ವಿಜಯಸಾಕ್ಷಿ ಸುದ್ದಿ, ಗದಗ: ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಾವಧಿಯಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳು ಜರುಗಿ ಜನಪರ ಅರಸನಾಗಿ ಜನಮಾನಸದಲ್ಲಿ ನೆಲೆ ನಿಂತರು. ಕೃಷಿ, ಶಿಕ್ಷಣ ಮತ್ತು ಕೈಗಾರಿಕೆಗಳ ಅಭಿವೃದ್ಧಿಯ ಹಿನ್ನೆಲೆಯ ಮಹತ್ವದ ಕಾರ್ಯಯೋಜನೆಗಳನ್ನು ರೂಪಿಸಿ, ಜಾರಿಗೊಳಿಸಿದರು. ಐಷಾರಾಮಿ ಬದುಕನ್ನು ತೊರೆದು ಜನಮುಖಿ ಕಾರ್ಯ ಮಾಡಿದ ನಾಲ್ವಡಿ ಅರಸರು ಸದಾ ಸ್ಮರಣೀಯರು. ಕನ್ನಡ ನಾಡು-ನುಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ಅಪಾರ ಎಂದು ಶಿರಹಟ್ಟಿಯ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯ ಪ್ರಾಚಾರ್ಯ ಬಿ.ಜಿ. ಗಿರಿತಿಮ್ಮಣ್ಣವರ ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ 141ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕೃಷ್ಣರಾಜ ಒಡೆಯರ ಕೊಡುಗೆ ಕುರಿತು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೆ.ವಿ.ಎಸ್.ಆರ್. ಮಹಾವಿದ್ಯಾಲಯದ ಪ್ರಾಚಾರ್ಯ ವಿ.ಎಸ್. ದಲಾಲಿ ಮಾತನಾಡಿ, ಆಡಳಿತದಲ್ಲಿ ಜನರ ಸಹಭಾಗಿತ್ವ ಇರಬೇಕು ಎಂಬ ಉದೇಶದಿಂದ ಮೈಸೂರು ಸಂಸ್ಥಾನದಲ್ಲಿ ಚಾಮರಾಜ ಒಡೆಯರ ಕಾಲದಲ್ಲಿ ಪ್ರಜಾ ಪ್ರತಿನಿಧಿ ಸಭೆ ಪ್ರಾರಂಭಗೊಂಡಿತು. ನಾಲ್ವಡಿ ಕಾಲದಲ್ಲಿ ಇದು ವಿಸ್ತಾರವಾಗಿ ಬೆಳೆಯಿತು. ಶಿಕ್ಷಣ ಇಲ್ಲದೆ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ನಾಲ್ವಡಿ ಕೃಷ್ಣರಾಜರು ಕಂಡುಕೊಂಡಿದ್ದರು. ಈ ಕಾರಣಕ್ಕಾಗಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಅವರು ಹೆಚ್ಚಿನ ಒತ್ತು ನೀಡಿದರು. ಉಚಿತ ಶಿಕ್ಷಣ ಪ್ರಾರಂಭಿಸಿದರು. ಕನ್ನಡ ನಾಡಿನಲ್ಲಿ ಕನ್ನಡ ಭಾಷೆ, ಕನ್ನಡ ನೆಲ-ನುಡಿಯ ಹಿರಿಮೆಯನ್ನು ಎತ್ತಿ ಹಿಡಿಯಲು ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆ ಬೇಕು ಎನ್ನುವ ಚಿಂತನೆ ಮಾಡಿ ಸ್ಥಾಪಿಸಿದ ಸಂಸ್ಥೆ ಒಂದು ಶತಮಾನ ಕಂಡು ಕನ್ನಡಿಗರ ಹೆಮ್ಮೆಯ ದ್ಯೋತಕವಾಗಿದೆ. 38 ವರ್ಷಗಳ ಕಾಲ ದಕ್ಷ ಆಡಳಿತ ನಡೆಸಿ `ರಾಜರ್ಷಿ’ ಬಿರುದಿಗೆ ಪಾತ್ರರಾದರು ಎಂದು ತಿಳಿಸಿದರು.
ಡಿ.ಎಸ್. ಬಾಪುರಿ ಸ್ವಾಗತಿಸಿದರು. ಜಿಲ್ಲಾ ಗೌರವ ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ ನಿರೂಪಿಸಿದರು. ರಾಹುಲ ಗಿಡ್ನಂದಿ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಾ. ಚಂದ್ರಶೇಖರ ವಸ್ತçದ, ಕೆ.ಎಚ್. ಬೇಲೂರ, ಐ.ಕೆ. ಕಮ್ಮಾರ, ಅಶೋಕ ಬರಗುಂಡಿ, ಪ್ರ.ತೋ. ನಾರಾಯಣಪುರ, ಬಿ.ಎಸ್. ಹಿಂಡಿ, ಬಿ.ಬಿ. ಹೊಳಗುಂದಿ, ಸತೀಶ ಚನ್ನಪ್ಪಗೌಡ್ರ, ರಾಜಶೇಖರ ಕರಡಿ, ಸಿದ್ಧಲಿಂಗೇಶ ಸಜ್ಜನಶೆಟ್ಟರ, ಆರ್.ಡಿ. ಕಪ್ಪಲಿ, ರತ್ನಕ್ಕ ಪಾಟೀಲ, ಎಸ್.ಎಮ್. ಕಾತರಕಿ, ಬಸವರಾಜ ಗಣಪ್ಪನವರ, ಅಮರೇಶ ರಾಂಪೂರ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ನಾಲ್ವಡಿ ಕೃಷ್ಟರಾಜ ಒಡೆಯರು ಅನೇಕ ಪ್ರಥಮಗಳಿಗೆ ಕಾರಣರಾಗಿದ್ದಾರೆ. ರೈತರು ಬದಕನ್ನು ಹಸನಾಗಿಸಲು ಕೃಷ್ಣರಾಜ ಜಲಾಶಯವನ್ನು ನಿರ್ಮಾಣ ಮಾಡಿದರು. ವಿದ್ಯುಚ್ಛಕ್ತಿ ಉತ್ಪಾದನೆ, ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ಉದ್ಯಮಗಳ ಸ್ಥಾಪನೆ ಮೂಲಕ ಸಮಾಜವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಉನ್ನತೀಕರಿಸಲು ಶ್ರಮಿಸಿದರು. ಗ್ರಂಥಕರ್ತರ ನೆರವಿಗಾಗಿ, ಕನ್ನಡ ನಾಡು-ನುಡಿಯ ಬೆಳವಣಿಗೆಗಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ ಕನ್ನಡದ ಸೇವೆಯನ್ನು ಮಾಡಿದರು ಎಂದು ತಿಳಿಸಿದರು.