ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಜಗತ್ತಿನಲ್ಲಿ ಬೆಲೆಕಟ್ಟಲು ಸಾಧ್ಯವಾಗದಿರುವುದು ಏನಾದರೂ ಇದ್ದರೆ ಅದು ‘ಅವ್ವ’. ಅಂತಹ ಅವ್ವನನ್ನು ನೆನೆಯುವ ಕಾರ್ಯಕ್ರಮ ಅತ್ಯಂತ ಶ್ರೇಷ್ಠ ಹಾಗೂ ಮಹತ್ವದ್ದು ಎಂದು ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ಪೀಠಾಧೀಶರಾದ ಅನ್ನದಾನೀಶ್ವರ ಪೂಜ್ಯರು ಅಭಿಪ್ರಾಯಪಟ್ಟರು.
ಅವರು ಅವ್ವ ಸೇವಾ ಟ್ರಸ್ಟ್ ಹಾಗೂ ಜ.ಅ.ವಿದ್ಯಾ ಸಮಿತಿಯು ಜೂನ್ 11ರಂದು ಆಯೋಜಿಸಿರುವ ಅವ್ವನನ್ನು ಕುರಿತ ವಿಶೇಷ ಶಿವಾನುಭವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.
ಅವ್ವ ಸೇವಾ ಟ್ರಸ್ಟ್ ಗದಗ ಜಿಲ್ಲಾ ಸಂಚಾಲಕರಾದ ಡಾ.ಬಸವರಾಜ ಧಾರವಾಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿಯ ಜಗದ್ಗುರು ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ, ಶಿವಾನುಭವ ಸೇವಾ ಸಮಿತಿ, ಅಕ್ಕನ ಬಳಗ, ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠ ಹಾಗೂ ಅವ್ವ ಸೇವಾ ಟ್ರಸ್ಟ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಇವರ ಸ್ಮರಣಾರ್ಥ ಜೂ.11ರಂದು ಬೆಳಗ್ಗೆ 11 ಗಂಟೆಗೆ 1831ನೇ ಶಿವಾನುಭವ, ‘ಅವ್ವ’ನನ್ನು ಕುರಿತು ವಿಶೇಷ ಉಪನ್ಯಾಸ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳವರು ಸಾನ್ನಿಧ್ಯ ವಹಿಸುವರು. ಡಾ. ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಘನ ಉಪಸ್ಥಿತಿ ವಹಿಸುವರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಅವ್ವ ಸೇವಾ ಟ್ರಸ್ಟ್ ಕಾರ್ಯದರ್ಶಿ ಶಶಿ ಸಾಲಿ, ಗದಗ ಜಿಲ್ಲಾ ಸಂಚಾಲಕ ಡಾ.ಬಸವರಾಜ ಧಾರವಾಡ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ, ಸಾ.ಶಿ. ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರಡಿ ಮುಖ್ಯಅತಿಥಿಗಳಾಗಿ ಭಾಗವಹಿಸುವರು.
ಈ ವೇಳೆ ಡಿಜಿಪಿ ಪ್ರಶಂಸನಾ ಪದಕ ಪಡೆದ ಗದಗ ಎಸ್ಪಿ ಬಿ.ಎಸ್. ನೇಮಗೌಡ, ಜಾಫರ್ ಬಚ್ಚೇರಿ, ದಾನಿಗಳಾದ ಕಮಲಮ್ಮ ಪಾಟೀಲ, ನಿವೃತ್ತ ಪ್ರಾ. ಎಸ್.ಆರ್. ಚಿಗರಿ, ಪ್ರಾ. ಡಿ.ಸಿ. ಮಠ, ಡಿ.ಟಿ. ಪಾಟೀಲ ಅವರಿಗೆ ಗೌರವ ಸಮರ್ಪಣೆ ನಡೆಯುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಜ.ಅ.ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ, ಎಸ್.ಎಂ. ಅಗಡಿ, ಎಸ್.ಎಸ್. ಗಡ್ಡದ, ಎಂ.ಎಚ್. ಪೂಜಾರ, ಎಸ್.ಜಿ. ಕೋಲ್ಮಿ, ಎಸ್.ಬಿ. ಗಿಂಡಿಮಠ, ಹಾಲಯ್ಯ ಹಿರೇಮಠ, ಕೊಟ್ರಯ್ಯ ಹಿರೇಮಠ ಇತರರು ಇದ್ದರು.
ವಿಶೇಷ ಶಿವಾನುಭವ ಕಾರ್ಯಕ್ರಮದಲ್ಲಿ 2025ರ ಮಾರ್ಚ್ ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಶ್ರೀ ಜ.ಅ.ವಿದ್ಯಾ ಸಮಿತಿ ಅಂಗ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಅವ್ವನ ಹೆಸರಿನಲ್ಲಿ ಸಮಾಜಸೇವೆಗೆ ಸಮರ್ಪಿಸಿಕೊಂಡ ಸಭಾಪತಿ ಬಸವರಾಜ ಹೊರಟ್ಟಿಯವರ ನೇತೃತ್ವದ ಅವ್ವ ಸೇವಾ ಟ್ರಸ್ಟ್ ದಶಕಗಳಿಂದ ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನೇಕರ ಬಾಳಿಗೆ ಬೆಳಕಾಗಿದೆ ಎಂದು ಶ್ರೀ ಅನ್ನದಾನೀಶ್ವರ ಪೂಜ್ಯರು ತಿಳಿಸಿದರು.