
ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಜಗತ್ತಿನ ಯಾವ ಧರ್ಮವೂ ಹಿಂಸಾರೂಪಿಗಳಾಗಲು ಮನುಷ್ಯರನ್ನು ಪ್ರಚೋದಿಸುವುದಿಲ್ಲ ಎಂದು ಪ್ರಗತಿಪರ ಚಿಂತಕ ಬಿ.ಪೀರಭಾಷಾ ಹೇಳಿದರು.
ನಗರದ ಕುಷ್ಟಗಿ ರಸ್ತೆಯ ಶಾದಿಮಹಲ್ನಲ್ಲಿ ಅಂಜುಮನ್ ಇಸ್ಲಾಂ ಕಮಿಟಿ, ಪ್ರಗತಿಪರ, ಕನ್ನಡಪರ, ರೈತಪರ, ಟಿಪ್ಪು ಸುಲ್ತಾನ್ ಕಮಿಟಿ, ಕಟ್ಟಡ ಕಾರ್ಮಿಕ, ಬೀದಿ ಬದಿ ವ್ಯಾಪಾರಸ್ಥರ, ಕೃಷಿ ಕೂಲಿಕಾರ, ಅಂಗನವಾಡಿ, ಬಿಸಿಯೂಟ, ಸಿಐಟಿಯು ಎಸ್.ಎಫ್.ಐ, ಡಿವಾಯ್ಎಫ್ಐ, ಸಂಘಟನೆಗಳ ಜಂಟಿ ಆಶ್ರಯದಲ್ಲಿ ನಡೆದ ಮಹಾತ್ಮ ಗಾಂಧಿಯವರ ಹುತಾತ್ಮ ದಿನ, ಸೌಹಾರ್ದ ಸಂಕಲ್ಪ ದಿನದ ಪ್ರತಿಜ್ಞಾ ವಿಧಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಧರ್ಮದ ದುರುಪಯೋಗ ಮಾಡಿಕೊಳ್ಳುವುದನ್ನೇ ಹುಸಿ ಕರ್ತವ್ಯವಾಗಿ ಮಾಡಿಕೊಂಡ ಕೆಲವರು ದೇಶವನ್ನು ಒಡೆಯುತ್ತಿದ್ದಾರೆ. ಇತ್ತೀಚೆಗೆ ಕೋಮುವಾದಿಗಳು ಸಮಾನತೆಯ ಆಶಯಗಳನ್ನು ಬದಿಗೊತ್ತಿ ಭಾವೋದ್ರೇಕವನ್ನು ಸಹಜವಾಗಿಸುತ್ತಿದ್ದಾರೆ. ದ್ವೇಷದ ಬೆಂಕಿಯಲ್ಲಿ ಭಾರತದ ನೈಜ ಭಾವಕೋಶವನ್ನು ಸುಡುತ್ತಿದ್ದಾರೆ. ನಮ್ಮದು ಸೌಹಾರ್ದ ಭಾರತವೆಂಬ ಮನೋಧರ್ಮಕ್ಕೆ ಧಕ್ಕೆ ತರುತ್ತಿದ್ದಾರೆ. ಇಂತಹ ಸಂಕಟದ ಸನ್ನಿವೇಶದಲ್ಲಿ ಗಾಂಧಿಯವರ ಸೌಹಾರ್ದ ಭಾರತದ ಪರಿಕಲ್ಪನೆ ತುಂಬಾ ಪ್ರಸ್ತುತವಾಗುತ್ತದೆ ಎಂದರು.
ಸಂಗಾತ ಪತ್ರಿಕೆಯ ಸಂಪಾದಕ ಟಿ.ಎಸ್. ಗೊರವರ, ಬಸವರಾಜ ಕೊಟಗಿ, ಎ.ಡಿ. ಕೋಲಕಾರ, ಕಾಲಜ್ಞಾನ ಶ್ರೀ ಶರಣಬಸವ ಸ್ವಾಮೀಜಿ ಮಾತನಾಡಿದರು. ಟೆಕ್ಕದ ದರ್ಗಾದ ನಿಜಾಮುದ್ದಿನಷಾ ಮಕಾನದಾರ ಸೌಹಾರ್ದ ಸಂಕಲ್ಪದಿನದ ಪ್ರತಿಜ್ಞಾವಿಧಿ ಭೋದಿಸಿದರು.
ಇದೇ ವೇಳೆ ಈದಿನ ಡಾಟ್ ಕಾಮ್ನ ನಮ್ಮ ಕರ್ನಾಟಕ ಸ್ಮರಣ ಸಂಚಿಕೆಯನ್ನು ಬಿಡಗಡೆ ಮಾಡಲಾಯಿತು. ಪ್ರಗತಿಪರ ಚಿಂತಕ ಪ್ರೊ. ಬಿ.ಎ. ಕೆಂಚರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ನಿವೃತ್ತ ಶಿಕ್ಷಕ ಬಿ.ಎನ್. ಜಾಲಿಹಾಳ, ಕೃಷಿ ಕೂಲಿಕಾರರ ಸಂಘಟನೆ ಮುಖಂಡ ಬಾಲು ರಾಠೋಡ, ಡಿವಾಚಿ ಎಫ್ಐ ಮುಖಂಡ ದಾವಲಸಾಬ ತಾಳಿಕೋಟಿ, ನಾಸೀರ ಸುರಪುರ, ಓದಸನೂರುಮಠ, ಮೆಹಬೂಬ್ ಹವಾಲ್ದಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೀಲಮ್ಮ ಹಿರೇಮಠ, ಪ್ರಕಾಶ, ಮಾಸುಮಲಿ ಮದಗಾರ, ಚೆನ್ನಪ್ಪ ಗುಗಲೋತ್ತರ, ಬೀದಿಬದಿ ವ್ಯಾಪಾರಸ್ಥರು, ಅಂಗನವಾಡಿ ನೌಕರರು, ವಿದ್ಯಾರ್ಥಿಗಳು, ಕಟ್ಟಡ ಕಾರ್ಮಿಕರು ಪಾಲ್ಗೊಂಡಿದ್ದರು. ಚಂದ್ರು ರಾಠೋಡ ಸ್ವಾಗತಿಸಿದರು. ಫಯಾಜ್ ತೋಟದ ನಿರೂಪಿಸಿದರು.
ಕಾರ್ಮಿಕ ಸಂಘಟನೆ ಮುಖಂಡ ಎಂ.ಎಸ್. ಹಡಪದ ಪ್ರಾಸ್ತಾವಿಕ ಮಾತನಾಡಿ, ಸೌಹಾರ್ದತೆಯನ್ನು ಜೀವಮಾನದುದ್ದಕ್ಕೂ ಪ್ರತಿಪಾದಿಸುತ್ತ ಬಂದ ಗಾಂಧಿಯವರ ಹತ್ಯೆ ಜಗತ್ತನ್ನೇ ತಲ್ಲಣಗೊಳಿಸಿತ್ತು. ಯಾವುದೇ ಧರ್ಮದ ಮೂಲಭೂತವಾದವು ಜೀವಹತ್ಯೆಗೂ ಹಿಂಜರಿಯುವುದಿಲ್ಲ ಎಂಬ ಅರಿವಿಗೊಂದು ಅಮಾನವೀಯ ಸಾಕ್ಷಿಯಾಗಿತ್ತು. ಎಲ್ಲ ಧರ್ಮಗಳ ಮೂಲಭೂತವಾದ ಎಷ್ಟರಮಟ್ಟಿಗೆ ಜೀವ ವಿರೋಧಿಯಾಗಬಲ್ಲದು ಎಂಬ ಕಠೋರ ವಾಸ್ತವವನ್ನು ಮನುಷ್ಯ ಮನಸ್ಸಿನವರೆಲ್ಲ ಅರ್ಥ ಮಾಡಿಕೊಳ್ಳಬೇಕಾದ ಜರೂರು ಅಂದಿಗೂ ಇಂದಿಗೂ ಇದೆ. ನಿಜವಾದ ಧರ್ಮ ಮತ್ತು ಮನೋಧರ್ಮಗಳು ಯಾವತ್ತೂ ಹಿಂಸೆ ಮತ್ತು ಹತ್ಯೆಗಳ ಅಸ್ತçವಾಗುವುದಿಲ್ಲ. ನಾವು ಸೌಹಾರ್ದತೆಯ ಬದುಕನ್ನು ಉಳಿಸಿಬೇಕಿದೆ. ಕೋಮುವಾದಿಗಳಿಂದ ಈ ದೇಶವನ್ನು ರಕ್ಷಣೆ ಮಾಡಬೇಕಿದೆ ಎಂದರು.