ಸ್ವೇಚ್ಛೆಯ ಆಡಳಿತ ನಡೆಸುವ ಹುನ್ನಾರ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: 18 ಶಾಸಕರನ್ನು ಅಮಾನತು ಮಾಡಿದ ಅಸಂವಿಧಾನಾತ್ಮಕ ನಿರ್ಣಯ, ಕಾನೂನು ಬಾಹಿರವಾಗಿ ಅಲ್ಪಸಂಖ್ಯಾತರಿಗೆ ಕಾಮಗಾರಿ ಗುತ್ತಿಗೆಯಲ್ಲಿ ಶೇ. 4ರಷ್ಟು ಮೀಸಲಾತಿ ನೀಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡಿಸಿ ಭಾರತೀಯ ಜನತಾ ಪಕ್ಷದ ಶಿಗ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಗುರುವಾರ ಶಿಗ್ಲಿಯಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

Advertisement

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಿರಹಟ್ಟಿ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಓಲೈಕೆ ಹಾಗೂ ತುಷ್ಟೀಕರಣದ ರಾಜಕಾರಣ, ಎಸ್‌ಸಿ ಮತ್ತು ಎಸ್‌ಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವುದರ ವಿರುದ್ಧ ಮತ್ತು ಹನಿಟ್ರ‍್ಯಾಪ್ ವಿಷಯಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಹೋರಾಟ ಮಾಡಿದ 18 ಜನ ನಮ್ಮ ಪಕ್ಷದ ಶಾಸಕರನ್ನು ಅಮಾನತು ಮಾಡಿರುವ ಸ್ಪೀಕರ್ ನಡೆ ಖಂಡನೀಯ.

ಕಾಂಗ್ರೆಸ್ ಪಕ್ಷದ ಒತ್ತಡಕ್ಕೆ ಮಣಿದು ಇಂತಹ ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿರುವುದನ್ನು ರಾಜ್ಯದ ಜನತೆ ಅರಿತಿದ್ದಾರೆ. ಕಾಂಗ್ರೆಸ್‌ನವರ ಜನವಿರೋಧಿ ಯೋಜನೆಗಳಿಗೆ ಬಿಜೆಪಿಯವರು ಅಡ್ಡಿಯಾಗುತ್ತಾರೆ ಎಂಬ ಕಾರಣದಿಂದ ಶಾಸಕರನ್ನು ಅಮಾನತು ಮಾಡಿಸಿ ಮನಸೋಇಚ್ಛೆ ಆಡಳಿತ ನಡೆಸುವ ಹುನ್ನಾರ ಮಾಡುತ್ತಿದ್ದಾರೆ. ಸದನದಲ್ಲಿ ಕಾಂಗ್ರೆಸ್ ಪಕ್ಷ ಅನೇಕ ಬಾರಿ ಹದ್ದು ಮೀರಿ ವರ್ತಿಸಿದೆ. ಕಾಂಗ್ರೆಸ್‌ನ ಸುಳ್ಳು ಭರವಸೆ, ಭ್ರಷ್ಟಾಚಾರ, ದುರಾಡಳಿತ, ಅಭಿವೃದ್ಧಿ ಶೂನ್ಯತೆ, ಬೆಲೆ ಏರಿಕೆ ಎಲ್ಲವನ್ನೂ ಗಮನಿಸುತ್ತಿರುವ ರಾಜ್ಯದ ಜನತೆ ಭವಿಷ್ಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ನಿರಂತರ ಹೋರಾಟ ಮಾಡಲಿದೆ ಎಂದರು.

ಶಿರಹಟ್ಟಿ ಮಂಡಲಾಧ್ಯಕ್ಷ ಸುನೀಲ ಮಹಾಂತಶೆಟ್ಟರ, ಅಶೋಕ ಶಿರಹಟ್ಟಿ, ಡಿ.ವೈ. ಹನಗುಂದ, ಗಂಗಾಧರ ಮೆಣಸಿನಕಾಯಿ ಸರ್ಕಾರದ ನಡೆಯನ್ನು ಖಂಡಿಸಿದರು. ಈ ವೇಳೆ ಎಫ್.ಕೆ. ಕಾಳಪ್ಪನವರ, ಸೋಮಣ್ಣ ಡಾಣಗಲ್, ಹೆಚ್.ಎಫ್. ತಳವಾರ, ನೀಲಪ್ಪ ಹತ್ತಿ, ಅನಿಲ ಮುಳುಗುಂದ, ಸಂಜೀವ ದೇಸಾಯಿ, ಕೃಷ್ಣ ಬಿದರಳ್ಳಿ, ಈರಣ್ಣ ಅಕ್ಕೂರ, ಶಿವಾನಂದ ಮುದಗಲ್, ಶಂಭು ಹುನಗುಂದ, ಹುಚ್ಚಪ್ಪ ಹೂಗಾರ, ನಟರಾಜ್ ಪವಾಡದ, ಪರಶುರಾಮ ತಳವಾರ, ಮುತ್ತಣ್ಣ ತೋಟದ, ಮನೋಜ್ ರಗಟಿ, ಮಹಾಂತೇಶ ತಳವಾರ, ಎಸ್.ವಿ. ಹರ್ತಿ, ವಿಶಾಲ್ ಬಟಗುರ್ಕಿ, ಬಸವರಾಜ ಬೆಳಗಟ್ಟಿ, ಬಸವರಾಜ ಕರ್ಜಗಿ, ಸೋಮು ಬಸರಿ, ಗೂಡಿಸಾಬ ಅನ್ವರ ಸೇರಿದಂತೆ ಶಿರಹಟ್ಟಿ ಮಂಡಲ ವಿವಿಧ ಮೋರ್ಚಾದ ಪದಾಧಿಕಾರಿಗಳು, ಯುವ ಮೋರ್ಚಾ ಸದಸ್ಯರು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಲಕ್ಷ್ಮೇಶ್ವರ ಪುರಸಭೆಯ ಹಿರಿಯ ಸದಸ್ಯನೋರ್ವ ತಾನು ಮಾಡಿದ ಅಧಿಕಾರ ದುರ್ಬಳಕೆಯಿಂದ ಅಮಾನತ್ತಾಗಿದ್ದರೂ ಕೋರ್ಟ್ನಿಂದ ತಡೆಯಾಜ್ಞೆ ತಂದು ಸದಸ್ಯತ್ವ ಉಳಿಸಿಕೊಂಡಿದ್ದಾನೆ. ಆದರೆ ಈ ಸದಸ್ಯ ಜನರಿಗೆ `ಶಾಸಕರ ಸ್ಥಾನವೇ ಅನರ್ಹಗೊಂಡಿದೆ’ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವುದು ದುರ್ದೈವದ ಸಂಗತಿ. ಲಕ್ಷ್ಮೇಶ್ವರದ ಜನತೆಗೆ ಎಲ್ಲವೂ ಗೊತ್ತಿದೆ. ಸುಳ್ಳು ಹೇಳುವುದರಿಂದ ಏನೂ ಪ್ರಯೋಜನವಿಲ್ಲ.

– ಡಾ. ಚಂದ್ರು ಲಮಾಣಿ.

ಶಾಸಕರು, ಶಿರಹಟ್ಟಿ.


Spread the love

LEAVE A REPLY

Please enter your comment!
Please enter your name here