ಬೀದರ್: ಕೇಂದ್ರ ಸರ್ಕಾರದ ಬಜೆಟ್ ಬಹಳಷ್ಟು ಅತ್ಯುತ್ತಮ ಮತ್ತು ಒಳ್ಳೆಯ ಬಜೆಟ್ ಆಗಿದೆ. ಯಾಕೆಂದರೆ, ನಮ್ಮ ದೇಶದ ಪ್ರಧಾನ ಮಂತ್ರಿಗಳಾಗಿರುವ ನರೇಂದ್ರ ಮೋದಿಯವರ ಪರಿಕಲ್ಪನೆಯಾಗಿರುವ ‘ವಿಕಸಿತ ಭಾರತ’ 2045ರಲ್ಲಿ ಭಾರತ ಯಾವ ರೀತಿಯಾಗಿರಬೇಕು ಎಂಬುದಕ್ಕೆ ಈ ಬಜೆಟ್ ಪೂರಕವಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದ್ದಾರೆ.
ಶನಿವಾರ ಮಂಡನೆಯಾಗಿರುವ ಕೇಂದ್ರ ಸರ್ಕಾರದ ಬಜೆಟ್ ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ಈ ಬಜೆಟ್ ದೇಶದಲ್ಲಿ ಹೆಚ್ಚಾಗಿರುವ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತಿದೆ. ಆದಾಯ ತೆರಿಗೆಯಲ್ಲಿ ಸಾಕಷ್ಟು ವಿನಾಯಿತಿ ಈ ಬಜೆಟ್ ನಲ್ಲಿ ನೀಡಲಾಗಿದೆ. 12 ಲಕ್ಷ ರೂ.ಗಳವರೆಗೆ ವಿನಾಯಿತಿ ನೀಡಿರುವುದು ಬಂಪರ್ ಕೊಡುಗೆ ಎಂದು ನಾನು ಹೇಳಬಯಸುತ್ತೇನೆ. ಯಾಕೆಂದರೆ, ಎಲ್ಲಾ ತೆರಿಗೆದಾರರಿಗೆ ಇದರಿಂದ ಅನುಕೂಲ ಆಗಲಿದೆ ಎಂದಿದ್ದಾರೆ.
ಮಹಿಳೆಯರು ಸ್ವಯಂ ಉದ್ಯೋಗ ಸ್ಥಾಪಿಸಲು 2 ಕೋಟಿ ರೂ.ಗಳವರೆಗೆ ಲೋನ್ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೇ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಆಧಾರದ ಮೇಲೆ ಈ ಮೊದಲು ಇದ್ದ 3. ಲಕ್ಷ ರೂ. ವರೆಗಿನ ಲೋನ್ ಈಗ 5 ಲಕ್ಷ ರೂ. ವರೆಗೆ ಹೆಚ್ಚಿಸಲಾಗಿದೆ.
ಅಲ್ಲದೇ ಪರ್ಟಿಲೈಜರ್ ಗಳಿಗೂ ಸಹಾಯಧನ ಹೆಚ್ಚಿಸಿದ್ದಾರೆ. ಅಷ್ಟೇ ಅಲ್ಲದೇ ಯುವಕರಿಗೆ ಸೌಲಭ್ಯಗಳನ್ನು ಹೆಚ್ಚಿಸಿದ್ದಾರೆ. ಶಾಲಾ – ಕಾಲೇಜುಗಳಿಗೆ, ಆಸ್ಪತ್ರೆಗಳಿಗೆ ಇಂಟರ್ನೆಟ್ ಸೌಲಭ್ಯ ಒದಗಿಸುವುದು ಸೇರಿದಂತೆ ಅನೇಕ ಸೌಕರ್ಯಗಳ ಬಗ್ಗೆ ಹೇಳಿದ್ದಾರೆ.
ಮುಖ್ಯವಾಗಿ ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲೆಗೊಂದು ಡೇ ಕೇರ್ ಕ್ಯಾನ್ಸರ್ ಆಸ್ಪತ್ರೆಯನ್ನು ತೆರೆಯಲಾಗುವುದು ಎಂದು ಹೇಳಿದ್ದಾರೆ. ಇದು ಬಹಳ ಒಳ್ಳೆಯದಾಗಿದೆ. ಪಿಎಲ್ಐ ಸ್ಕೀಮ್ ಗಳಲ್ಲಿ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಕ್ಷೇತ್ರಕ್ಕೆ ಆದ್ಯತೆ ಕೊಟ್ಟಿರುವುದು ಒಳ್ಳೆಯದಾಗಿದೆ.
ಒಟ್ಟಾರೆಯಾಗಿ ಇದು ಬಹಳಷ್ಟು ಒಳ್ಳೆಯ ಬಜೆಟ್ ಆಗಿದೆ. ಮುಂದಿನ ದಿನಗಳಲ್ಲಿ ನಮ್ಮ ದೇಶ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಬೇಕು. ವಿಶ್ವದಲ್ಲಿಯೇ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿ ನಮ್ಮ ದೇಶ ಹೊರಹೊಮ್ಮಬೇಕಾಗಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಾಗುತ್ತಿದೆ ಎಂದು ನಾನು ಹೇಳ ಬಯಸುತ್ತೇನೆ ಎಂದು ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದ್ದಾರೆ.