ವಿಜಯಸಾಕ್ಷಿ ಸುದ್ದಿ, ಗದಗ: ನವರಾತ್ರಿ ಹಬ್ಬ ನಮಗೆಲ್ಲಾ ನವಶಕ್ತಿಯನ್ನು ತುಂಬುವ ಹಬ್ಬ. ದುರ್ಗೆ, ಕಾಳಿ, ಅಂಬಾಭವಾನಿ ಮೊದಲಾದ ದೇವಿಯರೆಲ್ಲ ಶಿವನಿಂದ ಶಕ್ತಿ ಪಡೆದು ಅಸುರರನ್ನು ಸಂಹರಿಸಿದ ಕಥೆಗಳಿವೆ. ಇಲ್ಲಿ ಅಸುರರು ಅಂದರೆ ನಮ್ಮ ಒಳಗಿರುವ ಶತ್ರುಗಳು. ಇವುಗಳನ್ನು ನಾಶ ಮಾಡುವುದು ಅಷ್ಟು ಸುಲಭವಲ್ಲ. ಒಳಗಿರುವ ವಿಕಾರಿ ಗುಣಗಳೆನ್ನುವ ರಾಕ್ಷಸರನ್ನು ಸುಟ್ಟು ಹಾಕಬೇಕಾದರೆ ಯೋಗಾಗ್ನಿಯಿಂದ ಮಾತ್ರ ಸಾಧ್ಯ. ಆದ್ದರಿಂದ ನಾವೆಲ್ಲರೂ ಶಿವಶಕ್ತಿಯರಾಗೋಣ. ಅಲ್ಪಕಾಲದ ಜೀವನದಲ್ಲಿ ಸದಾಕಾಲದ ಸುಖ, ಶಾಂತಿ ಪಡೆಯೋಣ ಎಂದು ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಸಂದೇಶ ನೀಡಿದರು.
ನವರಾತ್ರಿ ಪ್ರಯುಕ್ತ ಅಧ್ಯಾತ್ಮಿಕ ಸಂಸ್ಕೃತಿ ಭವನ, ಸಿದ್ಧರಾಮೇಶ್ವರ ನಗರ ಹಾಗೂ ಬೆಟಗೇರಿಯ ಹಳೇ ಬನಶಂಕರಿ ದೇವಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಚೈತನ್ಯ ದೇವಿಯರ ದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜೇಂದ್ರ ಫಕೀರಪ್ಪ ಭರದ್ವಾಜ, ಬಸಪ್ಪ ಗುತ್ತಿ, ವಿಷ್ಣು ಶಂಕರಪ್ಪ ಅಸುಂಡಿ, ದೇವೆಂದ್ರಪ್ಪ ಚೂರಿ, ಬಿ.ಕೆ. ರೇಖಾ, ಬಿ.ಕೆ. ಸಾವಿತ್ರಿ ಮುಂತಾದವರು ಇದ್ದರು.