ಜಾತ್ರೆ ನೆಪದಲ್ಲಿ ಸಾಮಾಜಿಕ ಪರಿವರ್ತನೆ ಮಾಡಿ ಸಾಮರಸ್ಯದ ತೇರು ಎಳೆಯುತ್ತಿದ್ದಾರೆ ಡಂಬಳದ ತೋಂಟದಾರ್ಯ ಮಠದ ತೋಂಟದ ಡಾ. ಸಿದ್ಧರಾಮ ಮಹಾಸ್ವಾಮಿಗಳು. ಮಠದ ಮದರ್ಧನಾರೀಶ್ವರರ 286ನೇ ಜಾತ್ರಾ ಮಹೋತ್ಸವದ ರಥೋತ್ಸವವು ಫೆ. 3ರಂದು ರಥೋತ್ಸವ ಸಂಭ್ರಮದಿಂದ ನಡೆದಿದ್ದು, ಫೆ. 4ರಂದು ಲಘು ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಸಮ ಸಮಾಜಕ್ಕಾಗಿ ಮೌಢ್ಯ, ಅಂಧಕಾರದಲ್ಲಿ ಮುಳಗಿ ಅಜ್ಞಾನದ ಮಡುವಿನಲ್ಲಿರುವ ಸಮಾಜದ ಕೊಳೆ ತೊಳೆಯುವ ನಿಟ್ಟಿನಲ್ಲಿ ತೋಂಟದ ಡಾ. ಸಿದ್ದಲಿಂಗ ಸ್ವಾಮೀಜಿಗಳ ನಂತರ ತೋಂಟದ ಡಾ. ಸಿದ್ಧರಾಮ ಶ್ರೀಗಳು ಅವರು ಜಾತ್ರೆಗೆ ಹೊಸ ಮೆರಗು ನೀಡುವ ನಿಟ್ಟಿನಲ್ಲಿ ವೈಚಾರಿಕತೆಯ ತೇರು ಎಳೆಯಲು ಭಕ್ತರಿಗೆ ಅನುಕೂಲ ಕಲ್ಪಿಸಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಕೋಮು ಸೌಹಾರ್ದತೆ ಮೆರೆದಿರುವ ಎಡೆಯೂರ-ಡಂಬಳ-ಗದಗ ತೋಂಟದಾರ್ಯ ಮಠವನ್ನು ಲಿಂ. ಡಾ. ಸಿದ್ದಲಿಂಗ ಸ್ವಾಮೀಜಿಯವರ ಮಠ ಎಂಬ ಪರಿಕಲ್ಪನೆಗೆ ಹೊಸ ಭಾಷ್ಯ ಬರೆದಿದ್ದರು. ನಂತರ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮಿಗಳು ಇಂಗ್ಲಿಷೇತರ ಭಾಷೆಗಳಿಂದ `ತೌಲನಿಕ ಧರ್ಮದರ್ಶನ’ವನ್ನು ಅನುವಾದ ಮಾಡುವುದರ ಮೂಲಕ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಠಗಳು ಸಾಮಾನ್ಯರ ನೋವು, ನಲಿವುಗಳಿಗೆ ಸ್ಪಂದಿಸಬೇಕು, ದೇಶಕ್ಕೆ ಬಡತನ, ನಿರುದ್ಯೋಗ, ಮತೀಯ ಗಲಭೆಗಳು, ಭಾಷೆ-ಗಡಿ ಸಮಸ್ಯೆಗಳು ಏಕತೆಗೆ ಧಕ್ಕೆ ತರುತ್ತವೆ ಎಂದು ಅರಿತು ಜಾತ್ರೆಗಳಲ್ಲಿ ಸಾಹಿತ್ಯ ಸಮ್ಮೇಳನ, ವಿಚಾರಗೋಷ್ಠಿ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಗಳ ಮೂಲಕ ಜನತೆಯಲ್ಲಿ ಸಮಗ್ರತೆ ಕಾಪಾಡುವ ಕೈಂಕರ್ಯದಲ್ಲಿ ತೋಂಟದಾರ್ಯ ಮಠ ತೊಡಗಿಸಿಕೊಂಡಿದೆ.
ಲಿಂ. ಡಾ. ಸಿದ್ಧಲಿಂಗ ಶ್ರೀಗಳಂತೆ ತೋಂಟದ ಡಾ. ಸಿದ್ಧರಾಮ ಶ್ರೀ ಪೀಠಾರೋಹಣ ಮಾಡಿದ ನಂತರ ಬಸವಣ್ಣನವರ ಸಮಾನತೆಯ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಅಡ್ಡಪಲ್ಲಕ್ಕಿಯಲ್ಲಿ ಸ್ವಾಮಿಗಳು ಮೆರೆಯಬಾರದು, ಮನುಷ್ಯರನ್ನು ಮನುಷ್ಯರು ಹೊರುವುದು ಹೀನ ಕೆಲಸ ಎಂದು ಪಲ್ಲಕ್ಕಿ ತ್ಯಾಗ ಮಾಡಿ, ಪಲ್ಲಕ್ಕಿ ಮುಂದೆ ಪಾದಚಾರಿಗಳಾಗಿ ಸಾಮಾನ್ಯ ಭಕ್ತರ ಮಧ್ಯೆ ಹೋಗುತ್ತಿದ್ದಾರೆ.
ಮೌಢ್ಯ, ಕಂದಾಚಾರ, ಸಮಾಜದ ಅವನತಿಗೆ ಕಾರಣ ಎಂದು ಮನಗಂಡು ಶಿಕ್ಷಣ, ಆರೋಗ್ಯ, ಪರಿಸರ, ನಾಡು ನುಡಿ ಪುಸ್ತಕ ಪ್ರಕಟಣೆ, ಅನ್ನದಾಸೋಹ ಸೇರಿದಂತೆ ಜನಪರ ಕಾರ್ಯ ಕೈಗೊಂಡು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸು ಎಂಬ ಬಸವಣ್ಣವರ ವಾಣಿಯನ್ನು ಸಹಕಾರಗೊಳಿಸಲು ಡಾ. ಸಿದ್ಧರಾಮ ಸ್ವಾಮೀಜಿಯವರು ಕೂಡ ಶಿವಾನುಭವ ಕಾರ್ಯಕ್ರಮಗಳ ಮೂಲಕ ಸಾಹಿತಿಗಳಿಗೆ, ಕಲಾವಿದರಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಿ ಬಸವಣ್ಣವರ ಅನುಭವ ಮಂಟಪದ ಸವಿ ಸಂಭ್ರಮಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ.
ಫೆ. 4ರಂದು ಸಂಜೆ 6.30ಕ್ಕೆ ಲಘು ರಥೋತ್ಸವದಲ್ಲಿ ತೋಂಟದ ಡಾ. ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಪಾಲ್ಗೊಳ್ಳಲಿದ್ದಾರೆ. ಉತ್ತರ ಕರ್ನಾಟಕದ ಗಟ್ಟಿ ಆಹಾರ ರೊಟ್ಟಿ ಜಾತ್ರೆ ರಾತ್ರಿ 8ಕ್ಕೆ ನಡೆಯಲಿದ್ದು, ಹಲವಾರು ಜಿಲ್ಲೆಯ ಜನರು ಕಡಕ್ ರೊಟ್ಟಿ ಸವಿಯಲಿದ್ದಾರೆ.
“ಪರಿಸರದಲ್ಲಿ ಗಾಳಿ, ಮಳೆ, ಸೂರ್ಯನ ಕಿರಣಗಳಿಗೆ ಯಾವುದೇ ಜಾತಿ, ಮತ, ಪಂಥದ ಭೇದವಿಲ್ಲದಂತೆ, ಈ ಮಠದ ಭಕ್ತರು ಕೂಡ ಯಾವುದೇ ಭೇದಭಾವವಿಲ್ಲದೆ ರೊಟ್ಟಿ ತಯಾರಿಸಿ ಎಲ್ಲರೂ ಸೇರಿ ಸವಿಯುತ್ತಾರೆ. ಇದೇ ಭಾವೈಕ್ಯತೆಯ ಸಂದೇಶವನ್ನು ಸಾರುವ ಜಾತ್ಯಾತೀತ ರೊಟ್ಟಿ ಜಾತ್ರೆಯಾಗಿದೆ. ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಇಂತಹ ಆಚರಣೆಗಳು ಮಹತ್ವದ ಪಾತ್ರ ವಹಿಸುತ್ತವೆ”
-
ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು
ಸಂಸ್ಥಾನಮಠ, ಡಂಬಳ-ಗದಗ
“286ನೇ ಜಾತ್ರೆಯನ್ನು ವೈಚಾರಿಕ ವೈಶಿಷ್ಟ್ಯದ ಮೂಲಕ ಜಾತಿ, ಮತ, ಪಂಥ ಭೇದಭಾವ ತೊರೆಯುವ ನಿಟ್ಟಿನಲ್ಲಿ ರೊಟ್ಟಿ ಜಾತ್ರೆಯ ಮೂಲಕ ಸಮ ಸಮಾಜ ಕಟ್ಟಲು ಮತ್ತು ಮಠದಲ್ಲಿ ಮಹಾತ್ಮರ, ದಾರ್ಶನಿಕರ, ಸಂತರ, ಆದರ್ಶ ಮೌಲ್ಯಗಳನ್ನು ಶಿವಾನುಭವಗಳಲ್ಲಿ ನೆನೆದು ಭಕ್ತರ ನೆತ್ತಿಗೆ ಜ್ಞಾನದ ಬುತ್ತಿ ತುಂಬುತ್ತಿರುವ ಪರಮಪೂಜ್ಯ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಾರ್ಯ ಅನನ್ಯವಾದುದು”
-
ಮಿಥುನ (ಸಂಗನಗೌಡ) ಜಿ. ಪಾಟೀಲ
ರೋಣ ಮತಕ್ಷೇತ್ರದ ಗ್ಯಾರಂಟಿ ಸಮಿತಿ ಅಧ್ಯಕ್ಷ
“ಇಂದಿಗೂ ಜಾತಿ ಆಚರಣೆ ಮತ್ತು ಮೌಢ್ಯದ ಹೆಸರಿನಲ್ಲಿ ಜನರನ್ನು ವಿಭಜಿಸುವ ಶಕ್ತಿಗಳ ನಡುವೆ ರೊಟ್ಟಿ ಜಾತ್ರೆಯನ್ನು ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಯೊಂದಿಗೆ ಮುಂದುವರೆಸುತ್ತಿರುವ ಡಾ. ತೋಂಟದ ಸಿದ್ಧರಾಮ ಶ್ರೀಗಳ ಕಾರ್ಯ ಇಂದಿನ ಕಾಲಘಟ್ಟಕ್ಕೆ ಅಗತ್ಯವಾದ ದಿಟ್ಟ ಸಂದೇಶವಾಗಿದೆ”
-
ಬಸುರಡ್ಡಿ ದೇವಪ್ಪ ಬಂಡಿಹಾಳ
ಯುವ ಮುಖಂಡ, ಡಂಬಳ -
ಕೆ.ಆರ್. ದೊಡ್ಡಮನಿ, ಡಂಬಳ



