ಗದಗ:- ಇಲ್ಲಿನ ಬೆಟಗೇರಿ ಹೊರವಲಯದಲ್ಲಿ ಪ್ರತಿವರ್ಷ ಸಂಪ್ರದಾಯ ಬದ್ಧವಾಗಿ ಆಚರಿಸುವ ದಂಡಿನ ದುರ್ಗಮ್ಮ ಜಾತ್ರೆ ಇಂದಿನಿಂದ ಪ್ರಾರಂಭವಾಗಿದೆ. ಜಾತ್ರೆಗೆ ರಾಜ್ಯ ಹಾಗೂ ಅಂತರಾಜ್ಯದಿಂದ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದು, ಕಳ್ಳರ ಬಗ್ಗೆ ಜಾಗೃತಿ ವಹಿಸುವಂತೆ ಗದಗ ಬೆಟಗೇರಿ ನಗರದ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ.
ಪೊಲೀಸ್ ಪ್ರಕಟಣೆಯಲ್ಲಿ ಏನಿದೆ?
ಬೆಟಗೇರಿ ಹೊರವಲಯದಲ್ಲಿ ಇಂದಿನಿಂದ ದಂಡಿನ ದುರ್ಗಮ್ಮ ಜಾತ್ರೆ ಪ್ರಾರಂಭವಾಗಿರುವುದರಿಂದ ರಾಜ್ಯ ಹಾಗೂ ಅಂತರಾಜ್ಯದಿಂದ ಅಪಾರ ಸಂಖ್ಯೆಯಲ್ಲಿ ಜನತೆ ಆಗಮಿಸಲಿದ್ದಾರೆ. ಕೆಲವರಿಗೆ ಜಾತ್ರೆ ಸಮಯದಲ್ಲಿ ಏನಾದರೂ ಕಳ್ಳತನ ಮಾಡಿದರೆ ಒಳ್ಳೆಯದಾಗುತ್ತೆ ಎಂಬ ನಂಬಿಕೆ ಇರುವುದರಿಂದ ಅವರು ಕಳ್ಳತನ ಮಾಡುವ ಸಂಭವ ಹೆಚ್ಚು. ಹಾಗಾಗಿ ಎಲ್ಲರೂ ತಮ್ಮ- ತಮ್ಮ ಮನೆಗಳಿಗೆ ಹೊರಗಡೆ ಹೋಗುವಾಗ ಹಾಗೂ ಬೇರೆ ಊರಿಗೆ ಹೋಗುವ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಗೆ ಹಾಗೂ ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿ ಹೋಗತಕ್ಕದ್ದು. ಬೆಲೆಬಾಳುವ ವಸ್ತುಗಳ ಬಗ್ಗೆ ಮತ್ತು ಹೊರಗಡೆ ನಿಲ್ಲಿಸಿದ ಬೈಕ್ ಬಗ್ಗೆ ಕಾಳಜಿ ಇರಲಿ.
ಇನ್ನೂ ಅಂಗಡಿ ಮುಗ್ಗಟ್ಟುಗಳ ವ್ಯಾಪಾರಸ್ಥರು ಬೆಲೆಬಾಳುವ ವಸ್ತುಗಳ ಬಗ್ಗೆ ಸೂಕ್ತ ನಿಗಾ ವಹಿಸಬೇಕು. ಹಾಗೇನಾದ್ರೂ ನಿಮಗೆ ಅನುಮಾನಾಸ್ಪದವಾಗಿ ಯಾರಾದರೂ ಕಂಡು ಬಂದರೆ ಜಿಲ್ಲೆಯ ಆಯಾ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಬೇಕು ಹಾಗೂ ERSS-112ಗೆ ಕರೆ ಮಾಡಲು ಗದಗ ಜಿಲ್ಲಾ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.