ವಿಜಯಸಾಕ್ಷಿ ಸುದ್ದಿ, ಗದಗ: ನಾಡಿನ ವೀರಶೈವ ಲಿಂಗಾಯತ ಮಠ-ಮಂದಿರಗಳು ಅನ್ನದಾಸೋಹ, ಜ್ಞಾನದಾಸೋಹಕ್ಕೆ ಬಹು ದೊಡ್ಡ ಕೊಡುಗೆ ನೀಡಿವೆ ಎಂದು ಹೊಸಳ್ಳಿಯ ಬೂದೀಶ್ವರ ಸಂಸ್ಥಾನಮಠದ ಜ.ಅಭಿನವ ಬೂದೀಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಮಹಾಸಭಾದ ಗದಗ ಜಿಲ್ಲಾ ಘಟಕ ಏರ್ಪಡಿಸಿದ್ದ ಮಹಾಸಭಾದ ಆಜೀವ ಸದಸ್ಯತ್ವ ಅಭಿಯಾನ ಹಾಗೂ ಸಂಘಟನೆಯ ಬಲವರ್ಧನೆಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅನ್ನ ನೀಡಿದ, ಶಿಕ್ಷಣ ನೀಡಿದ ಲಿಂಗಾಯತ ಮಠಗಳ, ಧರ್ಮಗುರುಗಳ, ಹೆತ್ತವರ ಋಣವನ್ನು ನಾವಿಂದು ತೀರಿಸಬೇಕಿದೆ. ವೀರಶೈವ-ಲಿಂಗಾಯತ ಧರ್ಮ ಎಂಬುದು ಬಹಳ ಸರಳ ಧರ್ಮವಾಗಿದ್ದು, ಧರ್ಮದ ತತ್ವ ಸಂದೇಶಗಳನ್ನು ಪರಿಪಾಲಿಸಬೇಕು. ಎಲ್ಲರೂ ಲಿಂಗವನ್ನು ಧರಿಸಬೇಕು. ಲಿಂಗಪೂಜೆ ಮಾಡಿಕೊಳ್ಳಬೇಕು. ಲಿಂಗ+ಆಯತ= ಲಿಂಗಾಯತ ಎಂಬುದಾಗಿದೆ ಎಂದು ವಿಶ್ಲೇಷಿಸಿದ ಪೂಜ್ಯರು, ನಾವಿಂದು ಗೂಟಾಯರಾಗಿದ್ದೇವೆ ಅಂದರೆ ನಮ್ಮ ಕೊರಳಲ್ಲಿ ಇರಬೇಕಾದ ಲಿಂಗವನ್ನು ಕರಡಗಿ (ಗುಂಡಗಡಗಿ)ಯನ್ನು ಮನೆಯಲ್ಲಿ ನೇತು ಹಾಕಿ ಚಿನ್ನಾಭರಣ ಮಾತ್ರ ಹಾಕಿಕೊಂಡು ಭಸ್ಮ ಧರಿಸದೇ ಮುನ್ನಡೆದಿದ್ದೇವೆ ಎಂದರು.
ವೀರಶೈವ-ಲಿಂಗಾಯತರು ಎಂದಿಗಿಂತ ಇಂದು ಸಂಘಟಿಕರಾಗಬೇಕಿದೆ. ಇಂದು ಎಚ್ಚೆತ್ತುಕೊಳ್ಳದಿದ್ದರೆ ಮುಂದೆಂದಿಗೂ ಹದಗೆಡಬಹುದಾದ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವೇ ಇಲ್ಲ. ಕಾರಣ ಸಮಾಜಬಾಂಧವರು ಬಹಳಷ್ಟು ಗಂಭೀರವಾಗಿ ಚಿಂತನೆ ಮಾಡಿ ಸಂಘಟನೆಗೆ ಮುಂದಾಗಬೇಕು. ಗದಗ ಜಿಲ್ಲೆಯಲ್ಲಿ ವೀರಶೈವ ಮಹಾಸಭಾವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ತಾವೂ ಮಾರ್ಗದರ್ಶನ ಮಾಡಿ ಸಾಥ್ ನೀಡುವದಾಗಿ ಹೇಳಿದರು.
ಸಮ್ಮುಖ ವಹಿಸಿದ್ದ ಅಬ್ಬಿಗೇರಿಯ ಯಲ್ಲಾಲಿಂಗೇಶ್ವರ ಮಠದ ಪೂಜ್ಯ ಬಸವರಾಜ ಬಸವರಡ್ಡೇರ ಸ್ವಾಮೀಜಿ, ಮಹಾಸಭಾದ ರಾಜ್ಯ ಉಪಾಧ್ಯಕ್ಷ ಅಮರೇಗೌಡ ಬಯ್ಯಾಪೂರ, ರಾಜ್ಯ ಕಾರ್ಯಕಾರಿಣಿ ಮಂಡಳಿಯ ಸದಸ್ಯ ಸಂಗನಗೌಡ ಪಾಟೀಲ ಮಹಾಸಭಾದ ಸಂಘಟನೆ ಬಲವರ್ಧನೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾಸಭಾದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಮಾತನಾಡಿದರು. ವೇದಿಕೆಯ ಮೇಲೆ ಸಮಾಜದ ಹಿರಿಯರಾದ ಮಾಜಿ ಸಚಿವ ಎಸ್.ಎಸ್. ಪಾಟೀಲ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶಿವಬಸಯ್ಯ ಗಡ್ಡದಮಠ ಸಂಗಡಿಗರು ಪ್ರಾರ್ಥಿಸಿದರು, ಸುರೇಖಾ ಪಿಳ್ಳೆ ಗಣಸ್ತುತಿ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಮುರುಘರಾಜೇಂದ್ರ ಬಡ್ನಿ ಸ್ವಾಗತಿಸಿ ನಿರೂಪಿಸಿದರು. ಕೊನೆಗೆ ಚನ್ನವೀರಪ್ಪ ಹುಣಶೀಕಟ್ಟಿ ವಂದಿಸಿದರು.
ವೇದಿಕೆಯ ಮೇಲೆ ಜಿಲ್ಲೆಯ ಎಲ್ಲ ತಾಲೂಕು ಘಟಕಗಳ ಅಧ್ಯಕ್ಷ ಕಾರ್ಯದರ್ಶಿಗಳಾದ ಮಹೇಶ ಕೋಟಿ, ಸಂಗಮೇಶ ಕವಳಿಕಾಯಿ, ಅಪ್ಪಣ್ಣ ನಾಯ್ಕರ್, ಅಜಿತಗೌಡ ಪಾಟೀಲ, ಶಿವನಗೌಡ್ರ ಡೋಣಿ, ಸಿದ್ಧನಗೌಡ್ರ ಪಾಟೀಲ, ಅನೀಲಕುಮಾರ ತೆಗ್ಗಿನಕೇರಿ, ಮಲ್ಲಿಕಾರ್ಜುನ ರಡ್ಡೇರ ಉಪಸ್ಥಿತರಿದ್ದರು.
ಮಹಾಸಭಾದ ರಾಜ್ಯ ಅಧ್ಯಕ್ಷ ಶಂಕರ ಬಿದರಿ ಅವರಿಗೆ ಜಿಲ್ಲಾ ಘಟಕ ಸಲ್ಲಿಸಿದ ಬೇಡಿಕೆಯ ಮನವಿಗೆ ಸ್ಪಂದಿಸಿದರು. ತಾಲೂಕಾ, ಜಿಲ್ಲಾ ಘಟಕದ ಪದಾಧಿಕಾರಿಗಳು ಸೇರಿದಂತೆ ಸಮಾಜಬಾಂಧವರು ತಮ್ಮ ದುಡಿಮೆಯ ಶೇ 2ರಷ್ಟನ್ನು ಧರ್ಮ-ಸಮಾಜ ಕಾರ್ಯಕ್ಕೆ ಬಸವ ಜಯಂತಿ ದಿನ ದೇಣಿಗೆ ನೀಡಬೇಕು. ಅಂದು ಸಂಗ್ರಹಗೊಳ್ಳುವ ದೇಣಿಗೆಯ ಶೇ. 50ರಷ್ಟು ಹಣವನ್ನು ತಾವು ನೀಡುವದಾಗಿ ಶಂಕರ ಬಿದರಿ ಹೇಳಿದರು.