ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಹಕಾರ ಇಲಾಖೆ ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್, ಕೆ.ಸಿ.ಸಿ. ಬ್ಯಾಂಕ್ ಧಾರವಾಡ, ಕೆ.ಎಂ.ಎಫ್ ಧಾರವಾಡ, ಗದಗ ಉಪವಿಭಾಗ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಡರಕಟ್ಟಿ ಹಾಗೂ ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕಿನ ಎಲ್ಲಾ ಸಹಕಾರ ಸಂಘ/ಬ್ಯಾಂಕುಗಳ ಸಂಯುಕ್ತ ಆಶ್ರಯದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ರಾಷ್ಟ್ರೀಯ ಸಹಕಾರ ನೀತಿಯ ಪರಿಸರ ವ್ಯವಸ್ಥೆ ಭಾರತದ ಸಹಕಾರ ಸಂಸ್ಥೆಗಳಿಗೆ ರಚನಾತ್ಮಕ ಮಾರ್ಗಸೂಚಿ ದಿನದ ಕಾರ್ಯಕ್ರಮವನ್ನು ಸೋಮವಾರ ಅಡರಕಟ್ಟಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಕಾರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಗ್ರಾಮೀಣ ಉದ್ಯೋಗಕ್ಕೆ ಉತ್ತೇಜನ ನೀಡಿ, ವಿಶೇಷವಾಗಿ ರೈತರು, ಮಹಿಳೆಯರು, ಯುವಕರು, ಮತ್ತು ಸಣ್ಣ ಉದ್ಯಮಿಗಳಿಗೆ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಕ್ಕೆ ಸಹಕಾರ ಸಂಘವು ತನ್ನ ಕೊಡುಗೆಯನ್ನು ನೀಡುತ್ತಿದೆ ಎಂದು ಹೇಳಿದರು.
ಸೋಮೇಶ್ವರ ಸಹಕಾರಿ ನೂಲಿನ ಗಿರಣಿ ಅಧ್ಯಕ್ಷ ಪುಲಕೇಶಿ ಉಪನಾಳ ಮಾತನಾಡಿ, ಗ್ರಾಮೀಣ ಆರ್ಥಿಕ ಚಟುವಟಿಕೆಗಳಿಗೆ, ಸಹಕಾರ ಚಟುವಟಿಕೆಗಳಿಗೆ ಸಹಕಾರ ವಲಯವೇ ಮೂಲಾಧಾರವಾಗಿದೆ. ಗ್ರಾಮೀಣ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಸಹಕಾರ ಕ್ಷೇತ್ರದ ಬೆಳವಣಿಗೆಯನ್ನು ಆಧಾರವಾಗಿಸಿಕೊಂಡು ಕೇಂದ್ರ ಸರ್ಕಾರವು ರಾಷ್ಟ್ರೀಯ ಸಹಕಾರಿ ನೀತಿ-2025ನ್ನು ಅನಾವರಣಗೊಳಿಸಿದೆ ಎಂದು ಹೇಳಿದರು.
ಅಡರಕಟ್ಟಿ ಗ್ರಾಮದ ಹಿರಿಯ ಸಹಕಾರಿಗಳಾದ ಚನ್ನಬಸಪ್ಪ ಹಾದಿಮನಿ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾಂತೇಶ ಹವಳದ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಧರ್ಮಣ್ಣ ಮಹಾದೇವಪ್ಪ ಸಿದ್ದಾಪೂರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಅಡರಕಟ್ಟಿ ಗ್ರಾ.ಪಂ ಅಧ್ಯಕ್ಷೆ ಪ್ರೇಮಾ ಲಮಾಣಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ಮಂಟೂರ, ಎಚ್.ಎ. ಬಂಡೆಣ್ಣವರ, ಶಿರಹಟ್ಟಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಕೆ.ಸಿ. ಕೂಸನೂರಮಠ, ಮಾರಾಟಾಧಿಕಾರಿ ಬಿ.ಆರ್. ನೀಡಗುಂದಿ, ಕೆ.ಸಿ.ಸಿ. ಬ್ಯಾಂಕ್ ಗದಗ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಬ್ಯಾಂಕ್ನ ಮಂಜುನಾಥ ಹೂಗಾರ, ವಿಶ್ವನಾಥ ಲಮಾಣಿ, ಧಾರವಾಡ ಹಾಲು ಒಕ್ಕೂಟದ ಗದಗ ಉಪವಿಭಾಗದ ಡಾ. ಪ್ರಸನ್ನ ಪಟ್ಟೇದ, ವಿಸ್ತರಣಾಧಿಕಾರಿ ಬಸವರಾಜ ಜುಮ್ಮಣ್ಣವರ, ಕಿರಣ ಪಾಟೀಲ ಉಪಸ್ಥಿತರಿದ್ದರು.
ಹಿರಿಯ ಉಪನ್ಯಾಸಕ ಬಸವರಾಜ ಏಣಗಿ, ಜಿಲ್ಲಾ ಆಯುಷ್ ಇಲಾಖೆಯ ಡಾ. ಜಯಪಾಲ್ ಸಿಂಗ್ ಉಪನ್ಯಾಸ ನೀಡಿದರು. ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ನಿಂಗನಗೌಡ ಪಾಟೀಲ ವಂದಿಸಿದರು.
ಕೆ.ಸಿ.ಸಿ. ಬ್ಯಾಂಕ್ ನಿರ್ದೇಶಕ ಜಿ.ವಿ. ಪಾಟೀಲ ಮಾತನಾಡಿ, ಸಂಘದ ಆಡಳಿತ ಮಂಡಳಿ ಸದಸ್ಯರು ಕ್ರಿಯಾಶೀಲರಾಗಿದ್ದು, ಕಾನೂನಾತ್ಮಕವಾಗಿ, ಸಾಮಾಜಿಕವಾಗಿ ತನ್ನ ಸಂಘದ ಸದಸ್ಯರುಗಳಿಗೆ ತನ್ನ ಉಪವಿಧಿಗಳಲ್ಲಿ ಅಳವಡಿಸಿರುವ ಉದ್ದೇಶಗಳಿಗೆ ಗುಣವಾಗಿಯೆ ಸೇವೆಯನ್ನು ನೀಡುತ್ತಿರುವುದು ನಾವೆಲ್ಲರೂ ಹೆಮ್ಮೆ ಪಡುವ ವಿಷಯವಾಗಿದೆ ಎಂದರು.



