ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶ್ರಾವಣ ಮಾಸದ ಕೊನೆಯ ಸೋಮವಾರ ಆ.18ರಂದು ಸಂಜೆ ಶಿರಹಟ್ಟಿ ತಾಲೂಕಿನ ಸುಕ್ಷೇತ್ರ ವರವಿಯಲ್ಲಿ ಕ್ಷೇತ್ರಾಧಿಪತಿ ಶ್ರೀ ಮೌನೇಶ್ವರರ ಮಹಾರಥೋತ್ಸವವು ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಸಂಭ್ರಮದಿಂದ ಜರುಗಿತು.
ರಥೋತ್ಸವದ ನಿಮಿತ್ತ ಬೆಳಿಗ್ಗೆ 6.15ಕ್ಕೆ ಧ್ವಜಾರೋಹಣ, ಬೆಳಿಗ್ಗೆ 9ರಿಂದ 11ರವರೆಗೆ ಹುಬ್ಬಳ್ಳಿಯ ಶಂಕರಾಚಾರ್ಯ ಕಡ್ಲಾಸ್ಕರ ಮತ್ತು ಮುಕುಂದಾಚಾರ್ಯ ಗುರುವಿನ ನೇತೃತ್ವದಲ್ಲಿ ಮಹಾಯಜ್ಞ ನಡೆಯಿತು. ಸಂಜೆ 5.30ರ ಹೊತ್ತಿಗೆ ಮೌನೇಶ್ವರರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯೊಂದಿಗೆ ಭವ್ಯ ಮೆರವಣಿಗೆ ಮೂಲಕ ರಥದ ಬೀದಿಗೆ ತರಲಾಯಿತು. ಸಂಪ್ರದಾಯದಂತೆ ಪೂಜೆಯನ್ನು ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಉತ್ತತ್ತಿ, ಬಾಳೆ ಹಣ್ಣನ್ನು ರಥಕ್ಕೆ ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಗರ್ಭಗುಡಿಯಲ್ಲಿ ವಿಶೇಷವಾಗಿ ಅಲಂಕೃತಗೊಂಡ ಶ್ರೀ ಮೌನೇಶ್ವರರ ಉದ್ಭವಮೂರ್ತಿಯ ದರ್ಶನವನ್ನು ಭಕ್ತರು ಸರತಿ ಸಾಲಿನಲ್ಲಿ ನಿಂತು ಪಡೆದುಕೊಂಡರು. ರಥೋತ್ಸವದಲ್ಲಿ ನಂದಿಧ್ವಜ, ಸಮ್ಮಾಳ, ಡೊಳ್ಳಿನ ಮಜಲುಗಳು ಪಾಲ್ಗೊಂಡಿದ್ದವು. ವರವಿಯ ಶ್ರೀ ಮೌನೇಶ್ವರ ಸ್ವಾಮೀಜಿ ಹಾಗೂ ಶ್ರೀಮಠದ ವಿಕಾಸ ಟ್ರಸ್ಟ್ ನ ಅಧ್ಯಕ್ಷ-ಉಪಾಧ್ಯಕ್ಷರು ಮತ್ತು ಸದಸ್ಯರು, ಗ್ರಾ.ಪಂ ಸದಸ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.