ಲಕ್ಷ್ಮೇಶ್ವರ: ಪ್ರತಿಭೆ ಯಾರ ಸ್ವತ್ತೂ ಅಲ್ಲ, ಅದು ಸಾಧಕನ ಸ್ವತ್ತು ಎಂಬುದಕ್ಕೆ ಲಕ್ಷ್ಮೇಶ್ವರ ಪಟ್ಟಣದ ರೋಹಿಣಿ ಬೆಟಗೇರಿ ಜೀವಂತ ಉದಾಹರಣೆಯಾಗಿದ್ದಾಳೆ. ಹಣ್ಣು ಮಾರುವ ತಂದೆ-ತಾಯಿಯ ಮಗಳಾದ ರೋಹಿಣಿ ಬಡತನದಲ್ಲಿಯೇ ಓದಿ, ಪಿಯುಸಿ ಕಲಾ ವಿಭಾಗದಲ್ಲಿ 600ರಲ್ಲಿ 584 ಅಂಕ (97.33%) ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು ಹೆತ್ತವರ ಹಾಗೂ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾಳೆ.
ರೋಹಿಣಿ ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಶ್ರೀ ವೀರ ಗಂಗಾಧರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಇದೇ ಸಂಸ್ಥೆಯಲ್ಲಿ ಎಸ್ಎಸ್ಎಲ್ಸಿಯಲ್ಲಿ ಶೇ. 95 ಅಂಕ ಪಡೆದಿದ್ದಳು. ಪಿಯುಸಿಯಲ್ಲಿ ಕನ್ನಡ, ಹಿಂದಿ ಮತ್ತು ಭೂಗೋಳಶಾಸ್ತ್ರದಲ್ಲಿ ಶತಕಕ್ಕೆ ಶತಕ ಅಂಕಗಳನ್ನು ಗಳಿಸಿ ತನ್ನ ಪ್ರತಿಭೆ ತೋರಿದ್ದಾಳೆ. ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿಯುಳ್ಳ ಈಕೆ ಉತ್ತಮ ಚಿತ್ರ ಮತ್ತು ಪೇಟಿಂಗ್ ಮಾಡುವಲ್ಲಿಯೂ ನಿಪುಣಳಾಗಿದ್ದಾಳೆ.
ರೋಹಿಣಿಯ ತಂದೆ ಪ್ರಭು ಹಾಗೂ ತಾಯಿ ಕವಿತಾ, ಅಜ್ಜಿ ಸೋಮಕ್ಕ ಲಕ್ಷ್ಮೇಶ್ವರದಲ್ಲಿ ಬಾಳೆಹಣ್ಣು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆಶ್ರಯ ಯೋಜನೆಯಡಿ ದೊರೆತ ಚಿಕ್ಕ ಮನೆಯನ್ನು ಹೊರತುಪಡಿಸಿ ಮತ್ತಾವುದೇ ಆಸ್ತಿ ಇಲ್ಲ. ಹಣ್ಣು ಮಾರಾಟದ ಆದಾಯದಲ್ಲಿಯೇ ಕುಟುಂಬ ನಿರ್ವಹಣೆ ನಡೆಸುತ್ತಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಹಂಬಲವನ್ನು ಪಾಲಕರು ಹೊಂದಿದ್ದಾರೆ.
ಇನ್ನೂ ಈ ಬಗ್ಗೆ ರೋಹಿಣಿ ಮಾತನಾಡಿದ್ದು, ಉತ್ತಮ ಫಲಿತಾಂಶ ಮಾಡಬೇಕು ಎಂಬ ಹಂಬಲದಿಂದ ಪರೀಕ್ಷೆ ಸಮಯದಲ್ಲಿ ಬೆಳಿಗ್ಗೆ ಬೇಗ ಎದ್ದು ಆಸಕ್ತಿಯಿಂದ ಓದುತ್ತಿದ್ದೆ. ಕಾಲೇಜಿನಲ್ಲಿ ಗಮನದಿಂದ ಪಾಠ ಕೇಳುತ್ತಿದ್ದೆ. ಮುಂದೆ ಪದವಿ ಪಡೆದು ಐಎಎಸ್ ಓದಿ ಉನ್ನತ ಹುದ್ದೆ ಪಡೆದು ಸಮಾಜ ಸೇವೆ ಮಾಡುವ ಆಸೆ ಇದೆ. ನನ್ನ ಯಶಸ್ಸಿಗೆ ಪಾಲಕರ ಮತ್ತು ಶಿಕ್ಷಕರ ಪ್ರೋತ್ಸಾಹ ಮುಖ್ಯ ಕಾರಣ ಎಂದಿದ್ದಾರೆ..
ಅದಲ್ಲದೆ ಮಗಳ ಸಾಧನೆ ಬಗ್ಗೆ ರೋಹಿಣಿ ತಂದೆ- ತಾಯಿಯಾದ ಪ್ರಭು, ಕವಿತಾ ಮಾತನಾಡಿದ್ದು, ನಾವು ಬಡತನದ ಕಾರಣದಿಂದ ಪ್ರಾಥಮಿಕ ಶಿಕ್ಷಣವನ್ನೇ ಪೂರ್ಣಗೊಳಿಸಲಾಗಲಿಲ್ಲ. ಆದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ನಮ್ಮ ಕನಸು. ಮಗಳು ಐಎಎಸ್ ಆಗಬೇಕೆಂಬ ಆಸೆ ಹೊಂದಿದ್ದಾಳೆ, ಅವಳ ಕನಸು ಈಡೇರಿಸಲು ನಾವು ದುಡಿಯುತ್ತೇವೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.



