ವಿಜಯಸಾಕ್ಷಿ ಸುದ್ದಿ, ಧಾರವಾಡ: ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ವತಿಯಿಂದ ಹೊಸದಾಗಿ ನೇಮಕಗೊಂಡ ಅಭಿಯಂತರರುಗಳಿಗೆ 30 ದಿನಗಳ ಕಡ್ಡಾಯ ತರಬೇತಿಯನ್ನು ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದ್ದು, ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಬುಧವಾರ ಜರುಗಿತು.
ತರಬೇತಿ ಸಂಯೋಜಕ ಪ್ರೊ. ಬಿ.ವೈ. ಬಂಡಿವಡ್ಡರ ಪ್ರಾಸ್ತಾವಿಕವಾಗಿ ಮಾತನಾಡಿ, ಈ 30 ದಿನದ ತರಬೇತಿಯಲ್ಲಿ ಇಂಜಿನಿಯರ್ಗಳಿಗೆ ತಾಂತ್ರಿಕ ಹಾಗೂ ಆಡಳಿತ ವಿಷಯಗಳಲ್ಲದೇ ಕೃಷಿಗೆ ಸಂಬಂಧಪಟ್ಟ ವಿಷಯಗಳು, ಜಲ ಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ಕಾಯ್ದೆಗಳು, ನೀರಾವರಿ ನಿರ್ವಹಣೆಯಲ್ಲಿ ಸಹಭಾಗಿತ್ವದ ಮಹತ್ವ, ಉಸ್ತುವಾರಿ ಮತ್ತು ಮೌಲ್ಯಮಾಪನ ಹಾಗೂ ಅಭಿಯಂತರರ ಪಾತ್ರ, ಮಣ್ಣಿನ ಆರೋಗ್ಯ ಮತ್ತು ಪರೀಕ್ಷೆ, ಕರ್ನಾಟಕ ನಾಗರಿಕ ಸೇವಾ ನಿಯಮಗಳು, ಸಮಯ ಹಾಗೂ ಒತ್ತಡ ನಿರ್ವಹಣೆ ವಿಷಯಗಳು, ತಾಂತ್ರಿಕ ಕೌಶಲ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳನ್ನು ಕೈಗೊಳ್ಳಲಾಗಿದೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಶಿವಕುಮಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ತರಬೇತಿಯು ಹೊಸದಾಗಿ ನೇಮಕಗೊಂಡ ಅಭಿಯಂತರರಿಗೆ ಅವಶ್ಯಕವಾಗಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು. ನಾವು ತರಬೇತಿಯಲ್ಲಿ ಬೋಧಿಸುವ ವಿಷಯಗಳನ್ವಯ ಮಾಹಿತಿ ಪಡೆದುಕೊಂಡು ದಿನನಿತ್ಯ ಕೆಲಸಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಡಾ. ಗಿರೀಶ ಎನ್.ಮರಡ್ಡಿ ಮಾತನಾಡಿ, ಹೊಸದಾಗಿ ನೇಮಕಗೊಂಡ ಅಭಿಯಂತರರುಗಳಿಗೆ ತರಬೇತಿಯು ಅವಶ್ಯವಾಗಿದ್ದು, ಇಲಾಖೆಯ ಕಾನೂನಿನ ಚೌಕಟ್ಟಿನ ಅಡಿ ಕೆಲಸಗಳನ್ನು ಕೈಗೊಂಡು ಸರ್ವಜನಿಕರಿಗೆ ಅನುಕೂವಾಗುವಂತೆ ನಿರ್ವಹಣೆ ಮಾಡಬೇಕು. ಅಭಿಯಂತರರರು ಈ 30 ದಿನಗಳ ತರಬೇತಿಯಲ್ಲಿ ಎಲ್ಲಾ ವಿಷಯಗಳ ಕುರಿತು ಕೂಲಂಕುಷವಾಗಿ ತಿಳಿದುಕೊಂಡು ತಮ್ಮ ತಮ್ಮ ಕೇತ್ರ ವ್ಯಾಪ್ತಿಯಲ್ಲಿ ಬರುವ ಕೆಲಸಗಳ ನಿರ್ವಹಣೆ ಮಾಡಲು ಸರ್ವ ಸನ್ನದ್ಧರಾಗಿ ಇರಬೇಕು ಎಂದರು.
ತರಬೇತಿಯ ಸಹ ಸಂಯೋಜಕ ಚಂದ್ರಪ್ಪ ಓಲೇಕಾರ ಸ್ವಾಗತಿಸಿದರು. ಅನುರಾಧಾ ಮಳಗಿ ಕಾರ್ಯಕ್ರಮವನ್ನು ನಿರೂಪಿಸಿದರು.ಫಕ್ಕಿರೇಶ ಅಗಡಿ ವಂದಿಸಿದರು.