ಬೆಂಗಳೂರು:- ಸಂವಿಧಾನ ನಮ್ಮ ಬದಕು, ಉಳಿಸಿಕೊಂಡು ಹೋಗಬೇಕಿದೆ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 76ನೇ ಗಣರಾಜ್ಯೋತ್ಸವದ ಪ್ರಯುಕ್ತವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಧ್ವಜಾರೋಹಣ ಮಾಡಿದ್ದಾರೆ. ಇಂದು ನಮ್ಮ ಸಂವಿಧಾನ ಅನುಷ್ಠಾನ ತಂದ ಪವಿತ್ರ ದಿನ. ಒಕ್ಕೂಟ ವ್ಯವಸ್ಥೆ ಜಾರಿಯಾದ ದಿನ. ಎಲ್ಲರ ಧರ್ಮ, ಜಾತಿ ಒಂದೇ ಎಂದು ಸಾರಿದ ಪವಿತ್ರವಾದ ದಿನವಿದು. ಸಂವಿಧಾನ ನಮ್ಮ ಬದಕು, ಇದನ್ನು ನೆಹರು ನಾಯಕತ್ವದಲ್ಲಿ ಅಂಬೇಡ್ಕರ್ ಅವರಿಗೆ ಜವಾಬ್ದಾರಿ ಕೊಟ್ಟರು. ಸಂವಿಧಾನ ನಮಗೆ ನಾವು ಅರ್ಪಿಸಿದ ದಿನ. ಸಂವಿಧಾನ ಇಲ್ಲದಿದ್ದರೆ ನಮ್ಮ ಪ್ರಜಾಪ್ರಭುತ್ವ ಆತ್ಮ ಇರುತ್ತಿರಲಿಲ್ಲ. ಈ ಸಂವಿಧಾನವನ್ನು ಉಳಿಸಿಕೊಂಡು ಹೋಗಬೇಕಿದೆ ಎಂದು ತಿಳಿಸಿದರು.
ಈ ಪೂರ್ತಿ ವರ್ಷ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಸಮಾವೇಶ ಆಗಬೇಕು. ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಆಗಬೇಕು. ಈ ಸಮಾವೇಶ ಸಂಬಂಧಿಸಿದಂತೆ ಸಂವಿಧಾನ ರಕ್ಷಣೆಗೆ ವ್ಯಾಪಕವಾಗಿ ಚರ್ಚೆ ಆಗಬೇಕು. ಸರ್ಕಾರಿ ಶಾಲಾ ಕಾಲೇಜಿನಲ್ಲಿ ಚರ್ಚೆಯಾಗಬೇಕು. 224 ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಸಲು ತಯಾರಿ ನಡೆಸುತ್ತಿದ್ದೇವೆ. ಸರ್ಕಾರದಲ್ಲಿ ಚರ್ಚೆ ಮಾಡಿ ಕಾರ್ಯಕ್ರಮ ರೂಪಿಸುತ್ತೇವೆ ಎಂದು ಹೇಳಿದರು.