ್ಯಕ್ತಿಯಾಗಿದ್ದು, ಆದರ್ಶ ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಅವರು ಸೋಮವಾರ ನಗರದ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಸಮುದಾಯ ಭವನದಲ್ಲಿ ಗದುಗಿನ ಶ್ರೀ ಸಿ.ಎಸ್. ಮುತ್ತಿನಪೆಂಡಿಮಠ ಪ್ರತಿಷ್ಠಾನ ಟ್ರಸ್ಟ್ ಏರ್ಪಡಿಸಿದ್ದ ಲಿಂ. ಸಿ.ಎಸ್. ಮುತ್ತಿನಪೆಂಡಿಮಠ ಅವರ 95ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಲ್ಲಸಮುದ್ರ ಗ್ರಾಮದ ಬಳಿಯ ಅಂಜುಮನ್ ಪಾಲಿಟೆಕ್ನಿಕ್ ಕಾಲೇಜ್ ಸೇರಿದಂತೆ ಗದಗ ಪರಿಸರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು. ಗದುಗಿಗೆ ತುಂಗಭದ್ರ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಿದ ಭಗೀರಥ ಮುತ್ತಿನಪೆಂಡಿಮಠ. ಅವರು ಹಿರಿಯ ರಾಜಕೀಯ ಮುತ್ಸದ್ಧಿ ಅಷ್ಟೇ ಅಲ್ಲ ಹಿರಿಯ ಮುತ್ಸದ್ಧಿ ನ್ಯಾಯವಾದಿಗಳೂ ಆಗಿದ್ದರು ಎಂದು ಬಣ್ಣಿಸಿದರು.
ಈ ಪ್ರತಿಷ್ಠಾನವು ಮುತ್ತಿನಪೆಂಡಿಮಠ ಅವರ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಲವಾರು ವೈವಿಧ್ಯಮಯ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡು ಅನುಷ್ಠಾನಗೊಳಿಸುತ್ತಿರುವದು ಅಭಿನಂದನೀಯ.
ಈ ಸಲ 11 ನಿವೃತ್ತ ಹಿರಿಯ ನೌಕರರನ್ನು ಗೌರವಿಸಿದ್ದು ಶ್ಲಾಘನೀಯ. ಪ್ರತಿಷ್ಠಾನ ಹೀಗೆಯೇ ಸಮಾಜಮುಖಿ, ಜನಮುಖಿ ಕಾರ್ಯ ಮಾಡಲಿ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಮಾತನಾಡಿ, ಮುತ್ತಿನಪೆಂಡಿಮಠ ಅವರ ಕಾರ್ಯವೈಖರಿ, ಸಾಮಾಜಿಕ ಕಾರ್ಯಗಳು, ನಡೆ-ನುಡಿ ಎಲ್ಲರಿಗೂ ಮಾದರಿಯಾಗಿವೆ. ಮುತ್ತಿನಪೆಂಡಿಮಠ ಅವರ ಜನ್ಮದಿನಾಚರಣೆಯ ನೆಪದಲ್ಲಿ ನಿವೃತ್ತ ನೌಕರರನ್ನು ಸನ್ಮಾನಿಸಿ ಗೌರವಿಸುತ್ತಿರುವದು ಇಡೀ ಹಿರಿಯ ಜೀವಿಗಳನ್ನೇ ಗೌರವಿಸಿದಂತೆ. ಹಿರಿಯರ ಮಾರ್ಗದರ್ಶನ, ಆಶೀರ್ವಾದ ಸದಾವಕಾಲ ಇರಲೆಂದರು.
ಇನ್ನೋರ್ವ ಮುಖ್ಯ ಅತಿಥಿ, ನಿವೃತ್ತ ಹಿರಿಯ ನೌಕರರಾದ ಬಿ.ಬಿ. ಹೂಗಾರ ಸಂದರ್ಭೋಚಿತವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಗೌರವ ಅಧ್ಯಕ್ಷ ಡಾ. ಎನ್.ಬಿ. ಪಾಟೀಲ ವಹಿಸಿದ್ದರು.
ಸಮಾರಂಭದಲ್ಲಿ ನಿವೃತ್ತ ನೌಕರರಾದ ಬಿ.ಎ. ವಸ್ತçದ, ಜಿ.ಎಸ್. ಹಿರೇಮಠ, ಎಂ.ಎಚ್. ಹುಲ್ಲೂರ, ಎಸ್.ಕೆ. ಖಂಡಪ್ಪಗೌಡರ, ಬಿ.ಎನ್. ಯರನಾಳ, ಐ.ಕೆ. ಬಲೂಚಗಿ, ಎನ್.ಆರ್. ಹೊಸಳ್ಳಿ, ರಾಜಶೇಖರ ಕರಡಿ, ಎಂ.ಎನ್. ಮಣ್ಣಮ್ಮನವರ, ಎಸ್.ಕೆ. ಬದಾಮಿ, ಪ್ರೇಮಾ ಹೊನ್ನಗುಡಿ ಸೇರಿದಂತೆ ಗಣ್ಯರುನ್ನು ಸನ್ಮಾನಿಸಿ ಗೌರವಿಸಲಾಯಿತು. ಜನ್ಮದಿನಾಚರಣೆ ನಿಮಿತ್ತ ರಕ್ತದಾನ ಶಿಬಿರ ಜರುಗಿತು.
ನಿವೃತ್ತ ಶಿಕ್ಷಕಿ ಮುಳಗುಂದ ಪ್ರಾರ್ಥಿಸಿದರು. ಪ್ರತಿಷ್ಠಾನದ ಅಧ್ಯಕ್ಷ ವಸಂತ ಮೇಟಿ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರು ಬಾಳಿಹಳ್ಳಿಮಠ ನಿರೂಪಿಸಿದರು. ವಿಜಯಾನಂದ ಮುತ್ತಿನಪೆಂಡಿಮಠ ವಂದಿಸಿದರು. ಸಮಾರಂಭದಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಎಸ್.ಜಿ. ಪಲ್ಲೇದ, ಲತಾ ಮುತ್ತಿನಪೆಂಡಿಮಠ, ಸುಜಾತಾ ಗುಡಿಮನಿ ಸೇರಿದಂತೆ ನಿವೃತ್ತ ನೌಕರರು, ಮುತ್ತಿನಪೆಂಡಿಮಠ ಅವರ ಅಭಿಮಾನಿಗಳು ಪಾಲ್ಗೊಂಡಿದ್ದರು.
ಹಣ, ಅಧಿಕಾರಕ್ಕಾಗಿ ಬೆನ್ನು ಹತ್ತದೆ ಸಮಾಜಮುಖಿಯಾಗಿ, ಜನಮುಖಿಯಾಗಿ ಕಾರ್ಯ ಮಾಡಿದವರು. ಸಹಾಯ, ನ್ಯಾಯ ಕೇಳಿ ಬಂದವರನ್ನು ಹಾಗೇ ಕಳುಹಿಸಿದವರಲ್ಲ. ಅವರ ಕೆಲಸ ಮಾಡಿ ಸಮಾಧಾನಪಡಿಸಿ, ಸಂತೃಪ್ತಿಯಾದ ಹಿರಿಯ ಜೀವಿ ಮುತ್ತಿನಪೆಂಡಿಮಠ ಅವರಿಂದ ನಾನೂ ಉಪಕೃತನಾಗಿದ್ದೇನೆ. ನನ್ನನ್ನು ಎಂ.ಎಲ್.ಸಿ ಚುನಾವಣೆಯಲ್ಲಿ ಗೆಲ್ಲಿಸಬೇಕೆನ್ನುವ ಅವರ ಆಸೆ ಕೊನೆಗೂ ಸಾಕಾರಗೊಂಡು ಖುಷಿಪಟ್ಟ ಅವರ ಆಶೀರ್ವಾದ ನನಗೆ ಧನ್ಯತೆಯನ್ನು ತಂದಿದೆ ಎಂದು ಎಸ್.ವಿ. ಸಂಕನೂರು ಹೇಳಿದರು.
Advertisement