ಹೊಸ ವರ್ಷದ ಆರಂಭದಲ್ಲಿ ಬರುವ ಮೊದಲ ಹಬ್ಬ ಸಂಕ್ರಾಂತಿ. ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಇದರ ಸಂಭ್ರಮ ಇನ್ನೂ ಹೆಚ್ಚು. ತಮ್ಮದೇ ಆದ ರೀತಿಯಲ್ಲಿ, ಪದ್ಧತಿಯಲ್ಲಿ ನಡೆಯುವ ಹಬ್ಬದ ಸಿದ್ಧತೆಗಳು ಆಕರ್ಷಕ. ಅಕ್ಕ ಪಕ್ಕದ ಮನೆಯ ಹೆಂಗಸರು ಒಬ್ಬರನ್ನೊಬ್ಬರು ಕೇಳುತ್ತಾ… ಹಬ್ಬಕ್ಕೆ ಸಿದ್ಧವಾಗುತ್ತಾರೆ. ಎಳ್ಳು-ಬೆಲ್ಲಕ್ಕೆ ಬೇಕೆಂದು ಕಡಲೆಕಾಯಿ ಸುಲಿಯೋದು, ಕೊಬ್ಬರಿ ಕಾಯಿ ಸಣ್ಣದಾಗಿ ಹಚ್ಚೋದು, ಸಕ್ಕರೆ ಅಚ್ಚುಗಳನ್ನು ಮಾಡುವುದು, ಬಿಳಿ ಎಳ್ಳನ್ನು ಹುರಿದು ಅದಕ್ಕೆ ಕಡಲೆ ಬೀಜ, ಕೊಬ್ಬರಿ, ಸಕ್ಕರೆ ಅಚ್ಚುಗಳನ್ನು ಸೇರಿಸಿ ಪ್ಯಾಕೆಟ್ ಮಾಡುವುದು, ಹಬ್ಬದ ದಿನ ಬೆಳಿಗ್ಗೆ ಎದ್ದು, ಮನೆಯಂಗಳದಲ್ಲಿ ಪೊಂಗಲ್ ಉಕ್ಕುತ್ತಿರುವ ರಂಗೋಲಿ ಮತ್ತು ಕಬ್ಬುಗಳ ಚಿತ್ರಗಳ ರಂಗೋಲಿ ಬಿಡಿಸಿ ಬಣ್ಣ ಮತ್ತು ಹೂಗಳಿಂದ ಅಲಂಕಾರ ಮಾಡುತ್ತಾರೆ.
ಮನೆಯ ಹೊಸ್ತಿಲು ಮತ್ತು ದೇವರ ಕೋಣೆಯನ್ನು ಮಾವಿನ ತಳಿರು-ತೋರಣಗಳು ಮತ್ತು ಕಬ್ಬು, ಹೂವುಗಳಿಂದ ಅಲಂಕರಿಸುತ್ತಾರೆ. ಮನೆಯಲ್ಲಿ ಪೂಜೆ ಪುನಸ್ಕಾರ ಮುಗಿಸಿ ಊಟ ಮಾಡುವ ಹೊತ್ತಿಗೆ ಮಧ್ಯಾಹ್ನ ಆಗುತ್ತದೆ. ಸಂಜೆ ವೇಳೆಗೆ ದೇವಸ್ಥಾನಕ್ಕೆ ಹೋಗಿ ಬರುತ್ತಾರೆ. ಅಕ್ಕ ಪಕ್ಕದ ಮನೆಗಳಿಗೆ ಕಬ್ಬು, ಗೆಣಸು, ಅವರೇಕಾಯಿ, ಎಳ್ಳು-ಬೆಲ್ಲ ಕೊಡುವುದರ ಮೂಲಕ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಹೇಳುತ್ತಾರೆ.
ತಮಿಳುನಾಡಿನಲ್ಲಿ ಪೊಂಗಲ್, ಸುಗ್ಗಿ ಹಬ್ಬವೆಂದೂ ಸಂಕ್ರಾಂತಿಯನ್ನು ಕರೆಯುತ್ತಾರೆ. ಮಡಿಕೆಯಲ್ಲಿ ಅಕ್ಕಿ, ಬೇಳೆಯನ್ನು ಬೇಯಿಸಿ ಮಾಡುವ ಪೊಂಗಲ್ ಹಬ್ಬದ ವಿಶೇಷ. ಹೊಸ ಬಟ್ಟೆ ತೊಟ್ಟು ಬಂಧು ಮಿತ್ರರು ಮತ್ತು ಸ್ನೇಹಿತರಿಗೆ ಸಂಕ್ರಾಂತಿಯ ಶುಭಾಶಯ ಹೇಳಿ ಕಬ್ಬು, ಎಳ್ಳು-ಬೆಲ್ಲಗಳ ವಿನಿಮಯ ಮಾಡುವುದು ಹಬ್ಬದ ಆಚಾರ. ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಹಬ್ಬದ ಸಡಗರ ಭೋಗಿ, ಪೊಂಗಲ್, ಮಾಟ್ಟು ಪೊಂಗಲ್, ಕಾಣು ಪೊಂಗಲ್ ಮತ್ತು ಜಲ್ಲಿ ಕಟ್ಟು ಎನ್ನುವ ಗೂಳಿಯನ್ನು ಪಳಗಿಸುವ ಆಟವೂ ನಡೆಯುತ್ತದೆ.
ಹೊಸ ಮಡಿಕೆ, ಹೊಸ ಪಾತ್ರೆಗಳಿಗೆ ಅರಿಶಿನ ಕುಂಕುಮ ಇಟ್ಟು, ಅರಿಶಿನ ದಾರದಲ್ಲಿ ಹಸಿ ಅರಿಶಿನ ಗಡ್ಡೆ ಮಡಿಕೆಗೆ ಕಟ್ಟಿ ಒಲೆಯ ಮೇಲಿಟ್ಟು ಮಡಿಕೆಯಲ್ಲಿ ಅಕ್ಕಿ, ಬೇಳೆ ಮತ್ತು ಹಾಲು, ತುಪ್ಪ, ಬೆಲ್ಲಗಳನ್ನು ಕುದಿಸಿ ಪೊಂಗಲ್ ಉಕ್ಕಿಸಲಾಗುತ್ತದೆ. ಇದು ಶುಭ ಸಮೃದ್ಧಿಯ ಸಂಕೇತವಾಗಿರುತ್ತದೆ. ಗೋಪೂಜೆ ಹೆಚ್ಚು ಜನಪ್ರಿಯ. ವರ್ಷವಿಡಿ ತಮ್ಮ ವ್ಯವಸಾಯ ಕ್ಷೇತ್ರದಲ್ಲಿ ದುಡಿದು ಧಾನ್ಯ ಸಮೃದ್ಧಿಗೆ ಕಾರಣವಾಗುವ ಮತ್ತು ಹಾಲು ನೀಡುವ ಗೋವುಗಳನ್ನು ಸಂಕ್ರಾಂತಿಂದು ಪೂಜಿಸುವ ಮೂಲಕ ಕೃತಜ್ಞತೆ ಅರ್ಪಿಸುವುದು, ಧಾನ್ಯಗಳ ಜೊತೆಗಿರುವ ಕಸ ಕಡ್ಡಿಗಳನ್ನು ಬೇರ್ಪಡಿಸಿ ಹುಲ್ಲು ಕಡ್ಡಿಗಳಿಗೆ ಬೆಂಕಿ ಹಚ್ಚುತ್ತಾರೆ.
ಜಾನುವಾರುಗಳನ್ನು ಕಿಚ್ಚು ಹಾಯಿಸುವ ಮೂಲಕ ಸಂಭ್ರಮ ಆಚರಣೆ ನಡೆಯುತ್ತದೆ. ಪೊಂಗಲ್ ಹಬ್ಬದ ದೀನವೆ ಕೇರಳ ರಾಜ್ಯದಲ್ಲಿ ಮಕರ ಸಂಕ್ರಾಂತಿಯೆಂದು ಶಬರಿಮಲೆಯಲ್ಲಿ ಕಾಣುವ ಮಕರ ಜ್ಯೋತಿ ನೋಡಲು ಅಯ್ಯಪ್ಪ ಭಕ್ತಾದಿಗಳು ಶಬರಿ ಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ಮತ್ತು ಮಕರ ಜ್ಯೋತಿಯ ದರ್ಶನವನ್ನು ಮಾಡುತ್ತಾರೆ.
– ವಿ.ಎಂ.ಎಸ್. ಗೋಪಿ.
ಲೇಖಕರು, ಸಾಹಿತಿಗಳು, ಬೆಂಗಳೂರು.