ವಿಜಯಸಾಕ್ಷಿ ಸುದ್ದಿ, ಗದಗ: ಪರಿಶಿಷ್ಟ ಜಾತಿಗಳ ಉಪವರ್ಗೀಕರಣ ಹಾಗೂ ಒಳ ಮೀಸಲಾತಿ ಸಮೀಕ್ಷೆಯ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಬಂಜಾರಾ ಲಂಬಾಣಿ ಹಕ್ಕು ಸಂರಕ್ಷಣಾ ಸಮಿತಿಯ ವತಿಯಿಂದ ಗದಗ ನಗರದ ಪರಿವೀಕ್ಷಣಾ ಮಂದಿರದಲ್ಲಿ ಸಮಾಲೋಚನಾ ಹಾಗೂ ಜಾಗೃತಿ ಸಭೆ ಜರುಗಿತು.
ಸಭೆಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ರಾಜಾನಾಯ್ಕ ಮಾತನಾಡಿ, ಕೇಂದ್ರ ಸರ್ಕಾರ ಕೈಗೊಳ್ಳುವ ಜಾತಿಗಣತಿ ವಿಜ್ಞಾನ ಸಮ್ಮತವಾಗಿದೆ. ಅದರ ಮೂಲಕವೇ ಸಮಗ್ರ ಮಾಹಿತಿ ಸಿಗಲಿದ್ದು, ಪ್ರಸ್ತುತ ರಾಜ್ಯ ಸಮೀಕ್ಷೆಯ ಅವಶ್ಯಕತೆಯಿಲ್ಲ. ಅಸ್ಪಷ್ಟ ಸಮೀಕ್ಷೆಯಲ್ಲಿ ಯಾವ ಮಾಹಿತಿಯನ್ನು ಜನರಿಂದ ಸಂಗ್ರಹಿಸಬೇಕು ಎಂಬುದು ಸ್ಪಷ್ಟವಾಗಿಲ್ಲ. ದಾಖಲೆ ರಹಿತ ಜನವಸತಿಗಳಲ್ಲಿ ವಾಸಿಸುವ, ಅನಕ್ಷರಸ್ಥ, ಅಮಾಯಕ ಲಂಬಾಣಿ ಸಮುದಾಯದ ಬಹುಪಾಲು ಜನರು ಈ ಸಮೀಕ್ಷೆಯಲ್ಲಿ ನಿರೀಕ್ಷಿತವಾಗಿ ಭಾಗವಹಿಸಲು ಸಾಧ್ಯವಿಲ್ಲ. ಜಾತಿ ಪ್ರತ್ಯೇಕವಾಗಿ ಇರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಔದ್ಯೋಗಿಕ ಅಂಶಗಳನ್ನು ಸಮೀಕ್ಷೆಯ ನಮೂನೆಯಲ್ಲಿ ಒಳಗೊಳ್ಳಬೇಕಾಗಿದ್ದು, ಲಂಬಾಣಿ ಸಮುದಾಯಕ್ಕೆ ಸಂಬಂಧಿಸಿದ ವಿಶಿಷ್ಟ ವಿವರಗಳನ್ನು ಸದ್ಯದ ಮಾದರಿಯು ಹಿಡಿದಿಲ್ಲ ಎಂದರು.
ಅನೇಕರು ಕೆಲಸಕ್ಕಾಗಿ ತಾಂಡಾಗಳಿಂದ ಹೊರಗೆ ಹೋಗಿರುವುದರಿಂದ ಸಮೀಕ್ಷೆಗೆ ನಿರ್ಧರಿಸಿದ ಮೇ 5ರಿಂದ 17ರ ಅವಧಿಯಲ್ಲಿ ಎಲ್ಲರ ಮಾಹಿತಿಯೂ ಸಂಗ್ರಹಿಸಲು ಸಾಧ್ಯವಿಲ್ಲ. ಈ ಅವಧಿಯನ್ನು ದೀಪಾವಳಿವರೆಗೆ ವಿಸ್ತರಿಸಲು ಅಥವಾ ಬೇರೆಯವರಿಗೆ ಮಾಹಿತಿ ನೀಡುವ ಅವಕಾಶ ಒದಗಿಸಲು ಸಮಿತಿಯು ಒತ್ತಾಯಿಸಿದೆ. ಇದರಿಂದ ಎಲ್ಲ ಸಮುದಾಯಗಳಿಗೂ ಅನ್ಯಾಯವಾಗುವ ಸಾಧ್ಯತೆ ಇದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರ ಕೂಡಲೇ ಪ.ಜಾತಿಗಳ ಉಪವರ್ಗೀಕರಣ ರಾಜ್ಯ ಸಮೀಕ್ಷೆಯನ್ನು ಕೈಬೀಡಬೇಕೆಂದು ಒತ್ತಾಯಿಸಿದರು.
ಸಮಿತಿಯ ರಾಜ್ಯ ಕಾರ್ಯದರ್ಶಿ ರವಿಕಾಂತ್ ಅಂಗಡಿ, ಖಜಾಂಚಿ ಗಂಗಾ ನಾಯಕ ಗೊಂದಿ, ಕಾರ್ಯಕಾರಿ ಸಮಿತಿ ಸದಸ್ಯರಾದ ರೂಪಾ ನಾಯಕ, ನಂಜ್ಯಾ ನಾಯಕ, ಪಾಂಡು ಚವ್ಹಾಣ ಮುಂತಾದವರಿದ್ದರು.ʻ