ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಮುಹಮ್ಮದ್ ಪೈಗಂಬರ್ ಮನುಕುಲದ ಪ್ರವಾದಿಯಾಗಿ, ಶಾಂತಿದೂತರಾಗಿ ಜಗತ್ತಿಗೆ ನೀಡಿದ ಕೊಡುಗೆಗಳನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಸನಸಾಬ ತಟಗಾರ ಹೇಳಿದರು.
ನಗರದ ರಾಜಾಬಕ್ಷಿ ದರ್ಗಾದ ಬುಕ್ಕಿಟಗಾರ ಹೊಲದಲ್ಲಿ ಡಿಸೆಂಬರ್ ೧೩ರಂದು ನಡೆಯಲಿರುವ ಗೌಸೆ ಆಜಂ ಕಾನ್ಪರೆನ್ಸ್ ಧಾರ್ಮಿಕ ಪ್ರವಚನದ ಪೋಸ್ಟರ್ ಶಾದಿಮಹಲ್ನಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಎಲ್ಲ ಧರ್ಮಗಳನ್ನು ಗೌರವಿಸುವ ಮೂಲಕ ಇವತ್ತು ಸುಂದರ ಸಮಾಜವನ್ನು ನಾವು ಕಟ್ಟಬೇಕಾಗಿದೆ. ಆ ನಿಟ್ಟಿನಲ್ಲಿ ಪಟ್ಟಣದಲ್ಲಿ ಐತಿಹಾಸಿಕ ಕಾರ್ಯಕ್ರಮಕ್ಕೆ ಅಣಿಯಾಗಿದ್ದೇವೆ ಎಂದರು. ಗೌಸೆ ಆಜಂ ಕಾನ್ಫರೆನ್ಸ್ ಕಮಿಟಿಯ ಸದಸ್ಯ ದಾವಲಸಾಬ ತಾಳಿಕೋಟಿ ಮಾತನಾಡಿ, ಈ ಕಾರ್ಯಕ್ರಮಕ್ಕೆ ಜಗತ್ತಿನ ಖ್ಯಾತ ವಾಗ್ಮಿಗಳು, ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ವಂಶಸ್ಥರಾದ ಉತ್ತರಪ್ರದೇಶದ ಸೈಯದ್ ಮುಹಮ್ಮದ್ ಹಾಷ್ಮಿ ಮಿಯಾ ಅವರು ಆಗಮಿಸಿ ಪ್ರವಾದಿಗಳ ಕುರಿತು ಪ್ರವಚನ ನೀಡಲಿದ್ದಾರೆ. ಇಂತಹ ದೊಡ್ಡ ಮಟ್ಟದ ಕಾರ್ಯಕ್ರಮ ಇತಿಹಾಸದಲ್ಲಿಯೇ ಮೊದಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ನಗರದ ಹಾಗೂ ಸುತ್ತಮುತ್ತಲಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಿದರು.
ಧರ್ಮ ಗುರುಗಳಾದ ಯಾಸೀನ ಮೌಲಾನ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೌಲಾನಾ ಖಲೀಲ ಅಹ್ಮದ ಖಾಜಿ, ರಫೀಕ್ ಮೌಲಾನ, ಕಾರ್ಯದರ್ಶಿ ಫಯಾಜ್ ತೋಟದ, ದಾದು ಹಣಗಿ, ನಾಸೀರ ಸುರುಪುರ, ಭಾಷಾ ಮುದಗಲ್ಲ, ಇಮ್ರಾನ್ ಅತ್ತಾರ, ಆರೀಫ್ ಮನಿಯಾರ, ಅಲಿ ಕಿಲ್ಲೆದಾರ, ಪಿ.ಕೆ. ಬಾಗವಾನ, ಎ.ಕೆ. ಕಾತರಕಿ, ಶಾಮೀದಸಾಬ ದಿಂಡವಾಡ, ರಸೂಲಸಾಬ ಆರಗಿದ್ದಿ, ಮೈಬುಸಾಬ ಚಿನ್ನೂರ, ಕೆ.ಸಿ. ಗೋಡೇಕಾರ, ಖಲಂದರ ಡಾಲಯತ, ಆಸೀಫ್, ಸಲೀಂ ಮಾನಿಯಾರ, ಸಲೀಂ ಕೊಪ್ಪಳ ಸೇರಿದಂತೆ ಸಮಾಜ ಭಾಂದವರು ಉಪಸ್ಥಿತರಿದ್ದರು.