ವಿಜಯಸಾಕ್ಷಿ ಸುದ್ದಿ, ಜೇವರ್ಗಿ: ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಈ ಸುಂದರ ಪರಿಸರದಲ್ಲಿ ಜಗದ್ಗುರುಗಳಾದ ತೋಂಟದ ಡಾ. ಸಿದ್ದಲಿಂಗ ಮಹಾಸ್ವಾಜಿಯನ್ನು ಕಾಣಬೇಕು ಎಂದು ಖ್ಯಾತ ಶಿಕ್ಷಣ ತಜ್ಞರು, ಸಮಾಜ ಸೇವಾ ಭೂಷಣ ಪ್ರಶಸ್ತಿ ಪುರಸ್ಕೃತರು ಹಾಗೂ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ್ ಹೇಳಿದರು.
ಅವರು ಜೇವರ್ಗಿ ನಗರದ ಷಣ್ಮುಖ ಶಿವಯೋಗಿ ರೂರಲ್ ಪಾಲಿಟೆಕ್ನಿಕ್ ಮತ್ತು ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಮೈದಾನದಲ್ಲಿ ಮಾತೃಹೃದಯಿ, ಲಿಂಗೈಕ್ಯ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿ ನೀರು ಉಣಿಸಿ ಬೆಳೆಸಿರುವ ಸಾವಿರಾರು ಸುಂದರ ಹೂವಿನ ಗಿಡಗಳು, ಸಾಗುವಾನಿ, ಶ್ರೀಗಂಧ, ಬಿಲ್ವಪತ್ರೆ ಮರಗಳನ್ನು ವೀಕ್ಷಿಸಿ ಮಾತನಾಡುತ್ತಿದ್ದರು.
ಪೂಜ್ಯರ ಅಂತಃಕರಣ ಅಮೂಲ್ಯವಾದದ್ದು. ಅವುಗಳನ್ನು ಬಣ್ಣಿಸಲು, ವ್ಯಾಖ್ಯಾನಿಸಲು ಪದಗಳಿಲ್ಲ. ನಾಡಿನ ನೆಲ, ಜಲ, ಪರಿಸರದ ಬಗೆಗಿನ ಶ್ರೀಗಳ ಕಾಳಜಿ ಅಮೋಘ. ಇವುಗಳಿಗಾಗಿ ಶ್ರೀಗಳು ತಮ್ಮ ಬದುಕನ್ನು ಮೀಸಲಿರಿಸಿದ್ದರು. ಪೂಜ್ಯರು ಸಮಾಜದ ಕಣ್ಣಾಗಿದ್ದರು. ಮಾನವೀಯತೆಯ ಅಂತಃಕರಣ ಹೊಂದಿದ್ದರು. ಅವರ ದೂರದೃಷ್ಟಿಯ ಮಹಾನ್ ಕೈಂಕರ್ಯದ ಸಾರ ಅನುಪಮವಾದದ್ದು ಎಂದರು.
ಲಿಂ. ಸಿದ್ದಲಿಂಗ ಶ್ರೀಗಳು ಎಲ್ಲರಿಗೂ ಪ್ರೀತಿ ತೋರಿದ್ದಾರೆ. ಶ್ರೀಮಠದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಸೌಹಾರ್ದತೆಯ ಕಣಗಳನ್ನು ಬಿತ್ತಿದ್ದಾರೆ. ಪೂಜ್ಯರ ತತ್ವಾದರ್ಶ ಮೌಲ್ಯದಲ್ಲಿ ನಾವೆಲ್ಲರೂ ಸಾಗೋಣ. ಅವರು ಕಂಡ ಕನಸು ನನಸಾಗಿಸೋಣ. ಆ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರಿದ್ದರು.