ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದಲ್ಲಿ ಶ್ರಾವಣದ ಕೊನೆಯ ಸೋಮವಾರದಂದು ವೀರಭದ್ರೇಶ್ವರ ದೇವರ ಉಚ್ಚಾಯ ತೇರು ನೂರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದೊಂದಿಗೆ ಜರುಗಿತು. ಜಾತ್ರೆಯ ಅಂಗವಾಗಿ ಬೆಳಗಿನ ಜಾವದಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು, ಮಹಾ ರುದ್ರಾಭಿಷೇಕ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಅನ್ನದಾಸೋಹ ನಡೆಯಿತು.
ಸಂಜೆ 5.30ಕ್ಕೆ ಶ್ರೀ ಕಲ್ಮೇಶ್ವರ ದೇವಸ್ಥಾನದಿಂದ ನಂದಿಕೋಲ ತರಲಾಯಿತು. ನಂತರ ಗ್ರಾಮದ ಶಿವಶರಣರಾದ ಅಣ್ಣಯ್ಯ-ತಮ್ಮಯ್ಯನವರ ಮನೆಯಿಂದ ಕಳಸವನ್ನು ತಂದು ಪೂಜಿಸಿ ತೇರಿಗೆ ಜೋಡಿಸಲಾಯಿತು. ಸಂಜೆ 6 ಗಂಟೆಗೆ ಪೂಜೆ ಸಲ್ಲಿಸಿದ ಬಳಿಕ ತೇರು ಎಳೆಯಲು ಚಾಲನೆ ನೀಡಲಾಯಿತು. ಗ್ರಾಮದ ಪ್ರಮುಖ ಬೀದಿಗಳಾದ ಗಾಂಧಿ ಸರ್ಕಲ್, ಶ್ರೀಹನುಮಂತ ದೇವರ ಗುಡಿ, ಸಂಗಮೇಶ್ವರ ಗುಡಿ ಮೂಲಕ ಕಲ್ಮೇಶ್ವರ ದೇವಸ್ಥಾನವರೆಗೆ ಸಂಚರಿಸಿತು.
ಈ ವೇಳೆ ಕೆಲವು ಭಕ್ತರು ದೇಹದ ವಿವಿಧ ಕಡೆಗಳಲ್ಲಿ ಶಸ್ತç ಚುಚ್ಚಿಕೊಂಡರು. ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಸ್ಥಾನಕ್ಕೆ ತಳಿರು-ತೋರಣಗಳನ್ನು ಕಟ್ಟಿ ಅಲಂಕರಿಸಲಾಗಿತ್ತು.



