ವಿಜಯಸಾಕ್ಷಿ ಸುದ್ದಿ, ಗದಗ: ಭಾರತವನ್ನು ಜಗತ್ತಿನ 4ನೇ ಶಕ್ತಿಶಾಲಿ ದೇಶವನ್ನಾಗಿ ಮಾಡಿದ ಕೀರ್ತಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಸಲ್ಲುತ್ತದೆ. 2004ರಿಂದ 2014ರ ಅವಧಿಯಲ್ಲಿ ಯುಪಿಎ ಸರಕಾರ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ 5,390 ಕೋಟಿ ರೂ ವ್ಯಯಿಸಿದೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 11 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ರೈಲ್ವೆ ಯೋಜನೆಗಳಿಗೆ ಸರಾಸರಿ 835 ಕೋಟಿ ರೂ., ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಿಗೆ 39,922 ಕೋಟಿ ರೂ. ನೀಡಿದೆ. ಆದರೆ 2014ರಿಂದ ಈವರೆಗೆ ಎನ್ಡಿಎ ಸರಕಾರ ಅಭಿವೃದ್ಧಿಗೆ 14, 685 ಕೋಟಿ ರೂ, ರೈಲ್ವೆ ಯೋಜನೆಗಳಿಗೆ 7813 ಕೋಟಿ ರೂ. ಹಾಗೂ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ 1 ಲಕ್ಷ ಕೋಟಿ ರೂ. ನೀಡಿರುವುದು ಎನ್ಡಿಎ ಸರಕಾರದ ಸಾಧನೆಯಾಗಿದೆ ಎಂದರು.
ಕಳೆದ 11 ವರ್ಷದಲ್ಲಿ ಇಂಗ್ಲೆಂಡ್ 6 ಜನ ಪ್ರಧಾನಿಗಳನ್ನು ಕಂಡಿದೆ. ಇಟಲಿ 5, ಅಮೆರಿಕಾ 4, ಜಪಾನ್ 4, ಕೆನಡಾ 3, ಜರ್ಮನಿ 3, ಫ್ರಾನ್ಸ್ ಇಬ್ಬರು ಪ್ರಧಾನಿಗಳನ್ನು ಕಂಡಿದ್ದರೆ, ಭಾರತ ಸತತ 11 ವರ್ಷಗಳಿಂದ ಮೋದಿ ನೇತೃತ್ವದಲ್ಲಿ ಮುನ್ನಡೆಯುತ್ತಿರುವುದು ವಿಕಸಿತ ಭಾರತ ನಿರ್ಮಾಣಕ್ಕೆ ಕಾರಣವಾಗಿದೆ ಎಂದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನರಗುಂದ ಬೈಪಾಸ್ ನಿರ್ಮಾಮಕ್ಕೆ 128 ಕೋಟಿ ರೂ ಬಿಡುಗಡೆ ಮಾಡಿದ್ದಾರೆ. ಭೂಸ್ವಾಧೀನದ ಶೇ. 50ರಷ್ಟು ಹಣವನ್ನು ರಾಜ್ಯ ಸರಕಾರ ಭರಿಸಬೇಕು. ಆದರೆ ಇದೇ ಮೊದಲ ಬಾರಿಗೆ ಗಡ್ಕರಿ ಅವರು, ನರಗುಂದ ಭಾಗದ ಬೈಪಾಸ್ ನಿರ್ಮಾಣಕ್ಕೆ ಅಗತ್ಯವಾದ ಭೂಸ್ವಾಧೀನಕ್ಕೆ ಶೇ. 100ರಷ್ಟು ಅನುದಾನ ಒದಗಿಸಿ ದಾಖಲೆ ಬರೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಕಾರ್ಯದರ್ಶಿ ಲಿಂಗರಾಜ ಪಾಟೀಲ, ಮುಖಂಡರಾದ ಜಗನ್ನಾಥಸಾ ಭಾಂಡಗೆ, ಶ್ರೀಪತಿ ಉಡುಪಿ, ಎಂ.ಎಂ. ಹಿರೇಮಠ, ರವಿ ದಂಡಿನ್, ಅನಿಲ ಅಬ್ಬಿಗೇರಿ, ಮಹೇಶ ದಾಸರ ಮುಂತಾದವರು ಉಪಸ್ಥಿತರಿದ್ದರು.
ವಿ.ಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಕೇಂದ್ರ ಸರಕಾರ ಗದಗ ಜಿಲ್ಲೆಗೆ ವಿಶೇಷ ಅನುದಾನ ನೀಡಿದೆ. ಅಮೃತ ಸಿಟಿ ಯೋಜನೆಯಡಿ 195 ಕೋಟಿ ರೂ. ನೀಡಿದೆ. ಅದೇ ರೀತಿ ಕೇಂದ್ರ ರಸ್ತೆ ನಿಧಿಗೆ 55 ಕೋಟಿ ರೂ, ಗದಗ ಅಮೃತ ಭಾರತ್ ರೈಲ್ವೆ ನಿಲ್ದಾಣಕ್ಕೆ 23 ಕೋಟಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 3630 ಮನೆಗಳ ಮಂಜೂರಾತಿ ಕೊಟ್ಟಿದೆ. ಸ್ವಚ್ಛಭಾರತ, ಉಜ್ವಲಾ ಯೋಜನೆ, ಜನೌಷಧ ಕೇಂದ್ರಗಳು, ಜಲಜೀವನ್ ಮಿಷನ್ ಇತ್ಯಾದಿ ಯೋಜನೆಗಳನ್ನು ಜಾರಿಗೊಳಿಸಿ ದೇಶದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿದ್ದಾರೆ. ರೈಲ್ವೆ ಮಾರ್ಗದ ವಿದ್ಯುದ್ದೀಕರಣದಲ್ಲಿ ಹೊಸ ದಾಖಲೆ ಬರೆದಿದ್ದಾರೆ ಎಂದರು.