ವಿಜಯಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಪ್ರಾರಂಭದ ರೈತರ ಮೊದಲ ಹಬ್ಬ ಕಾರಹುಣ್ಣಿಮೆಯನ್ನು ಬುಧವಾರ ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ರೈತ ಸಮುದಾಯದವರು ವಿಜೃಂಭಣೆಯಿಂದ ಆಚರಿಸಿದರು.
ಉತ್ತಮ ಮುಂಗಾರು ಮಳೆ-ಬೆಳೆಗಾಗಿ ಆಚರಿಸುವ ಈ ಹಬ್ಬದ ದಿನ ಬೆಳಿಗ್ಗೆ ಎತ್ತುಗಳ ಮೈ ತೊಳೆದು ಎಳ್ಳೆಣ್ಣೆ, ಮಜ್ಜಿಗೆ, ಅರಿಶಿಣ ಪುಡಿ, ಉಪ್ಪು, ತತ್ತಿಯನ್ನು ಗೊಟ್ಟ ಹಾಕುತ್ತಾರೆ. ಇದು ತಮ್ಮ ಜೀವನಾಡಿ ಎತ್ತುಗಳಿಗೆ ಯಾವುದೇ ರೋಗರುಜಿನಾದಿಗಳು ತಗುಲದಿರಲೆಂದು ಮಾಡುವ ಪದ್ಧತಿ. ಬಳಿಕ ಎತ್ತುಗಳ ಕೋಡುಗಳಿಗೆ ಬಣ್ಣ ಹಚ್ಚಿ ಕೋಡಿನ ತುದಿಗೆ ತಾಮ್ರದ ಕೊಂಬೆಣಸು ಹಾಕಿ ರಿಬ್ಬನ್, ಬಲೂನ್ ಕಟ್ಟಿ ಶೃಂಗರಿಸಲಾಗಿತ್ತು.
ಗೋಧೂಳಿ ಸಮಯದಲ್ಲಿ ವಿಶೇಷವಾಗಿ ಅಲಂಕಾರ ಮಾಡಿದ ಎತ್ತು, ಹೋರಿಗಳನ್ನು ರೈತರು ಊರ ಅಗಸಿ ರಸ್ತೆಯಲ್ಲಿ ಓಡಿಸುತ್ತಾ ಅದರ ಹಿಂದೆ ತಾವೂ ಓಡಿ ಸಂತದ ಪಟ್ಟರು. ತಮ್ಮ ಎತ್ತುಗಳ ಮೈಮೇಲೆ ರಾಮದೂತ, ಭೂಮಿತಾಯಿ ಚೊಚ್ಚಲ ಮಗ, ಪುಣ್ಯಕೋಟಿ, ಮನೆದೇವ್ರು, ರಾಜಕುಮಾರ, ಒಡಹುಟ್ಟಿದವರು, ಮುಂಗಾರು ಮಳೆ, ನಮ್ಮ ಬಸವ ಹೀಗೆ ಬರೆದು ತಮ್ಮ ಪ್ರೀತಿ ಮೆರೆದರು. ಯಾವ ಎತ್ತುಗಳು ಮೊದಲು ಕೊಬ್ಬರಿ ಸರ ಹರಿದು ಮುಂದೆ ಓಡುತ್ತವೆಯೋ ಆ ಎತ್ತುಗಳು ಕರಿ ಹರಿದಂತೆ. ಇದು ಈ ಹಬ್ಬ ಮಾಡುವುದು ಸಂಪ್ರದಾಯ. ಬಿಳಿ ಎತ್ತು ಕರಿ ಹರಿದರೆ ಹಿಂಗಾರು ಉತ್ತಮ ಎಂತಲೂ, ಕರಿ ಎತ್ತು ಕರಿ ಹರಿದರೆ ಮುಂಗಾರು ಉತ್ತಮ ಎಂತಲೂ ಭಾವಿಸುತ್ತಾರೆ.
ಲಕ್ಷ್ಮೇಶ್ವರದಲ್ಲಿ ದೇಸಾಯಿಬಣ, ಹುಲಗೇರಿ ಬಣ, ಪೇಠಬಣ, ಹಿರೇಬಣದ ಅಗಸಿ ಬಾಗಿಲಲ್ಲಿ ಕರಿ ಹರಿಯುವ ಹಬ್ಬ ಆಚರಿಸಲಾಯಿತು. ನಂತರ ಪಟ್ಟಣದ ಆರಾಧ್ಯದೈವ ಸೋಮೇಶ್ವರನ ಸನ್ನಿಧಿಯಲ್ಲಿ ಮುಳಗುಂದ ಮನೆತನದ ಬಿಳಿ ಎತ್ತು ಕರಿ ಹರಿಯಿತು. ಎತ್ತು ಓಡಿಸುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ರೈತರು, ಯುವಕರು, ಮಕ್ಕಳು ಸೇರಿದ್ದರು. ಕರಿ ಹರಿದ ಎತ್ತುಗಳ ಜತೆ ನೂರಾರು ಎತ್ತುಗಳನ್ನು ಸೇರಿಸಿ ಸಂಜೆ ಸೋಮೇಶ್ವರ ತೇರಿನಮನೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾಧ್ಯವೈಭವದೊಂದಿಗೆ ಮೆರವಣಿಗೆ ಮಾಡಲಾಯಿತು.