ವಿಜಯಸಾಕ್ಷಿ ಸುದ್ದಿ, ಗದಗ: ಭಾರತ-ಪಾಕಿಸ್ತಾನ ನಡುವೆ ಈಗಾಗಲೇ ಸಂಘರ್ಷ ನಡೆದು ಕದನ ವಿರಾಮ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ನಿಂತು ಭಾರತವನ್ನು ರಕ್ಷಣೆ ಮಾಡಿದ ಸೈನಿಕರಿಗಾಗಿ ಗದಗ ಜಿಲ್ಲಾ ಯುವ ಕಾಂಗ್ರೆಸ್ ಘಟಕದಿಂದ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಗದಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ, ಭಾರತ-ಪಾಕಿಸ್ತಾನ ನಡುವೆ ಈಗಾಗಲೇ ಯುದ್ಧ ನಡೆದು ಭಾರತೀಯ ಸೈನಿಕರು ಪಾಕಿಸ್ತಾನದ ಹಲವು ಏರ್ ಬೇಸ್ಗಳನ್ನು ಹಾಗೂ ಉಗ್ರರನ್ನು ಸದೆಬಡಿದಿದ್ದಾರೆ. ಭಾರತೀಯ ಸೈನಿಕರ ಧೈರ್ಯವನ್ನು ನಾವು ಮೆಚ್ಚಬೇಕು. ಅವರ ಪರವಾಗಿ ಇಡೀ ದೇಶವೇ ನಿಂತಿದ್ದು, ಸೈನಿಕರಿಗೋಸ್ಕರ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿರುವುದು ವಿನೂತನ ಕಾರ್ಯಕ್ರಮವಾಗಿದೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, ದಾನದಲ್ಲಿ ರಕ್ತದಾನ ಶ್ರೇಷ್ಠ ದಾನವಾಗಿದೆ. ರಕ್ತದಾನ ಮಾಡುವುದರಿಂದ ಮತ್ತೊಂದು ಜೀವಕ್ಕೆ ಮರುಜನ್ಮ ನೀಡಬಹುದು. ಪ್ರತಿಯೊಬ್ಬರೂ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಜೀವ ಉಳಿಸಲು ಸಹಕರಿಸಬೇಕು. ಸೈನಿಕರಿಗೋಸ್ಕರ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದ್ದು, ಸೈನಿಕರಿಗೆ ರಕ್ತದಾನ ಮಾಡುವುದರಿಂದ ದೇಶ ಸೇವೆಯಲ್ಲಿ ಪರೋಕ್ಷವಾಗಿ ಭಾಗವಹಿಸಿದಂತಾಗುತ್ತದೆ ಎಂದರು.
ಈ ವೇಳೆ ಹಿರಿಯ ಮುಖಂಡರಾದ ಗುರುರಾಜ ಬಳಗಾನೂರ, ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಸವರಾಜ ಅಸೂಟಿ, ತಾಲೂಕಾ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅಶೋಕ ಮಂದಾಲಿ, ಮುಖಂಡರಾದ ಸಿದ್ದಲಿಂಗೇಶ ಪಾಟೀಲ, ಉಮರ್ ಫಾರೂಖ್ ಹುಬ್ಬಳ್ಳಿ, ಎಮ್.ಎನ್. ಶಾಲಗಾರ, ಸರ್ಫರಾಜ್, ಮಹಮ್ಮದ್ ಮುಂತಾದವರು ಉಪಸ್ಥಿತರಿದ್ದರು.